Karnataka Assembly election 2023: ಸಿದ್ದರಾಮಯ್ಯರಿಂದ ಜನವರಿ 9ರಂದು ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ, ವೈರಲ್
ಕೋಲಾರ, ಡಿಸೆಂಬರ್, 22; ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಈಗಿನಿಂದಲೇ ರಾಜ್ಯದಲ್ಲಿ ಮೂರು ಪಕ್ಷಗಳಿಂದಲೂ ಭಾರಿ ಕಸರತ್ತುಗಳು ನಡೆಯುತ್ತಿವೆ. ಹಾಗೆಯೇ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಗಳ ವಿಚಾರದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಸ್ವಂತ ಕ್ಷೇತ್ರವನ್ನು ಬಿಟ್ಟು ಮಾಜಿ ಮುಖ್ಯ ಮಾತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಅನ್ನುವುದು ತುಂಬಾ ದಿನಗಳ ಹಿಂದೆಯೇ ಚರ್ಚೆಯಾಗಿತ್ತು. ಇದೀಗ ಇದಕ್ಕೆ ಮತ್ತಷ್ಟು ಹಿಂಬು ನೀಡುವಂತಹ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ, ವೈರಲ್
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇನ್ನು ಕೋಲಾರದಿಂದ ಸ್ಪರ್ಧೆ ವಿಚಾರ ಕುರಿತಂತೆ ಸಿದ್ದರಾಮಯ್ಯನವರು ಜನವರಿ 9 2023ರಂದು ಅಧಿಕೃತ ಘೋಷಣೆ ಮಾಡಲಿದ್ದಾರೆ ಅನ್ನುವ ಸುದ್ದಿ ವೈರಲ್ ಆಗಿದೆ. ಸಿದ್ದರಾಮಯ್ಯ ಕೋಲಾರದಿಂದಲೇ ಸ್ವರ್ಧಿಸುವುದಾಗಿ ಘೋಷಣೆ ಮಾಡುತ್ತಾರೆ ಅನ್ನುವ ಸುದ್ದಿ ಇದೀಗ ಟ್ರೆಂಡ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ವಿಷಯ ಇದೀಗ ಆಪ್ತ ವಲಯ ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಸಿದ್ದರಾಮಯ್ಯ ಜನವರಿ 9, 2023ರಂದು ಕೋಲಾರ ಜಿಲ್ಲೆಗೆ ಆಗಮಿಸಿ ಸ್ಪರ್ಧೆ ವಿಚಾರವಾಗಿ ಘೋಷಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ಸಿದ್ದರಾಮಯ್ಯ ಆಪ್ತ ವಲಯದಿಂದ ಲಭ್ಯವಾಗುತ್ತಿದೆ.
ಕೋಲಾರ ಕ್ಷೇತ್ರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ
2023ರ ವಿಧಾನಸಭೆ ಚುನಾವಣೆಗೆ ಮಾಜಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆ ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದು ಹೋಗಿದ್ದು, ಕೋಲಾರ ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲ ಬಯಸುವವರು 2 ಲಕ್ಷ ಡಿಡಿ ಜೊತೆಗೆ ನವೆಂಬರ್ 21ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಹಾಯಕರ ಮೂಲಕ ಅರ್ಜಿ ಸಲ್ಲಿಸಿದ್ದರು.

ಕುತೂಹಲ ಮೂಡಿಸಿದ ಸಿದ್ದರಾಮಯ್ಯನ ನಡೆ
ಆದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂಬುದು ಇನ್ನೂ ಬಗೆಹರಿದಿಲ್ಲ, ಈ ಮಧ್ಯೆ ಬಾದಾಮಿ, ಕೋಲಾರ ಹಾಗೂ ವರುಣ ಮೂರರಲ್ಲಿ ಒಂದರಿಂದ ಸ್ಪರ್ಧಿಸುತ್ತೇನೆ ಎಂದಿದ್ದರು. ಯಾವುದೆಂದು ಮಾತ್ರ ಖಚಿತಪಡಿಸಿಲ್ಲ, ಆದರೆ ಅವರು ಬಯಸಿರುವ ಒಂದು ಕ್ಷೇತ್ರವಾದ ಕೋಲಾರ ಕ್ಷೇತ್ರಕ್ಕಾಗಿ 6 ಮಂದಿ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದೇ ವಿಶೇಷವಾಗಿದೆ. ಸಿದ್ದರಾಮಯ್ಯ ಪ್ರವಾಸದ ನಂತರ ನವೆಂಬರ್ 14ರಂದು ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಸುದರ್ಶನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಮನೋಹರ್ ಹಾಗೂ ಬೆಂಗಳೂರಿನ ಉದ್ಯಮಿ ಹಾಗೂ ಡಿಕೆ ಶಿವಕುಮಾರ್ ಆಪ್ತರಾಗಿ ಗುರುತಿಸಿಕೊಂಡಿರುವ ಶ್ರೀನಿವಾಸ್ ಅರ್ಜಿ ಸಲ್ಲಿಸಿದ್ದಾರೆ.

ಆದರೆ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವೂ ಕೂಡ, ಮತ್ತಿಬ್ಬರು ಅಕಾಂಕ್ಷಿಗಳು ಕೋಲಾರ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದರು. ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಬೆಂಬಲಿಗರಾದ ನಿವೃತ್ತಿ ಅಬಕಾರಿ ಎಲ್ಎ ಮಂಜುನಾಥ್ ಹಾಗೂ ಕಿಸಾನ್ ಕೇತ್ನ ಊರುಬಾಗಿಲು ಶ್ರೀನಿವಾಸ್ ಕೋಲಾರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಇವರೊಂದಿಗೆ ಕೋಲಾರಕ್ಕಾಗಿ ಅರ್ಜಿ ಸಲ್ಲಿಸಿದವರ ಪಟ್ಟಿ ಆರಕ್ಕೇರಿತ್ತು. ಕೋಲಾರ ಅಲ್ಲದೆ ಕಾಂಗ್ರೆಸ್ನಿಂದ ವಿಜಯಪುರದ ತೇರದಾಳ ಕ್ಷೇತ್ರಕ್ಕೆ 7 ಅಕಾಂಕ್ಷಿಗಳು, ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲು 8 ಅಕಾಂಕ್ಷಿಗಳು, ಸಿಎಂ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೆಸ್ನ 11 ಮಂದಿ ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಯಚೂರು ನಗರ ಕ್ಷೇತ್ರಕ್ಕಾಗಿ 10 ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿತ್ತು.












Click it and Unblock the Notifications