ಶಿರೂರು ಆಂಬುಲೆನ್ಸ್ ಅಪಘಾತ: ಆಧಾರ ಸ್ತಂಭವನ್ನೇ ಕಳೆದುಕೊಂಡ 3 ಕುಟುಂಬ,ತಬ್ಬಲಿಗಳಾದ ಮಕ್ಕಳು
ಕಾರವಾರ, ಜುಲೈ 21: ಉಡುಪಿಯ ಶಿರೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಆಂಬುಲೆನ್ಸ್ ಪಲ್ಟಿಯಾಗಿ ಸಾವನ್ನಪ್ಪಿದ್ದ ದಂಪತಿ ಸೇರಿ ನಾಲ್ವರ ಮೃತದೇಹಗಳನ್ನು ಹೊನ್ನಾವರದ ಹಾಡಗೇರಿಯಲ್ಲಿ ಗುರುವಾರ ಅಂತ್ಯ ಸಂಸ್ಕಾರ ನಡೆಸಲಾಯಿತು. ಆದರೆ, ಜವರಾಯನ ಅಟ್ಟಹಾಸಕ್ಕೆ ದುಡಿದು ತಿನ್ನುವ ಜೀವಗಳು ಬಾರದ ಲೋಕಕ್ಕೆ ತೆರಳಿದ್ದು, ಮೃತ ದಂಪತಿಯ ಮಕ್ಕಳು ಅನಾಥರಾದರೇ, ಮತ್ತಿಬ್ಬರ ಮಕ್ಕಳುಗಳು ತಂದೆಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ದೃಶ್ಯಗಳು ನೆರದಿದ್ದವರ ಕಣ್ಣೀರ ಕಡಲಲ್ಲಿ ಮುಳುಗಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ಚೆಕ್ ಪೋಸ್ಟ್ ಬಳಿ ಬುಧವಾರ ನಡೆದ ಭೀಕರ ಆಂಬುಲೆನ್ಸ್ ದುರಂತ ಮೈ ಜುಂ ಎನ್ನಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತೀರುವ ಭೀಕರ ದೃಶ್ಯ ಎಂತವರ ಎದೆಯನ್ನು ಒಮ್ಮೆ ನಡುಗಿಸುವಂತಿದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಗಜಾನನ ನಾಯಕ ಎಂಬುವವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ನಾಲ್ವರು ಸಾವನ್ನಪ್ಪಿ , ಟೋಲ್ ಸಿಬ್ಬಂದಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ್ದ ರೋಗಿ ಗಜಾನನ ಗಣಪತಿ ನಾಯ್ಕ, ಅವರ ಪತ್ನಿ ಜ್ಯೋತಿ ನಾಯ್ಕ, ಸಂಬಂಧಿಕರಾದ ಮಂಜುನಾಥ ನಾಯ್ಕ ಹಾಗೂ ಲೋಕೇಶ್ ನಾಯ್ಕಇವರ ಮೃತದೇಗಳನ್ನು ಹುಟ್ಟೂರು ಹೊನ್ನಾವರದ ಹಾಡಗೇರಿಗೆ ತಂದು ಗುರುವಾರ ಅಂತ್ಯಕ್ರಿಯೆ ನಡೆಸಲಾಗಿದೆ. ಘಟನೆಯಿಂದಾಗಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಊರಿಗೆ ಊರೇ ಸ್ಮಶಾನ ಮೌನದಂತಾಗಿದೆ.

ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಮಕ್ಕಳು
ಗಜಾನನ ನಾಯ್ಕ ಹೊನ್ನಾವರದಲ್ಲಿ ಗೋಬಿ ಮಂಚೂರಿ ಶಾಪ್ ನಡೆಸುತ್ತಿದ್ದರು. ಇನ್ನು ಈತನ ಸಂಬಂಧಿಕರಾದ ಮಂಜುನಾಥ ನಾಯ್ಕ ಹಾಗೂ ಲೋಕೇಶ್ ನಾಯ್ಕ ಬಿರಿಯಾನಿ ಶಾಪ್ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಮೃತ ಗಜಾನನ ನಾಯ್ಕ ಹಾಗೂ ಜ್ಯೋತಿ ಇಬ್ಬರು ಸಾವನ್ನಪ್ಪಿರುವುದರಿಂದ, ಇವರ ಇಬ್ಬರು ಪುಟ್ಟ ಮಕ್ಕಳು ಇದೀಗ ತಂದೆ ತಾಯಿ ಇಲ್ಲದೆ ಅನಾಥರಾಗಿದ್ದಾರೆ. ಇದಲ್ಲದೆ ಮೃತರಾದ ಮಂಜುನಾಥ ಹಾಗೂ ಲೋಕೇಶ್ ಅವರಿಗೂ ತಲಾ ಇಬ್ಬರು ಮಕ್ಕಳಿದ್ದಾರೆ. ಏನು ಅರಿಯದ ಪುಟ್ಟ ಮಕ್ಕಳು ತಂದೆಯಂದಿರಿಗಾಗಿ ಕನವರಿಸತೊಡಗಿರುವುದನ್ನು ನೋಡಿ ಎಂತಹವರ ಮನ ಕರಗದೇ ಇರದು.

ಉಡುಪಿ ಆಸ್ಪತ್ರೆಗೆ ತೆರಳುವಾಗಿ ಅವಘಡ
ಗಜಾನನ ನಾಯ್ಕ ಕಳೆದ ಹಲವು ದಿನಗಳಿಂದ ಹೃದಯ ರೋಗಿಯಾಗದಿಂದ ಬಳಲುತ್ತಿದ್ದರು. ಆದರೆ ಬುಧವಾರ ಉಸಿರಾಟದ ಸಮಸ್ಯೆಯಿಂದಾಗಿ ಪತ್ನಿ ಜ್ಯೋತಿ ನಾಯ್ಕ ಜೊತೆಗೆ ಹೊನ್ನಾವರದಲ್ಲಿ ಖಾಸಗಿ ಆಸ್ಪತ್ರೆಗೆ ತೋರಿಸಿದ್ದರು. ಆದರೆ ಈತನ ಸ್ಥಿತಿ ಸ್ವಲ್ಪ ಗಂಭೀರವಾಗಿದ್ದರಿಂದ ವೈದ್ಯರು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು.
ಅದರಂತೆ ಆಂಬ್ಯುಲೆನ್ಸ್ ಚಾಲಕ ಹಾಗೂ ಸಿಬ್ಬಂದಿ ಮುಂದೆ ಕುಳಿತಿದ್ದು ಹಾಗೂ ಐವರು ಹಿಂದೆ ಕುಳಿತು ಒಟ್ಟು ಏಳು ಮಂದಿ ತೆರಳುತ್ತಿದ್ದೆವು. ಆದರೆ ಟೋಲ್ ಗೇಟ್ ಬಳಿ ಚಾಲಕ ಸಡನ್ ಬ್ರೇಕ್ ಹಾಕಿದ್ದರಿಂದ ಆಂಬುಲೆನ್ಸ್ ಬಾಗಿಲು ತೆರೆದು ಎಲ್ಲರೂ ಹೊರಗೆ ಬಿದ್ದೆವು. ನನಗೆ ಪ್ರಜ್ಞೆ ತಪ್ಪಿತು. ನಂತರ ಏನಾಯಿತು ಎಂಬುದೇ ಗೊತ್ತಾಗಿಲ್ಲ ಎಂದು ಗಾಯಾಳು ಶಶಾಂಕ್ ಪ್ರತಿಕ್ರಿಯಿಸಿದ್ದಾರೆ.

