ಕೋಲಾರದಲ್ಲಿ ಮಕ್ಕಳಿಗೆ ಬೇಗ ಪರೀಕ್ಷೆ ಮುಗಿಸಲು ನಿರ್ಧಾರ
ಕೋಲಾರ, ಮಾರ್ಚ್ 12: ಜಿಲ್ಲೆಯಲ್ಲಿ ಕೊರೊನಾ ಕುರಿತು ಶಿಕ್ಷಣ ಇಲಾಖೆ ಹೈ ಅಲರ್ಟ್ ಆಗಿದ್ದು, ಎಸ್ಸೆಸ್ಸೆಲ್ಸಿ ಹೊರತುಪಡಿಸಿ ಇನ್ನೆಲ್ಲಾ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪರೀಕ್ಷೆ ನಡೆಸಿ ಶಾಲೆಗಳಿಗೆ ರಜೆ ಘೋಷಣೆ ಮಾಡುವುದರೊಂದಿಗೆ ವಿದ್ಯಾರ್ಥಿಗಳನ್ನು ಆತಂಕದಿಂದ ಪಾರುಮಾಡಲು ಮುಂದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರತ್ನಯ್ಯ, "ಈಗಾಗಲೇ ಕೊರೊನಾ ವೈರಸ್ ನಿಂದಾಗಿ ಬೆಂಗಳೂರು ಭಾಗದಲ್ಲಿ ಐದನೇ ತರಗತಿಯವರೆಗೆ ರಜೆ ಘೋಷಣೆ ಮಾಡಿದ್ದಾರೆ. ಕೆಲ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಜಿಲ್ಲೆಯಲ್ಲೂ ಬೇಗ ಪರೀಕ್ಷೆಗಳನ್ನು ನಡೆಸಿ ರಜೆ ಘೋಷಣೆ ಮಾಡಲಾಗುವುದು" ಎಂದರು.
ಕೊರೊನಾ ಎಫೆಕ್ಟ್: ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡಲು ನಿರ್ಧಾರ
ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಮುಂದಿನ 16ನೇ ತಾರೀಕು ಹಾಗೂ ಆರನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 23ನೇ ತಾರೀಕಿನೊಳಗೆ ಪರೀಕ್ಷೆ ನಡೆಸಬೇಕೆಂದು ವೇಳಾಪಟ್ಟಿ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೆಗಡಿ ಹಾಗೂ ಎದೆನೋವು ಕಾಣಿಸಿಕೊಂಡರೆ ಶೀಘ್ರ ವೈದ್ಯರ ಬಳಿ ಕರೆದುಕೊಂಡು ಹೋಗಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಲಾಗಿದ್ದು, ಪೋಷಕರೊಂದಿಗೂ ಸಭೆಗಳನ್ನ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.