ಉತ್ತರ ಕನ್ನಡದ ಅಭಿವೃದ್ಧಿಯ ಮುನ್ನೋಟ ಬಿಚ್ಚಿಟ್ಟ ಜಿಲ್ಲಾಧಿಕಾರಿ
ಕಾರವಾರ, ಆಗಸ್ಟ್ 27; "ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅನುಕೂಲವಾಗುವ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾಪ ಕೂಡ ಸಲ್ಲಿಸಲಾಗಿದೆ" ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, "ಉತ್ತರ ಕನ್ನಡ ನಿರಂತರವಾಗಿ ಪ್ರಾಕೃತಿ ವಿಕೋಪಕ್ಕೆ ತುತ್ತಾಗುವ ಜಿಲ್ಲೆಯಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಣೆ ಮಾಡಲು ಎಲ್ಲಾ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಮುನ್ಸೂಚನೆಗಳನ್ನು ಇಟ್ಟುಕೊಂಡು, ಸಾರ್ವಜನಿಕರಿಗೆ ಪೂರ್ವಭಾವಿಯಾಗಿ ಸೂಚನೆಗಳನ್ನು ನೀಡಿ, ಎಲ್ಲಾ ಕಡೆಗಳಲ್ಲೂ ಮಾಹಿತಿಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂಥ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು" ಎಂದರು.
"ಘಟ್ಟದ ಮೇಲೆ ಮಳೆ ಬಿದ್ದರೆ ಆದರೆ ಅದರ ಹಾನಿ, ಪ್ರವಾಹ ಉಂಟಾಗುವುದು ಕರಾವಳಿ ಪ್ರದೇಶಗಳಲ್ಲಿ. ಕರಾವಳಿಯಲ್ಲಿ ಕಾರವಾರ ಹಾಗೂ ಹೊನ್ನಾವರದಲ್ಲಿ ಈಗಾಗಲೇ ಜಲಾಶಯಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಮೂಲಕ ಸಂಭವನೀಯ ಪ್ರವಾಹಗಳನ್ನು ಆದಷ್ಟು ಕಡಿಮೆ ಮಾಡುತ್ತಿದ್ದೇವೆ. ಇನ್ನು ಕೆಲವು ಕಡೆಗಳಲ್ಲಿ ಮಾಹಿತಿಗಳನ್ನಾಧರಿಸಿ ತಂತ್ರಜ್ಞಾನವನ್ನು ಬಳಸಿಕೊಂಡು ಮುನ್ನೆಚ್ಚರಿಕೆ ವಹಿಸಲು ಈ ಯೋಜನೆ ರೂಪಿಸಿದ್ದೇವೆ" ಎಂದು ತಿಳಿಸಿದರು.

"ಜಿಲ್ಲಾ ಕಂಟ್ರೋಲ್ ರೂಮ್ನಲ್ಲಿ ಸಂಭವನೀಯ ಪ್ರವಾಹ ಪೀಡಿತ ಪ್ರದೇಶಗಳನ್ನು ಮ್ಯಾಪ್ ಮಾಡಿಡಲಾಗುತ್ತದೆ. ಎಲ್ಲೆಲ್ಲಿ ಮಳೆ ಬಿದ್ದರೆ ಎಲ್ಲೆಲ್ಲಿ ಅನಾಹುತ ಆಗಬಹುದು ಎಂಬ ಬಗ್ಗೆ ಮೊದಲೇ ಸ್ವಯಂಚಾಲಿತವಾಗಿ ನಮಗೆ ಸೂಚನೆ ಬರುವಂಥ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ವೈಜ್ಞಾನಿಕವಾಗಿ ಮಾಹಿತಿಗಳನ್ನು ಆಧರಿಸಿ, ಮೊದಲೇ ಮುಂಜಾಗ್ರತಾ ಕ್ರಮ ವಹಿಸಿ ಆ ಭಾಗದ ನಿವಾಸಿಗಳನ್ನು ಸ್ಥಳಾಂತರಿಸಲು ಇದು ಅನುಕೂಲವಾಗಲಿದೆ. ಮುಂದಿನ ಮಳೆಗಾಲದೊಳಗೆ ಈ ತಂತ್ರಜ್ಞಾನ ಅಭಿವೃದ್ಧಿಗೊಂಡು ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ" ಎಂದು ವಿವರಿಸಿದರು.
