Get Updates
Get notified of breaking news, exclusive insights, and must-see stories!

ಶೀಘ್ರವೇ ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ನೀರು

ಕೋಲಾರ, ಅಕ್ಟೋಬರ್ 10; "ಕೆ. ಸಿ. ವ್ಯಾಲಿ ಯೋಜನೆ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ 8 ಟಿಎಂಸಿ ಅಡಿ ನೀರನ್ನು ಕೋಲಾರ ಜಿಲ್ಲೆಗೆ ಹರಿಸಲಾಗಿದೆ. ಜಿಲ್ಲೆಯ ರೈತರು ಅಗತ್ಯವಾದ ಭೂಮಿಯನ್ನು ಬಿಟ್ಟು ಕೊಟ್ಟರೆ ಶೀಘ್ರದಲ್ಲಿ ಎತ್ತಿನಹೊಳೆ ನೀರನ್ನು ಜಿಲ್ಲೆಗೆ ಹರಿಸಲಾಗುವುದು" ಎಂದು ಸಣ್ಣ ನೀರಾವರಿ ಸಚಿವ ಜೆ. ಸಿ. ಮಧುಸ್ವಾಮಿ ಹೇಳಿದರು.

ಮುಳಬಾಗಿಲು ತಾಲ್ಲೂಕಿನ ಜಮ್ಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೊಳಲಿ ಕೆರೆ ಪಂಪ್‍ಹೌಸ್‍ನಿಂದ ನೀರನ್ನು ಎತ್ತುವಳಿ ಮಾಡಿ 32 ಕೆರೆಗಳನ್ನು ತುಂಬಿಸುವ ಕಾಮಗಾರಿ ಮತ್ತು ಕೆ. ಸಿ. ವ್ಯಾಲಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

"2 ನೇ ಹಂತದ ಕೆ. ಸಿ. ವ್ಯಾಲಿ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಿ ಜಿಲ್ಲೆಯ ಇತರೆ ಕೆರೆಗಳನ್ನು ತುಂಬಿಸಲಾಗುವುದು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬಬೇಕಾದರೆ ಉಳಿದ ಕೆರೆಗಳಿಗೆ ನೀರು ತುಂಬಿಸಬೇಕು" ಎಂದು ಮಾಧುಸ್ವಾಮಿ ಹೇಳಿದರು.

Kolar Will Get Water From Yettinahole Project Soon Says JC Madhuswamy

"ಕೆ. ಸಿ. ವ್ಯಾಲಿ ನೀರಿಂದ ಯಾವುದೇ ರೀತಿಯ ತೊಂದರೆಯಿಲ್ಲ. ಎಲ್ಲಾ ವಿಧದ ಪರೀಕ್ಷೆಗಳನ್ನು ನಡೆಸಿ ಸಂಸ್ಕರಿಸಿ, ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತಿದೆ. ಈ ನೀರನ್ನು ಕುಡಿಯಬಾರದು. ನೀರನ್ನು ಭೂಮಿಯಲ್ಲಿ ಇಂಗಿಸಿ ನಂತರ ಬೋರ್ ವೆಲ್ ಮೂಲಕ ಹೊರತೆಗೆದು ಬಳಸಬೇಕು. ಕೆರೆಗಳಿಗೆ ಚರಂಡಿ ನೀರನ್ನು ಹರಿಸದೆ ಇಂಗುಗುಂಡಿಗಳ ಮೂಲಕ ಇಂಗಿಸಬೇಕು" ಎಂದು ಸಚಿವರು ಕರೆ ನೀಡಿದರು.

"ಜಿಲ್ಲೆಯ ರೈತರು ಹೆಚ್ಚು ಶ್ರಮಜೀವಿಗಳು. ಹಾಲು, ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಿದರೆ ದೇಶದಲ್ಲಿ ಮೊದಲನೇ ಸ್ಥಾನಕ್ಕೆ ಬರುತ್ತಾರೆ. ಜಿಲ್ಲೆಯಲ್ಲಿ ಹೆಚ್ಚು ಎಫ್. ಇ. ಒ. ಗಳು ಮತ್ತು ಕೋಲ್ಡ್‌ ಸ್ಟೋರೇಜ್‌ಗಳನ್ನು ಸ್ಥಾಪಿಸಿದರೆ ರೈತರು ಬೆಳೆದ ತರಕಾರಿ ಹಣ್ಣುಗಳನ್ನು ದಾಸ್ತಾನು ಮಾಡಿ ರಫ್ತು ಮಾಡಬಹುದು. ಇದರಿಂದ ರೈತರ ಆದಾಯ ದ್ವಿಗುಣವಾಗಿ ಅವರ ಜೀವನ ಅಭಿವೃದ್ಧಿ ಹೊಂದುತ್ತದೆ" ಎಂದು ಸಚಿವರು ಹೇಳಿದರು.

ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ನಾಗೇಶ್ ಮಾತನಾಡಿ, "ಜಿಲ್ಲೆಯ ಪ್ರತಿಯೊಂದು ಕೆರೆಯು ವರ್ಷದ 360 ದಿನಗಳು ತುಂಬಿರಬೇಕು. ಅಂತರ್ಜಲ ವೃದ್ಧಿಸಿ ಜಿಲ್ಲೆಯು ಸದಾ ಹಸಿರುಮಯವಾಗಿರಬೇಕು. ಜಿಲ್ಲೆಯಲ್ಲಿ ಕೆ. ಸಿ. ವ್ಯಾಲಿ ನೀರಿನಿಂದ 121 ಕೆರೆಗಳು ಹಾಗೂ 100 ಚೆಕ್ ಡ್ಯಾಂ ತುಂಬಿದೆ. ಮಳೆಯು ಚೆನ್ನಾಗಿ ಆಗುತ್ತಿರುವುದರಿಂದ ಮತ್ತು ಕೆ. ಸಿ. ವ್ಯಾಲಿ ನೀರಿನಿಂದ ಜಿಲ್ಲೆಯ ರೈತರಿಗೆ ತುಂಬಾ ಅನುಕೂಲವಾಗಿದೆ. ಎರಡನೇ ಹಂತದಲ್ಲಿ 277 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ" ಎಂದರು.

Kolar Will Get Water From Yettinahole Project Soon Says JC Madhuswamy

ಕೋಲಾರ ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, "ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೆ. ಸಿ. ವ್ಯಾಲಿ ಮತ್ತು ಮಳೆಯಿಂದ ಸುಮಾರು ಕೆರೆಗಳು ತುಂಬಿವೆ. ಜಿಲ್ಲೆಯಲ್ಲಿ 2,500 ಕೆರೆಗಳಿವೆ ಕೆ. ಸಿ. ವ್ಯಾಲಿ ಯೋಜನೆಯ 2ನೇ ಹಂತದಲ್ಲಿ ಜಿಲ್ಲೆಯ 277 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ" ಎಂದು ಹೇಳಿದರು.

"ಇಡೀ ಏಷ್ಯಾದಲ್ಲಿಯೇ ದೊಡ್ಡದಾದ ಟೊಮ್ಯಾಟೋ ಮತ್ತು ಮಾವಿನ ಹಣ್ಣಿನ ಮಾರುಕಟ್ಟೆಗಳು ಕೋಲಾರ ಜಿಲ್ಲೆಯಲ್ಲಿವೆ. ಕೆ. ಸಿ. ವ್ಯಾಲಿ ನೀರನ್ನು 400 ಎಂ. ಎಲ್. ಡಿ. ಗಿಂತ ಹೆಚ್ಚಾಗಿ ಜಿಲ್ಲೆಯ ಕೆರೆಗಳಿಗೆ ಹರಿಸಿ ಹಾಗೂ ಮೇಕೆದಾಟು ಯೋಜನೆಯನ್ನು ಪ್ರಾಂಭಿಸಿದರೆ ಬಂಗಾರಪೇಟೆ ಮತ್ತು ಮಾಲೂರು ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ" ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಾ. ವೈ. ಎ. ನಾರಾಯಣಸ್ವಾಮಿ ಮಾತನಾಡಿ, "ಜಿಲ್ಲೆಯಲ್ಲಿ ರೈತರು ಸುಮಾರು ಸಾವಿರ ಅಡಿಗಳಿಂದ ನೀರು ತಂದು ತರಕಾರಿ, ಹಣ್ಣುಗಳನ್ನು ಬೆಳೆದು ವಿವಿಧ ಜಿಲ್ಲೆಗಳಿಗೆ ರಫ್ತು ಮಾಡುತ್ತಿದ್ದಾರೆ. ಜಿಲ್ಲೆಯ ಜನತೆಗೆ ಅನುಕೂಲವಾಗುವಂತೆ ಯರಗೊಳ್ ಡ್ಯಾಮ್, 2ನೇ ಹಂತದ ಕೆ. ಸಿ. ವ್ಯಾಲಿ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಗಳ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ" ಎಂದು ಸಚಿವರಲ್ಲಿ ಮನವಿ ಮಾಡಿದರು.

ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಮಾತನಾಡಿ, "ಜಿಲ್ಲೆಯಲ್ಲಿ ಸುಮಾರು 21 ವರ್ಷಗಳಿಂದ ಕೆರೆಗಳು ತುಂಬಿರಲಿಲ್ಲ ಆದರೆ ಈಗ ಕೆ. ಸಿ. ವ್ಯಾಲಿ ನೀರಿನಿಂದ ಎಲ್ಲಾ ಕೆರೆಗಳು ತುಂಬುತ್ತಿವೆ. ಕೆರೆಗಳು ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದ್ದು ರೈತರಿಗೆ ವ್ಯವಸಾಯ ಮಾಡಲು ತುಂಬಾ ಅನುಕೂಲವಾಗಿದೆ" ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+