1 ವರ್ಷದ ಮಗು ಕಳೆದುಕೊಂಡ ತಾಯಿಯೊಬ್ಬಳ ಕರುಣಾಜನಕ ಕಥೆ
ಕಾರವಾರ, ನವೆಂಬರ್ 21: ದಿನದ ಕೂಲಿಗಾಗಿ ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯೊಬ್ಬರು ವರ್ಷದ ಮಗುವನ್ನು ಜತೆಗೆ ಕರೆ ತಂದು ರಸ್ತೆ ಪಕ್ಕ ಮಲಗಿಸಿದ್ದರು. ಆದರೆ ವಿಧಿಯಾಟಕ್ಕೆ ಮಗು ಬಲಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸಾತೊಡ್ಡಿ ಜಲಪಾತಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಲ್ಲಿಗೆ ಕೂಲಿಯಾಳಾಗಿ ಬಂದಿದ್ದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ನರೇಗಲ್ ನಿವಾಸಿ ಮಂಜಮ್ಮ ಹರಿಜನ ವಿಧಿಯಾಟಕ್ಕೆ ತನ್ನ ಕರುಳ ಕುಡಿಯನ್ನು ಕಳೆದುಕೊಂಡಾಕೆ.
ಕೆಲಸಕ್ಕೆ ಹೋಗುವ ವೇಳೆ ಜತೆಯಲ್ಲಿಯೇ ಒಂದು ವರ್ಷದ ಮಗಳು ಅರ್ಪಿತಾ ಹರಿಜನಳನ್ನು ಈಕೆ ಪ್ರತೀ ದಿನ ಕರೆ ತರುತ್ತಿದ್ದರು. ಮಂಗಳವಾರ ಕೂಡ ಮಗುವನ್ನು ಕರೆದುಕೊಂಡು ಬಂದಿದ್ದ ಮಂಜಮ್ಮ, ಅರ್ಪಿತಾಳನ್ನು ರಸ್ತೆಯ ಪಕ್ಕ ಮಲಗಿಸಿ ಕೆಲಸದಲ್ಲಿ ನಿರತರಾಗಿದ್ದರು.

ಬೆಳಗ್ಗೆ 10.30ಕ್ಕೆ ನೀರು ಸಾಗಿಸುವ ಪಿಕಪ್ ಲಾರಿ ರಸ್ತೆಯ ಮೇಲೆ ಸಂಚರಿಸುವಾಗ ಅದರ ಚಕ್ರಕ್ಕೆ ಸಿಕ್ಕಿದ ಕಲ್ಲೊಂದು ಮಲಗಿದ್ದ ಅರ್ಪಿತಾಳ ತಲೆಗೆ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡು ಅಸ್ವಸ್ಥವಾದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಅರ್ಪಿತಾ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾಳೆ.
ತನ್ನ ಮಗುವಿನ ಹೊಟ್ಟೆ ತುಂಬಿಸಲೆಂದೇ ದಿನವಿಡೀ ರಸ್ತೆ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದ ಮಂಜಮ್ಮನ ಆಕ್ರಂದನ ಕರುಳು ಕಿವುಚುವಂತಿತ್ತು. ವಿಧಿಯಾಟಕ್ಕೆ, ಅಜಾಗರೂಕತೆಗೆ ಕಂದಮ್ಮ ಬಲಿಯಾಗಿದೆ. ಪೊಲೀಸ್ ನಿರೀಕ್ಷಕ ಡಾ.ಮಂಜುನಾಥ ನಾಯಕ, ಪಿಎಸ್ ಐ ಲಕ್ಕಪ್ಪ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications