ತುಳಸಿ ಗೌಡ ಮನೆ ಮುಂದೆ ತಾತ್ಕಾಲಿಕ ಕಾಲು ಸೇತುವೆ: ಕೊಟ್ಟ ಮಾತು ಉಳಿಸಿಕೊಂಡ ಶಾಸಕಿ
ಕಾರವಾರ, ಆಗಸ್ಟ್, 16: ಅಂಕೋಲಾ ತಾಲೂಕಿನ ಹೊನ್ನಳ್ಳಿಯ ಪುಟ್ಟ ಗ್ರಾಮದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರು ಮನೆಯ ಎದುರು ಹಳ್ಳವೊಂದು ಹರಿಯುತ್ತಿದೆ. ಹಳ್ಳ ದಾಟಲು ಸೇತುವೆಯ ವ್ಯವಸ್ಥೆ ಇರಲಿಲ್ಲ. ಮಳೆಗಾಲದಲ್ಲಿ ಇವರು ಬೇರೆಡೆ ಹೋಗಬೇಕೆಂದರೆ ಪರದಾಡಬೇಕಿತ್ತು. ಈ ಬಗ್ಗೆ ಅವರು ಹಲವಾರು ಬಾರಿ ಅಳಲನ್ನು ತೋಡಿಕೊಂಡಿದ್ದರು. ಇದೀಗ ವೃಕ್ಷಮಾತೆ ಪದ್ಮಶ್ರೀ ತುಳುಸಿ ಗೌಡ ಅವರ ಮನೆಯ ಮುಂದೆ ಶಾಸಕಿ ರೂಪಾಲಿ ನಾಯ್ಕ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ಅವರು ಕಾಲು ಸೇತುವೆ ನಿರ್ಮಿಸಿಕೊಡುವ ಮೂಲಕ ತುಳಸಜ್ಜಿಯ ಸಂತಸಕ್ಕೆ ಕಾರಣರಾಗಿದ್ದಾರೆ. ಹೊನ್ನಳ್ಳಿಯ ಪುಟ್ಟ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅಜ್ಜಿ ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರವನ್ನು ಪಡೆದಿದ್ದಾರೆ. ನವದೆಹಲಿಯ ರಾಷ್ಟ್ರಪತಿ ಭವನಕ್ಕೆ ಹಳ್ಳಿಯಿಂದ ಬರಿಗಾಲಲ್ಲಿ ತೆರಳಿ ಪ್ರಶಸ್ತಿ ಸ್ವೀಕರಿಸಿದ್ದರು. ಎಷ್ಟೇ ದೊಡ್ಡ ಮಟ್ಟದ ಪ್ರಶಸ್ತಿ ಸ್ವೀಕರಿಸಿದರೂ ಬದುಕಲು ಸೂಕ್ತ ಮೂಲಭೂತ ಸೌಕರ್ಯವಿಲ್ಲದೆ ಪರದಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಅಂಕೋಲಾದ ಹೊನ್ನಳ್ಳಿಯಲ್ಲಿರುವ ಇವರ ಮನೆ ಎದುರು ಹಳ್ಳವಿದ್ದು, ಇದಕ್ಕೆ ಸೇತುವೆ ನಿರ್ಮಿಸಿಲ್ಲ. ನಗರದ ಕಡೆಗೆ ಹೋಗಬೇಕೆಂದರೆ ತುಂಬಾ ಕಷ್ಟವಾಗುತ್ತದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳು ಕೂಡ ತೊಂದರೆ ಆಗುತ್ತದೆ. ಇನ್ನು ಮಕ್ಕಳು ಶಾಲೆಗೆ ತೆರಳಲು ತುಂಬಿದ ಹಳ್ಳವನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಾಗಲೇ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾರೂ ಕೂಡ ನಮಗೆ ಒಂದು ಸೇತುವೆಯನ್ನು ನಿರ್ಮಿಸಿಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತುಳಸಜ್ಜಿ ಅಸಮಾಧಾನದ ಬೆನ್ನಲ್ಲೇ ಶಾಸಕಿ ರೂಪಾಲಿ ನಾಯ್ಕ ಕಿರು ಸೇತುವೆಗೆ 25 ಲಕ್ಷ ರೂಪಾಯಿ ಹಾಗೂ ರಸ್ತೆಗೆ 15 ಲಕ್ಷ ರೂಪಾಯಿ ಮಂಜೂರು ಮಾಡಿದ್ದಾರೆ. ಮಳೆಗಾಲ ಮುಗಿದ ಮೇಲೆ ಸಂಪುರ್ಣ ಕಾಮಗಾರಿ ಪ್ರಾರಂಭಿಸಲಾಗುವುದು. ಮತ್ತು ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಕಿರು ಸೇತುವೆಯನ್ನು ವಾರದೊಳಗೆ ನಿರ್ಮಿಸಲಾಗುವುದು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಭರವಸೆ ನೀಡಿದ್ದರು.
ಅದರಂತೆ ಇದೀಗ ತುಳಸಿ ಗೌಡ ಅವರ ಮನೆಯ ಎದುರಿನ ಹಳ್ಳಕ್ಕೆ ತಾತ್ಕಾಲಿಕವಾಗಿ ಬಿದಿರು ಹಾಗೂ ಮರದ ತುಂಡುಗಳಿಂದ ಚಿಕ್ಕ ಸೇತುವೆಯನ್ನು ನಿರ್ಮಿಸಿದ್ದಾರೆ. ಇದು ತುಳಸಿ ಗೌಡರ ಮುಖದಲ್ಲಿ ಸಂತೋಷ ತರಿಸಿದೆ. ನಿತ್ಯ ಮಕ್ಕಳು ಓಡಾಡುವಾಗ ಭಯ ಆಗುತ್ತತ್ತು. ಭಾರಿ ಮಳೆಯಲ್ಲಿ ಹಳ್ಳ ದಾಟಲು ಮಕ್ಕಳಿಗೆ ತುಂಬಾ ಕಷ್ಟವಾಗಿತ್ತು. ಇದೀಗ ನಮ್ಮ ಜಮೀನಿನಲ್ಲಿಯೇ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಟ್ಟಿರುವುದು ತುಂಬಾ ಸಹಕಾರಿ ಆಗಿದೆ. ಆದಷ್ಟು ಬೇಗ ಶಾಶ್ವತ ಸೇತುವೆಯನ್ನು ನಿರ್ಮಿಸಿಕೊಟ್ಟರೆ ತುಂಬಾ ಅನುಕೂಲವಾಗಲಿದೆ ಎಂದು ತುಳಸಿ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಸೇತುವೆ ಹಾಗೂ ರಸ್ತೆಗಾಗಿ ಮಾರ್ಚ್ 2022ರಲ್ಲೇ 40 ಲಕ್ಷ ರೂಪಾಯಿ ಮಂಜೂರಾಗಿದ್ದು, ಇದನ್ನು ತುಳಸಿ ಗೌಡ ಅವರ ಗಮನಕ್ಕೂ ತರಲಾಗಿತ್ತು. ಆದರೆ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭ ಆಗಿರಲಿಲ್ಲ. ಬಳಿಕ ಮಳೆ ಬಂದಿದ್ದರಿಂದ ಮತ್ತೆ ವಿಳಂಬವಾಯಿತು. ಹಳ್ಳ ತುಂಬಿ ಹರಿಯುತ್ತಿದ್ದ ಕಾರಣ ತುಳಸಿ ಗೌಡ ಅವರಿಗೆ ಬೇಸರವಾಗಿ ಅಸಹಾಯಕತೆ ತೋಡಿಕೊಂಡಿದ್ದರು. ಆದರೆ ಇದೀಗ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಡಲಾಗಿದ್ದು, ಇದು ಮಳೆಗಾಲದಲ್ಲಿ ಓಡಾಟಕ್ಕೆ ಅನುಕೂಲವಾಗಿದೆ. ಸೇತುವೆ ನಿರ್ಮಾಣಕ್ಕೆ ಖಾಸಗಿ ಜಮೀನು ಮಾಲೀಕರೊಬ್ಬರ ತಕರಾರಿದ್ದು, ಅದನ್ನು ಬಗೆಹರಿಸುವ ಪ್ರಯತ್ನವೂ ನಡೆದಿದೆ. ಇದು ಬಗೆಹರಿದ ಬಳಿಕ ಶಾಶ್ವತ ಸೇತುವೆ ನಿರ್ಮಾಣ ಮಾಡಿಕೊಡುವುದಾಗಿ ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಶಾಸಕಿ ರೂಪಾಲಿಗೆ ಅಲ್ಲಿನ ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.