Breaking; ಸಿದ್ದಾಪುರದಲ್ಲಿ ಮಂಗನ ಕಾಯಿಲೆಗೆ ವೃದ್ಧೆ ಬಲಿ
ಕಾರವಾರ, ಏಪ್ರಿಲ್ 20; ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ. ಸಿದ್ದಾಪುರದಲ್ಲಿ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ.
ಜಾನಕಿ ಹೆಗಡೆ ಎಂಬ 85 ವರ್ಷದ ವೃದ್ಧೆ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಸಿದ್ದಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.
ಒಂದು ವಾರದಲ್ಲಿ 8ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಹಲಗೇರಿ, ಕೋಲ್ ಸಿರ್ಸಿ, ಕಾನಸೂರು, ಬೀಳಗಿ ಗ್ರಾಮಗಳಲ್ಲಿ ಮಂಗನ ಕಾಯಿಲೆ ಪ್ರಕರಣ ದಾಖಲಾಗಿದೆ.

ಹೊನ್ನಾವರದ ಗೇರುಸೊಪ್ಪದಲ್ಲಿ ಸಹ ಮಂಗನ ಕಾಯಿಲೆ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಂಗನ ಕಾಯಿಲೆ ತಡೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಂಗನಕಾಯಿಲೆ ಪ್ರಕರಣಗಳು ಸಾಮಾನ್ಯ. ಕಾಡಿನಲ್ಲಿ ಮಂಗಗಳು ಮೃತಪಟ್ಟು ಅವುಗಳ ಶವದ ಮೇಲಿನ ಕೀಟಗಳ ಮೂಲಕ ಈ ಕಾಯಿಲೆ ಹಬ್ಬುತ್ತದೆ.
ಮಂಗನ ಕಾಯಿಲೆಯನ್ನು ಕ್ಯಾಸನೂರು ಕಾಡಿನ ಕಾಯಿಲೆ ಎಂದು ಸಹ ಕರೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ 1956ರಲ್ಲಿ ಈ ಕಾಯಿಲೆ ಪತ್ತೆ ಆಯಿತು.
ಈ ಕಾಯಿಲೆ ಮಂಗನಿಂದ ಬರುವುದರಿಂದ ಮಂಗನಕಾಯಿಲೆ ಎಂದೂ ಕರೆಯಲಾಗುತ್ತದೆ. ಇದು ಕಾಡಿನಲ್ಲಿರುವ ಉಣ್ಣೆಗಳು ಕಚ್ಚುವುದರಿಂದ ಮಾತ್ರ ಬರುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳ ಸಾವು ಈ ಕಾಯಿಲೆ ಮುನ್ಸೂಚನೆ.
ಸತತ 8-10 ದಿನಗಳು ಬಿಡದೇ ಜ್ವರ ಬರುವುದು. ವಿಪರೀತ ತಲೆ ನೋವು, ಕೈ ಕಾಲು ನೋವು ಮುಂತಾದವು ಈ ರೋಗದ ಲಕ್ಷಣಗಳು. ಕಣ್ಣು ಕೆಂಪಾಗುವುದು ಸಹ ಈ ಕಾಯಿಲೆಯ ಲಕ್ಷಣ. ಮಂಗನ ಕಾಯಿಲೆಗೆ ಔಷಧಿ ಇದೆ. ಆದರೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.












Click it and Unblock the Notifications