ಸಿದ್ದರಾಮಯ್ಯ ಸ್ಫರ್ಧಿಸಿದರೆ 50,000 ಮತಗಳ ಅಂತರದಲ್ಲಿ ಗೆಲ್ಲುತ್ತೇನೆ: ವರ್ತೂರು ಪ್ರಕಾಶ್
ಕೋಲಾರ, ನವೆಂಬರ್ 19: ಕೋಲಾರ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಯಾರೇ ಅಭ್ಯರ್ಥಿಯಾದರೂ ಸಹ ನಾನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ಸಿದ್ದರಾಮಯ್ಯ ಅಥವಾ ಬೇರೆ ಯಾರೇ ಅಭ್ಯರ್ಥಿಯಾದರೂ ಕನಿಷ್ಟ ಆದರೂ ಸಹ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಚುನಾವಣೆಯಲ್ಲಿ ಎಲ್ಲಿ ನಿಲ್ಲಬೇಕು ಎನ್ನುವುದು ಅವರ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಬೇಕು. ನಾನು ಬನ್ನಿ ಅಂತಾನೂ ಹೇಳಲ್ಲ, ಬರಬೇಡಿ ಅಂತಾನೂ ಹೇಳಲ್ಲ ಎಂದು ಹೇಳಿದರು.
ಇನ್ನು ನಮ್ಮದು ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಪಕ್ಷ ನಮ್ಮದು. ಸಂಘಟನೆ, ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ನೋಡಿ ಈ ಕ್ಷೇತ್ರದಲ್ಲಿ ಯಾರನ್ನು ನಿಲ್ಲಿಸಬೇಕು ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಪಕ್ಷ ಯಾರಿಗೆ ಟಿಕಟ್ ಕೊಟ್ಟರೂ ನಾನು ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಕೊಟ್ಟರೆ ನಾನು ಸ್ಫರ್ಧಿಸುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಬಂದಾಗ ಯಾವ ಸಮುದಾಯದವರೂ ಬಂದಿಲ್ಲ
ಇದು ರಾಜಕರಣ ಇಲ್ಲಿ ಜಾತಿ ಬರುವುದಿಲ್ಲ. ಇಲ್ಲಿ ಎಲ್ಲಾ ಸಮುದಾಯದವರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಮೊನ್ನೆ ಸಿದ್ದರಾಮಯ್ಯ ಕೋಲಾರಕ್ಕೆ ಬಂದಿದ್ದರು. ಕುರುಬ ಸಮಾಜ ಇರಬಹುದು, ಒಕ್ಕಲಿಗ ಸಮುದಾಯ ಇರಬಹುದು, ಪರಿಶಿಷ್ಟ ಜಾತಿ ಅವರು ಕಾರ್ಯಕ್ರಮಕ್ಕೆ ಬರಬಹುದು ಎಂದು ಸಿದ್ದರಾಮಯ್ಯ ಬಂದಿದ್ದರು. ಆದರೆ ಯಾರೂ ಕೂಡ ಕಾರ್ಯಕ್ರಮಕ್ಕೆ ಹೋಗಲಿಲ್ಲ. ನನ್ನ ಮೇಲೆ ವಿಶ್ವಾಸ ಇರುವುದಕ್ಕೆ ಅವರು ಯಾರು ಹೋಗಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅಲ್ಲಾ ಯಾರೇ ಈ ಕ್ಷೇತ್ರದಲ್ಲಿ ಸ್ಫರ್ಧಿಸಿದರೂ ಕೂಡ ನಾನು ಸ್ಫರ್ಧೆ ಮಾಡೇ ಮಾಡುತ್ತೇನೆ ಎಂದರು.