ಪೋರ್ಟಲ್ ಅಭಿವೃದ್ಧಿ; "ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆ, ಇಲ್ಲಿನ ಕಲೆ- ಸಂಸ್ಕೃತಿಗಳ ಬಗ್ಗೆ, ಇತಿಹಾಸ, ವನ್ಯಜೀವಿ ಪ್ರಪಂಚ ಹಾಗೂ ಪ್ರವಾಸಿ ತಾಣಗಳ ಮಾಹಿತಿಗಳನ್ನು ಸಂಗ್ರಹಿಸಿ ಪೋರ್ಟಲ್ನಲ್ಲಿ ಅಳವಡಿಸಲಾಗುವುದು. ಕಾಳಿ, ಶರಾವತಿ, ಅಘನಾಶಿನಿ ನದಿ ಪ್ರದೇಶಗಳಲ್ಲಿ ಸೀ ಪ್ಲೇನ್ ಮಾಡಲು ಕೂಡ ಚಿಂತನೆ ಮಾಡಿದ್ದೇವೆ. ಪೋರ್ಟಲ್ ಸಿದ್ಧಗೊಂಡ ಬಳಿಕ ಒಂದರಂತೆ ಒಂದು ಪ್ರವಾಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಯೋಚನೆ ಇದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೌಶಲ್ಯಾಧಾರಿತ ಶಿಕ್ಷಣ; "ಕಳೆದ ಐದು ವರ್ಷಗಳಲ್ಲಿ ಶಿಕ್ಷಣ ಪಡೆದ ಯುವಜನರು ಎಲ್ಲಿ ಉದ್ಯೋಗ ಮಾಡುತ್ತಿದ್ದಾರೆ? ಎಂಬ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಜೊತೆಗೆ ಉದ್ಯೋಗವಿಲ್ಲದವರ ಮಾಹಿತಿಗಳನ್ನೂ ಕ್ರೋಢೀಕರಿಸಲಾಗಿದೆ. ಇಂದಿನ ದಿನಮಾನಗಳಲ್ಲಿ ಬೇಡಿಕೆ ಇರುವ ಟ್ರೇಡ್ಗಳಲ್ಲಿ ಕೌಶಲ್ಯ ತರಬೇತಿ ನೀಡಲು ಯೋಜನೆ ರೂಪಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ವಿಮಾನ ನಿಲ್ದಾಣ ಬರಲಿದೆ. ಹೀಗಾಗಿ ಅಲ್ಲಿಗೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಈಗಲೇ ಯುವಜನರಿಗೆ ಒದಗಿಸಿದಾಗ ಅವರಿಗೆ ಉದ್ಯೋಗ ಸಿಗುತ್ತದೆ. ಜೊತೆಗೆ ಸ್ವಯಂ ಉದ್ಯೋಗವನ್ನೂ ಕೈಗೊಳ್ಳಲು ಬೇಕಾದ ಕೌಶಲ್ಯಗಳನ್ನೂ ನೀಡಲು ಯೋಜನೆಗಳನ್ನು ಮಾಡಿಕೊಂಡಿದ್ದೇವೆ" ಎಂದರು.
ಶೇ 60ರಷ್ಟು ಲಸಿಕಾಕರಣ; "ಲಸಿಕಾಕರಣಕ್ಕೆ ಸಾರ್ವಜನಿಕರಿಂದ ಉತ್ತಮ ಸಹಕಾರ, ಸ್ಪಂದನೆ ವ್ಯಕ್ತವಾಗಿದೆ. ಒಂದು ದಿನ ಹೆಚ್ಚು, ಒಂದು ದಿನ ಕಡಿಮೆ ಲಸಿಕೆ ಬಂದರೂ ಹಳ್ಳಿಗಾಡುಗಳಿಂದ ಬಂದು ಜನರು ಲಸಿಕೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿನ 10,04,218 ಲಸಿಕೆಗೆ ಅರ್ಹರ ಪೈಕಿ 6,75,553 ಮಂದಿಗೆ ಮೊದಲ ಸುತ್ತಿನ ಕೋವಿಡ್ ಲಸಿಕೆ ನೀಡಲಾಗಿದೆ. ಅಂದರೆ ಶೇ 60ರಷ್ಟು ಮಂದಿ ಈಗಾಗಲೇ ಲಸಿಕೆ ಪಡೆದುಕೊಂಡಿದ್ದು, ಈ ಪೈಕಿ ಶೇ 32ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಕಾರವಾರದಲ್ಲಿ ಈಗಾಗಲೇ ಶೇ 90ರಷ್ಟು ಜನರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ಹೆಚ್ಚು ಲಭ್ಯವಾದರೆ ಇನ್ನು 10 ದಿನಗಳಲ್ಲಿ ಜಿಲ್ಲೆಯಲ್ಲಿ ಶೇ 80ರಷ್ಟು ಜನರಿಗೆ ಲಸಿಕಾಕರಣ ಪೂರ್ಣಗೊಳ್ಳಲಿದೆ" ಎಂದು ಜಿಲ್ಲಾಧಿಕಾರಿಗಳು ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಕೋವಿಡ್ ಮೂರನೇ ಅಲೆ ಆತಂಕ ಇರುವ ಕಾರಣ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುವವರನ್ನು ಆಯಾ ಗ್ರಾಮ ಮಟ್ಟದ ಸಮಿತಿಗಳೇ ಗುರುತಿಸಿ, ಅವರ ಮಾಹಿತಿಗಳನ್ನು ಸಂಗ್ರಹಿಸಿ, ಅವರೆಲ್ಲರ ಗಂಟಲುದ್ರವಗಳನ್ನು ಪಡೆದು ತಪಾಸಣೆಗೊಳಪಡಿಸಲಾಗುತ್ತಿದೆ. ಪ್ರವಾಸಿ ತಾಣಗಳು, ದೇವಾಲಯಗಳು ಸೇರಿದಂತೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಹೆಚ್ಚು ಸಂಪರ್ಕಕ್ಕೆ ಬರುವವರಿಗೆ ನಿರಂತರವಾಗಿ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಶೇ 1.7ರಷ್ಟು ಇದ್ದ ಕೋವಿಡ್ ಪಾಸಿಟಿವಿಟಿ ದರ ಈಗ ಶೇ 0.85ಗೆ ಇಳಿದಿದೆ. ಆದರೂ ಪರೀಕ್ಷೆಗಳನ್ನು ಕಡಿಮೆ ಮಾಡಿಲ್ಲ. ನಿರಂತರವಾಗಿ ತಪಾಸಣಾ ಕಾರ್ಯ ಪ್ರಗತಿಯಲ್ಲಿದೆ" ಎಂದು ಮಾಹಿತಿ ನೀಡಿದರು.
ಪ್ರವಾಸಿ ಚಟುವಟಿಕೆಗಳು ಪುನರಾರಂಭ; "ಸ್ಕೂಬಾ ಡೈವಿಂಗ್ ಅನ್ನು ಸರಿಯಾಗಿ ನಡೆಸಿಕೊಂಡು ಹೋಗಬೇಕಿದೆ ಹಾಗೂ ಆ ಮೂಲಕ ಪ್ರವಾಸೋದ್ಯಮಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬರುವಂಥೆ ನೋಡಿಕೊಳ್ಳಬೇಕಿದೆ. ಹೀಗಾಗಿ ಬಿಡ್ನಲ್ಲಿ ಗೊಂದಲಗಳು ಉಂಟಾಗದಂತೆ ಬಿಡ್ನಲ್ಲಿ ಭಾಗವಹಿಸುವ ಪೂರ್ವ ಸಮಾಲೋಚನೆಯೊಂದನ್ನು ಮಾಡಿದ್ದೇವೆ. ಬಿಡ್ನಲ್ಲಿ ಭಾಗವಹಿಸಿದ ಬಳಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೋರ್ಟ್ಗೆ ಹೋಗುವಂಥದ್ದೆಲ್ಲ ಹಿಂದೆ ಆಗಿದೆ. ಹೀಗಾಗಿ ಈ ರೀತಿ ಆಗದಂತೆ ಈ ಪೂರ್ವ ಸಮಾಲೋಚನೆ ಮಾಡಿದ್ದೇವೆ. ಒಟ್ಟಾರೆಯಾಗಿ ಈ ಸೀಸನ್ನಲ್ಲಿ ಸ್ಕೂಬಾ ಡೈವಿಂಗ್ ಕಾರ್ಯಾರಂಭ ಮಾಡಲಿದೆ" ಎಂದರು.
