25ನೇ ವಯಸ್ಸಿಗೆ ಸಿವಿಲ್ ಕೋರ್ಟ್ನ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಗಾಯತ್ರಿ ಆಯ್ಕೆ
ಕೋಲಾರ ಜನವರಿ 17: 25ನೇ ವಯಸ್ಸಿಗೆ ಕರ್ನಾಟಕ ಹೈಕೋರ್ಟ್ನ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಬಂಗಾರಪೇಟೆ ಮೂಲದ ಎನ್.ಗಾಯತ್ರಿ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕರ್ನಾಟಕ ಉಚ್ಛ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ವೇಳೆ ಗಾಯತ್ರಿ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿದ್ದರು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ ಅವರ ಹೆಸರು ಆಯ್ಕೆ ಪಟ್ಟಿಯಲ್ಲಿ ಪ್ರಕಟಗೊಂಡಿದೆ.
2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ಕರ್ನಾಟಕ ನ್ಯಾಯಾಂಗ ಸೇವಾ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ 25ನೇ ವಯಸ್ಸಿಗೆ ಸಿವಿಲ್ ಕೋರ್ಟ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ತಮ್ಮ ಸತತ ಪರಿಶ್ರಮದ ಮೂಲಕ ಗಾಯತ್ರಿ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಅತ್ಯಂತ ಬಡತನದ ಕುಟುಂಬದಿಂದ ಬಂದಿದ್ದ ಗಾಯತ್ರಿ ಬಾಲ್ಯದಿಂದಲೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಕನಸು ಹೊಂದಿದ್ದರು. ಬಂಗಾರಪೇಟೆಯ ಕಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಧ್ಯಾಭ್ಯಾಸ ಆರಂಭಿಸಿದ ಗಾಯತ್ರಿ ಅವರು ಕಾರಹಳ್ಳಿಯ ಬಾಲಕಿಯ ಪ್ರೌಢಶಾಲೆಯಲ್ಲಿ ಓದಿ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದುಕೊಂಡಿದ್ದರು. ಬಳಿಕ ಕೆಜಿಎಫ್ನ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯಲ್ಲಿ ಕರ್ನಾಟಕಕ್ಕೆ ನಾಲ್ಕನೇ ಶ್ರೇಣಿಯನ್ನು ಪಡೆದುಕೊಂಡು ಉತ್ತೀರ್ಣರಾಗಿದ್ದರು.
ಈ ಮೂಲಕ ಸಂಪೂರ್ಣ ಬಂಗಾರಪೇಟೆಯ ಗಮನ ಸೆಳೆದಿದ್ದ ಗಾಯತ್ರಿ ಇದೀಗ ಹೊಸ ಸಾಧನೆಗೈದು ಎಲ್ಲರ ಗಮನ ಸೆಳೆದಿದ್ದಾರೆ. ಬಂಗಾರಪೇಟೆಯ ನಾರಾಯಣಸ್ವಾಮಿ ವೆಂಕಟಲಕ್ಷ್ಮಿರವರ ಒಬ್ಬಳೇ ಮಗಳಾಗಿದ್ದು, ತೀರಾ ಬಡತನದಲ್ಲಿ ಬೆಳೆದಿದ್ದರು. ಬಾಲ್ಯದಿಂದಲೂ ಸಾಮಾಜಿಕ ಕಾಳಜಿ ಹೊಂದಿದ್ದರು. ಇದೀಗ ಗಾಯತ್ರಿ 25ನೇ ವಯಸ್ಸಿಗೆ ಸಿವಿಲ್ ಕೋರ್ಟ್ನ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ.