ಕೋಲಾರದಲ್ಲೂ ಗೋರಖ್ ಪುರ ಮಾದರಿ ದುರಂತ: 3 ತಿಂಗಳಲ್ಲಿ 33 ಸಾವು!
ಕೋಲಾರ, ಆಗಸ್ಟ್ 23: ಉತ್ತರ ಪ್ರದೇಶ ಗೋರಖ್ ಪುರದಲ್ಲಿ ಸಂಭವಿಸಿದ ನೂರಕ್ಕೂ ಹೆಚ್ಚು ಮಕ್ಕಳ ಸರಣಿ ಸಾವಿನ ದುರಂತ ಮಾಸುವ ಮುನ್ನವೇ ಕರ್ನಾಟಕದ ಕೋಲಾರ ಜಿಲ್ಲೆಯಲ್ಲೂ ಇಂಥದೇ ದುರಂತ ಸಂಭವಿಸಿರುವುದು ವರದಿಯಾಗಿದೆ.
ಆಗಸ್ಟ್ 21 ರಂದು ಕೋಲಾರದ ಶ್ರೀನಿವಾಸಪುರದ ಶ್ರೀ ನರಸಿಂಹರಾಜ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಮಕ್ಕಳು ಸಾವಿಗೀಡಾದ್ದು, ಇದಕ್ಕೆ ಕಾರಣ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಎನ್ನಲಾಗುತ್ತಿದೆ. ಅಲ್ಲದೇ, ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ 33 ಮಕ್ಕಳು ಸಾವಿಗೀಡಾದ ಕುರಿತು ಮಾಹಿತಿ ಲಭಿಸಿದ್ದು, ಇದು ಗೋರಖ್ ಪುರ ಮಾದರಿ ದುರಂತವೇ ಎಂಬ ಬಗ್ಗೆಯೂ ಅನುಮಾನ ಎದ್ದಿದೆ.

ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಕ್ಷೇತ್ರದಲ್ಲೇ ಇಂಥ ದುರಂತ ಸಂಭವಿಸಿರುವುದು ಮತ್ತಷ್ಟು ಆಕ್ರೋಶವನ್ನು ಹುಟ್ಟುಹಾಕಿದೆ. ಈ ಕುರಿತು ಮೂರು ದಿನಗಳೊಳಗೆ ಸವಿವರ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಆಸ್ಪತ್ರೆ ಆಡಳಿತ ಮಂಡಳಿ, 'ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಾಗಲಿ, ಉಪಕರಣದ ಅಭಾವವಾಗಲಿ ಇಲ್ಲ. ಹುಟ್ಟುತ್ತಲೇ ಕೆಲವು ಗಂಭೀರ ಸಮಸ್ಯೆ ಹೊತ್ತು ಹುಟ್ಟುತ್ತಿರುವ ಮಕ್ಕಳು ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯ ಬೇಜವಾಬ್ದಾರಿ, ವೈದ್ಯರ ನಿರ್ಲಕ್ಷ್ಯ ಎಂದು ಈ ಘಟನೆಯನ್ನು ವ್ಯಾಖ್ಯಾನಿಸುವುದು ತಪ್ಪು' ಎಂದು ಆರೋಪವನ್ನು ತಳ್ಳಿಹಾಕಿದೆ.












Click it and Unblock the Notifications