"ಉಪಪ್ರಾದೇಶಿಕ ವಿಜ್ಞಾನ ಕೇಂದ್ರವನ್ನೂ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಮತ್ಸ್ಯಾಯದ ಕಟ್ಟಡ ಶಿಥಿಲಗೊಂಡಿದ್ದ ಕಾರಣ ಅದನ್ನು ಒಡೆಯುತ್ತಿದ್ದೇವೆ. ವಿಜ್ಞಾನ ಕೇಂದ್ರಕ್ಕೆ ಅಲ್ಲಿನ ಅಕ್ವೇರಿಯಂಗಳನ್ನು ಸ್ಥಳಾಂತರಿಸಲಾಗಿದ್ದು, ಮತ್ಸ್ಯಾಲಯವಿದ್ದ ಜಾಗದಲ್ಲಿ ಏನು ಮಾಡಬೇಕೆಂಬುದನ್ನು ಮುಂದೆ ಯೋಚಿಸಲಾಗುವುದು. ಹೊನ್ನಾವರದ ಇಕೋ ಬೀಚ್ ಈ ಬಾರಿಯೂ ರಾಷ್ಟ್ರೀಯ ಮಟ್ಟದ ತೀರ್ಪುಗಾರ ಸಮಿತಿಯಲ್ಲಿ ಆಯ್ಕೆಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಸಮಿತಿಯಲ್ಲಿ ಆಯ್ಕೆಯಾಗುವ ಭರವಸೆ ಕೂಡ ಇದೆ. ಎಲ್ಲಾ ಪ್ರವಾಸಿ ತಾಣಗಳಲ್ಲೂ ಸೆಪ್ಟೆಂಬರ್ನಿಂದ ಜೀವ ರಕ್ಷಕ ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾರವಾರದಲ್ಲಿ ಪ್ರವಾಸಿಗರಿಗೆ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ಯಾರಾ ಮೋಟಾರ್ ಚಟುವಟಿಕೆಯನ್ನು ಆರಂಭಿಸಲು ಕೂಡ ಪರಿಶೀಲಿಸಲಾಗುವುದು" ಎಂದು ಹೇಳಿದರು.
"ನಿವೃತ್ತ ಯುದ್ಧವಿಮಾನ ಟುಪೆಲೋವ್ ಅನ್ನು ವಿಶಾಖಪಟ್ಟಣಂನಿಂದ ಕಾರವಾರಕ್ಕೆ ತರುವ ಟೆಂಡರ್ ಕಾರ್ಯ ಪೂರ್ಣಗೊಂಡಿದೆ. ನಮ್ಮಲ್ಲಿ ಅನುದಾನ ಹಾಗೂ ಸ್ಥಳವಿದೆ. ಕೋವಿಡ್ ಸೇರಿದಂತೆ ಕೆಲವು ತಾಂತ್ರಿಕ ಕಾರಣದಿಂದ ಸ್ವಲ್ಪ ವಿಳಂಬವಾಗಿದೆ. ಶೀಘ್ರದಲ್ಲೇ ಅದು ಇಲ್ಲಿಗೆ ಬರಲಿದೆ" ಎಂದರು.












Click it and Unblock the Notifications