ಕೊರೊನಾ ವೈರಸ್; ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ?
ಕಾರವಾರ, ಮಾರ್ಚ್ 19: ಕೊರೊನಾ ಮುಂಜಾಗ್ರತೆಗಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಜಿಲ್ಲೆಗೆ ಆಗಮಿಸುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ದೇಶದಾದ್ಯಂತ ಕೊರೊನಾ ಭೀತಿ ಎದುರಾಗಿದ್ದು, ರಾಜ್ಯದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಈಗಾಗಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪ್ರವಾಸಿಗರು ಜಿಲ್ಲೆಗೆ ಆಗಮಿಸದಂತೆ ಜಿಲ್ಲಾಡಳಿತ ಮನವಿ ಮಾಡಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯತ್ತ ಪ್ರವಾಸಿಗರು ಬರುತ್ತಿರುವ ಹಿನ್ನೆಲೆ ಚೆಕ್ಪೋಸ್ಟ್ ಮೂಲಕ ಎಲ್ಲರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಅದಾಗಿಯೂ ಪ್ರವಾಸಿಗರು ಜಿಲ್ಲೆಯತ್ತ ಬರುತ್ತಿದ್ದರೆ ಇನ್ನು ಒಂದೆರಡು ದಿನಗಳಲ್ಲಿ ಜಿಲ್ಲೆಯ ಗಡಿಗಳಲ್ಲಿಯೇ ಅವರನ್ನು ತಡೆದು, ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗೋವಾ, ಕೇರಳ ಭಾಗದಿಂದ ಪ್ರವಾಸಿಗರು
ಗೋವಾ, ಮಹಾರಾಷ್ಟ್ರ ಭಾಗದಿಂದ ಹಾಗೂ ಕೇರಳ, ಆಂಧ್ರ, ತಮಿಳುನಾಡು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯತ್ತ ಧಾವಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಪ್ರವಾಸಿಗರಿಗೆ ಜಿಲ್ಲೆಗೆ ಬರದಂತೆ ಸೂಚನೆ ನೀಡಿದ್ದರೂ ಪ್ರವಾಸಿಗರು ಜಿಲ್ಲೆಯತ್ತ ಬರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕೇರಳದಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಆ ಭಾಗದಿಂದ ಬರುವ ಪ್ರವಾಸಿಗರಿಂದಲೂ ವೈರಸ್ ಹರಡುವ ಸಾಧ್ಯತೆ ಇದೆ. ಇತ್ತ ಮಹಾರಾಷ್ಟ್ರದಲ್ಲೂ 39 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನವರು ಇತ್ತ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಆ ಭಾಗದಿಂದ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಗಡಿಯಲ್ಲೇ ತಡೆಯುವುದು ಅನಿವಾರ್ಯವಾಗಿದೆ.
15 ನಿಮಿಷ ಸೂರ್ಯನ ಶಾಖ ಪಡೆಯಿರಿ, ಕೊರೊನಾ ಓಡಿಸಿ- ಸಚಿವರ ಹೇಳಿಕೆ
ಆರು ನೆಗೆಟಿವ್, ಬರಬೇಕಿದೆ ಒಬ್ಬನ ವರದಿ
ಉತ್ತರ ಕನ್ನಡ ಜಿಲ್ಲೆಗೆ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಿಂದ ಬರುವವರು ಹೆಚ್ಚು. ಸದ್ಯದವರೆಗೆ 240 ಮಂದಿ ಜಿಲ್ಲೆಗೆ ಬಂದಿದ್ದು, ಅದರಲ್ಲಿ ಶೇ 10ರಷ್ಟು ಜನ ಈಗಾಗಲೇ ಒಂದು ತಿಂಗಳನ್ನು ಪೂರೈಸಿದ್ದಾರೆ. ಹೀಗಾಗಿ ಅವರಲ್ಲಿ ಯಾವುದೇ ಸೋಂಕು ಇಲ್ಲವೆಂಬುದು ಖಚಿತಗೊಂಡಿದೆ. ಇನ್ನುಳಿದವರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದ್ದು, 14 ದಿನಗಳವರೆಗೆ ಅವರ ಆರೋಗ್ಯ ಸ್ಥಿತಿಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಕೂಡಲೇ ಅವರನ್ನು ಐಸೋಲೇಟೆಡ್ ವಾರ್ಡ್ ಗಳಿಗೆ ಸ್ಥಳಾಂತರಿಸುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.