ಹಸುವಿಗೆ ಡಿಕ್ಕೆಯಾಗುವ ಭಯಕ್ಕೆ ಸಡನ್ ಬ್ರೇಕ್
ಇನ್ನು ಸಣ್ಣ ಮಳೆಯಲ್ಲಿ ಆಂಬುಲೆನ್ಸ್ ಬರುತ್ತಿರುವ ಸದ್ದು ಕೇಳಿದ ತಕ್ಷಣ ಟೋಲ್ ಸಿಬ್ಬಂದಿ ಬ್ಯಾರಿಕೇಟ್ ತೆರವು ಮಾಡಿದ್ದಾರೆ. ಜೊತೆಗೆ ದನವನ್ನು ಓಡಿಸುತ್ತಿರುವಾಗಲೇ ವೇಗವಾಗಿ ಬಂದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿದೆ. ಚಾಲಕ ಬ್ರೇಕ್ ಬದಲು ಹ್ಯಾಂಡ್ ಬ್ರೇಕ್ ಹಾಕಿರಬೇಕು. ಇದರಿಂದ ಆಂಬುಲೆನ್ಸ್ ಒಳಭಾಗದಲ್ಲಿದ್ದವರೆಲ್ಲರೂ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದರು. ಇನ್ನು ಓರ್ವ ಆಸ್ಪತ್ರೆಗೆ ದಾಖಲಿಸುವಾಗ ಸಾವನ್ನಪ್ಪಿದ್ದಾನೆ. ಆಂಬ್ಯುಲೆನ್ಸ್ ಚಾಲಕ ಹಾಗೂ ಸಿಬ್ಬಂದಿಗೆ ಪೆಟ್ಟಾಗಿದೆ. ಅತೀಯಾದ ವೇಗದಲ್ಲಿ ಬಂದ ಚಾಲಕ ನಿಯಂತ್ರಣ ಸಾಧ್ಯವಾಗದೇ ಅಂಬುಲೆನ್ಸ್ ಪಲ್ಟಿಯಾಗಿದೆ ಎಂದು ಶಿರೂರು ಟೋಲ್ ಗೇಟ್ ಸಿಬ್ಬಂದಿ ಸಂಜು ಪಾಂಡವ್ ಹಾಗೂ ಗಾಯಾಳು ಸಿಬ್ಬಂದಿ ಶಂಬಾಜಿ ಗೋರ್ಪಡೆ ತಿಳಿಸಿದ್ದಾರೆ.

ಟೋಲ್ ಸಿಬ್ಬಂದಿ ಮೇಲೆ ದೂರಿದ ಚಾಲಕ
ಆದರೆ ನಿನ್ನೆ ಈ ಬಗ್ಗೆ ಮಾಧ್ಯಮಗಳಿಗೆ ಚಾಲಕ ರೋಶನ್ ಮಾಧ್ಯಮಗಳಿಗೆ ಹೇಳಿಕೆನೀಡಿ, ಅಂಬುಲೆನ್ಸ್ ವೇ ನಲ್ಲಿ ದನ ಮತ್ತು ಬ್ಯಾರಿಕೇಡ್ ಗಳು ಇತ್ತು. ನಾನು ವೇಗವಾಗಿ ಬರುತ್ತಿದ್ದೆ. ಟೋಲ್ನವರು ನಿಷ್ಕಾಳಜಿ ವಹಿಸಿದ್ದಾರೆ. ನಾನು ಹಿಂದಿನ ಬ್ರೇಕ್ ಹಾಕಿದ್ದೆ. ನಾನು ಬ್ರೇಕ್ ಹಾಕದಿದ್ದರೆ ಟೋಲ್ ಸಿಬ್ಬಂದಿ ಮತ್ತು ದನದ ಮೇಲೆ ಅಂಬುಲೆನ್ಸ್ ಹೋಗುತ್ತಿತ್ತು. ನಾನು ಬ್ರೇಕ್ ಹಾಕಿದ್ದರಿಂದ ಅಂಬುಲೆನ್ಸ್ ಪಲ್ಟಿಯಾಗಿ ಮೂವರು ಸ್ಪಾಟ್ ನಲ್ಲೇ ಸಾವನ್ನಪ್ಪಿದರು ಎಂದು ತಿಳಿಸಿದ್ದಾನೆ.
ಒಟ್ಟಾರೆ ಟೋಲ್ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯತನದಿಂದಾಗಿ ಅಮಾಯಕ ಜೀವಗಳು ಬಲಿಯಾಗಿವೆ. ಮಾತ್ರವಲ್ಲದೆ ಇವರನ್ನೆ ನಂಬಿದ್ದ ಪುಟ್ಟ ಮಕ್ಕಳು ಇದೀಗ ಅನಾಥರಾಗಿಗಿದ್ದಾರೆ. ಘಟನೆಯಿಂದಾಗಿ ಊರಿಗೆ ಊರೆ ಸ್ಮಶಾನ ಮೌನದಂತಾಗಿದೆ.












Click it and Unblock the Notifications