ಕೌಟುಂಬಿಕ ಕಲಹ: ರಾಜ್ಯದ ಪುರಾಣ ಪ್ರಸಿದ್ದ ದೇವಾಲಯ ಮುಜರಾಯಿ ವಶಕ್ಕೆ
ಕೋಲಾರ, ಸೆ 19: ಬಗೆಹರಿಯದ ಕೌಟುಂಬಿಕ ಕಲಹದಿಂದಾಗಿ, ರಾಜ್ಯದ ಪುರಾಣ ಪ್ರಸಿದ್ದ ದೇವಾಲಯವೊಂದನ್ನು ಮುಜರಾಯಿ ವ್ಯಾಪ್ತಿಗೆ ಒಪ್ಪಿಸಿ, ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಜಿಲ್ಲೆಯ ಕೆಜಿಎಫ್ ತಾಲೂಕಿನ, ಕಮ್ಮಸಂದ್ರದಲ್ಲಿರುವ ಕೋಟಿಲಿಂಗೇಶ್ವರ ದೇವಾಲಯವನ್ನು, ಕೆಜಿಎಫ್ ನ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಗೆ ವಹಿಸಿ, ಆದೇಶ ಹೊರಡಿಸಿದೆ.
ದೇವಾಲಯದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯಿದ್ದು, ಯಾವಾಗಲೂ ಭಕ್ತರ ಜನಸಂದಣಿ ಇರುತ್ತದೆ. ಕೋಟಿಲಿಂಗಗಳ ರೂವಾರಿ ಸಾಂಭಶಿವಮೂರ್ತಿ, 2018ರಲ್ಲಿ ವಿಧಿವಶರಾಗಿದ್ದರು. ಇದಾದ ನಂತರ, ದೇವಾಲಯದ ಆಡಳಿತದ ವಿಚಾರದಲ್ಲಿ ಕೌಟುಂಬಿಕ ಕಲಹ ಆರಂಭವಾಗಿತ್ತು.

ಕೋಲಾರದ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ, ಎರಡು ಕುಟುಂಬಗಳ ನಡುವೆ ಮಾತುಕತೆ ನಡೆಸಿ ಸಂಧಾನಕ್ಕೆ ಪ್ರಯತ್ನಿಸಿದ್ದರು. ಆದರೂ, ಟ್ರಸ್ಟಿನ ಕಾರ್ಯದರ್ಶಿ ಕೆ.ವಿ.ಕುಮಾರಿ ಮತ್ತು ಸಾಂಭಶಿವಮೂರ್ತಿಯವರ ಪುತ್ರ ಡಾ.ಶಿವಪ್ರಸಾದ್ ಮಧ್ಯೆ ಮನಸ್ತಾಪ ಮುಂದುವರಿದಿತ್ತು.
ಈ ನಡುವೆ, ಕೆ.ವಿ.ಕುಮಾರಿ, 'ದೇವಾಲಯದ ಆಡಳಿತಾಧಿಕಾರಿ ನಾನು' ಎಂದು ಕೋರ್ಟ್ ಮೆಟ್ಟಲೇರಿದ್ದರು. ಇದಕ್ಕೆ, ಶಿವಪ್ರಸಾದ್ ತಡೆಯಾಜ್ಞೆಯನ್ನು ತಂದಿದ್ದರು. ಇದನ್ನು ರದ್ದು ಪಡಿಸುವಂತೆ, ಜಿಲ್ಲಾಸತ್ರ ನ್ಯಾಯಾಲಯದಲ್ಲಿ ಕುಮಾರಿ, ಮೇಲ್ಮನವಿ ಸಲ್ಲಿಸಿದ್ದರು.
ಎರಡೂ ಕಡೆಯ ವಾದವಿವಾದವನ್ನು ಆಲಿಸಿದ ಕೋರ್ಟ್, ಕೋಲಾರದ ಜಿಲ್ಲಾಧಿಕಾರಿಗಳನ್ನು, ದೇವಾಲಾಯದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಜೊತೆಗೆ, ಕಂದಾಯ ಇಲಾಖೆ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ದೇವಾಲಯದ ಆಡಳಿತ ಮಂಡಳಿಯ ಸದಸ್ಯರನ್ನಾಗಿ ನೇಮಿಸಿದೆ.












Click it and Unblock the Notifications