ಶಂಕಿತ ಏಳು ಮಂದಿಯ ಗಂಟಲಿನ ದ್ರವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ, ತಪಾಸಣೆ ನಡೆಸಲಾಗಿದೆ. ಅದರಲ್ಲಿ ಆರು ಮಂದಿಯ ವರದಿ ಬಂದಿದ್ದು, ಅವರಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ಇನ್ನು ಓರ್ವರ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ಕೆಲಸವಿದ್ದರೆ ಮಾತ್ರ ಬನ್ನಿ
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಷನ್ ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದು, ಅಗತ್ಯ ತುರ್ತು ಕೆಲಸಗಳಿದ್ದರೆ ಮಾತ್ರ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಆಗಮಿಸುವಂತೆ ತಿಳಿಸಿದ್ದಾರೆ. ತುರ್ತು ಕೆಲಸಗಳಿಲ್ಲದಿದ್ದರೆ ಈ ತಿಂಗಳ ಅಂತ್ಯದವರೆಗೆ ಯಾರೂ ಸರ್ಕಾರಿ ಕಚೇರಿಗಳಿಗೆ ಬರಬೇಡಿ. ಮನೆಯಲ್ಲೇ ಕುಳಿತು ವಿಶ್ರಾಂತಿ ಪಡೆಯಿರಿ. ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಕೊರೊನಾ ತಡೆಗೆ ಹುಬ್ಬಳ್ಳಿಯಲ್ಲಿ ಭಿಕ್ಷುಕರಿಗೆ ಮಾಸ್ಕ್ ಹಂಚುತ್ತಿರುವ ಕರಿಯಪ್ಪ!
ಸ್ವೀಡನ್ ಮಹಿಳೆಗೆ ಜಿಲ್ಲಾಡಳಿತದಿಂದ ಅಸ್ತಮಾ ಚಿಕಿತ್ಸೆ
ಸ್ಬೀಡನ್ ನಿಂದ ಬಂದಿದ್ದ ಸುಮಾರು 70 ವರ್ಷದ ಮಹಿಳೆಯೊಬ್ಬರು ತಮಗಿದ್ದ ಅಸ್ತಮಾ ಕಾಯಿಲೆಗಾಗಿ ಕುಮಟಾದಲ್ಲಿ ಪಂಚಕರ್ಮ ಚಿಕಿತ್ಸಾಲಯವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿದೇಶಿ ಪ್ರಜೆ ಆಗಿದ್ದರಿಂದ ಹಾಗೂ ಅವರಿಗೆ ಕೆಮ್ಮು ಕೂಡ ಇದ್ದಿದ್ದರಿಂದ ಅವರನ್ನು ಕುಮಟಾ ತಾಲೂಕು ಆಸ್ಪತ್ರೆಗೆ ಇತ್ತೀಚಿಗೆ ಕರೆತರಲಾಗಿತ್ತು. ಆದರೆ, ಈ ವೇಳೆ ವೈದ್ಯಕೀಯ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಸಾಧನಗಳನ್ನು (ಫುಲ್ ಬಾಡಿ ಸೂಟ್, ಮಾಸ್ಕ್, ಗ್ಲೌಸ್) ಧರಿಸಿ, ಮಹಿಳೆಯನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆ ತಂದಿದ್ದರು.
ಆದರೆ, ಯಾರೋ ಕಿಡಿಗೇಡಿಗಳು ಮಹಿಳೆಯನ್ನು ಆಸ್ಪತ್ರೆಯ ಸಿಬ್ಬಂದಿ ಆಂಬುಲೆನ್ಸ್ ನಿಂದ ಇಳಿಸುತ್ತಿದ್ದ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಫೋಟೊ ವೈರಲ್ ಆಗುತ್ತಿದ್ದಂತೆ ಆಕೆಗೆ ಕೊರೋನಾ ವೈರಸ್ ತಗುಲಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಬಳಿಕ ಆಕೆಯನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆಕೆಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದಾಗ ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ. ಆದರೆ, ಕೊರೊನಾದಿಂದಾಗಿ ಆಕೆಯ ಅಸ್ತಮಾ ಚಿಕಿತ್ಸೆ ಅರ್ಧಕ್ಕೆ ಮೊಟಕುಗೊಂಡಿತು.