ಬಿಜೆಪಿ ಹೊರತು ಪಡಿಸಿ ಬೇರೆ ಯಾವ ಪಕ್ಷವೂ ಬಲಿಷ್ಠವಾಗಿಲ್ಲ
ಬಿಜೆಪಿ ಪಕ್ಷ ಕೋಲಾರದಲ್ಲಿ ಯಾವ ಪಕ್ಷದ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಹೊರತು ಪಡಿಸಿ ಬೇರೆ ಯಾವ ಪಕ್ಷವೂ ಬಲಿಷ್ಠವಾಗಿಲ್ಲ. ನಾವು ಮೂರನೇ ಸ್ಥಾನದಲ್ಲಿ ಅಥವಾ ನಾಲ್ಕನೇ ಸ್ಥಾನದಲ್ಲಿದ್ದಿದ್ದರೆ, ಬೇರೆ ಪಕ್ಷದೊಡನೆ ಕೈಜೋಡಿಸುವ ಬಗ್ಗೆ ಯೋಚನೆ ಮಾಡಬಹುದಿತ್ತು. ಆದರೆ ಇಲ್ಲಿನ ಅಂಕಿ ಅಂಶದ ಪ್ರಕಾರ, ಸರ್ವೇ ಪ್ರಕಾರ, ಜನರ ನಾಡಿಮಿಡಿತದ ಪ್ರಕಾರ ಬಿಜೆಪಿ ಇತರ ಪಕ್ಷಗಳಿಗಿಂತ ಬಹಳ ಮುಂದಿದೆ. ಹೀಗಾಗಿ ಬಿಜೆಪಿ ಯಾವ ಪಕ್ಷದ ಜೊತೆ ಕೈಜೋಡಿಸುವುದಿಲ್ಲ. ಈ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಫರ್ಧಿಸಿ ಗೆಲುವು ಸಾಧಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಶಿಸ್ತಿನ ಸಿಪಾಯಿಯಾಗಿ ತಲೆ ಬಾಗಿ ಕೆಲಸ ಮಾಡುತ್ತೇನೆ
ಇನ್ನು ನಾನು ಬಿಜೆಪಿಗೆ ಸೇರಿ ಒಂದು ವರ್ಷ ಆಗಿದೆ. ಪಕ್ಷ ಏನೇ ತೀರ್ಮಾನ ತೆಗೆದುಕೊಂಡರು ಸಹ, ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ತಲೆ ಬಾಗಿ ಕೆಲಸ ಮಾಡುತ್ತೇನೆ. ಕೇತ್ರದ ಅಭಿವೃದ್ಧಿಗೆ ಪಕ್ಷ ಹಾಗೂ ಸರ್ಕಾರ ಇಬ್ಬರೂ ನನಗೆ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಇವರ ಸಹಕಾರದಿಂದ ಯಾರೇ ಬಂದರೂ ಭಾರತೀಯ ಜನತಾ ಪಕ್ಷ ಗೆಲ್ಲುವುದು ಖಂಡಿತ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರ ವರ್ಚಸ್ಸಿನಿಂದಲೂ ಗೆಲುವು ಸಾಧ್ಯ ಎಂದು ಹೇಳಿದ್ದಾರೆ.

ನಾವು ಅವರ ಗರಡಿಯಲ್ಲಿ ಯುದ್ಧ ಕಲಿತವರಲ್ಲ
ಇನ್ನು ಈ ಹಿಂದೆ ಕೂಡ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವರ್ತೂರು ಪ್ರಕಾಶ್, ನಾನು ಸಿದ್ದರಾಮಯ್ಯ ಶಿಷ್ಯ ಅಲ್ಲ. ಅವರು 1983ರಲ್ಲಿ ವಿಧಾನಸಭೆ ಪ್ರವೇಶ ಮಾಡಿದಾಗ, ನಾನು ಬೆಂಗಳೂರು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಹೊರಗೆ ಬಂದಾಗ ನಾವು ಅವರಿಗೆ ಆಶ್ರಯ ಕೊಟ್ಟಿದ್ದೇವೆ. ನಾವು ಅವರ ಗರಡಿಯಲ್ಲಿ ಯುದ್ಧ ಕಲಿತವರಲ್ಲ. ಚುನಾವಣೆಯಲ್ಲಿ ಆರ್ಥಿಕವಾಗಿ ನಾನು ಸಿದ್ದರಾಮಯ್ಯನವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ಅವರ ಶಿಷ್ಯ ನಾನು ಎನ್ನುವ ಪದವನ್ನು ಯಾರೂ ಬಳಸಬಾರದು ಎಂದಿದ್ದರು.












Click it and Unblock the Notifications