ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್?
ಕಾರವಾರ, ಜನವರಿ 15: ರಾಜ್ಯದ ದೋಸ್ತಿ ಸರ್ಕಾರದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಇತ್ತ ಲೋಕಸಭೆ ಚುನಾವಣೆಗೆ ಬಿಜೆಪಿ ಆಪರೇಶನ್ ಕಮಲ ಆರಂಭಿಸಿರುವ ಬಗ್ಗೆಯೂ ಸುದ್ದಿಯಾಗುತ್ತಿದೆ. ಇದೀಗ ಕಮಲದ ಸೆಳೆತಕ್ಕೆ ಸಿಲುಕಿದವರಲ್ಲಿ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಅವರ ಹೆಸರೂ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವವರ ಪಟ್ಟಿಯಲ್ಲಿ ಹೆಬ್ಬಾರ್ ಹೆಸರೂ ಕೇಳಿ ಬರುತ್ತಿದೆ. ಇದರ ಜತೆಗೆ ಶಾಸಕ ಹೆಬ್ಬಾರ ದೆಹಲಿಗೆ ತೆರಳಿದ್ದಾರೆ ಎನ್ನುವ ಗಾಳಿ ಸುದ್ದಿಯೂ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಇದು ಅವರ ಪಕ್ಷಾಂತರ ಪರ್ವಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಿದೆ.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬಹುಮತ ಪಡೆದು ಅಧಿಕಾರ ಪಡೆದಾಗ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರೂ, ಶಿವರಾಮ ಹೆಬ್ಬಾರ ಪ್ರಭಾವ ಹೊಂದಿದ್ದ ಕಾರಣ ಮಂತ್ರಿ ಸ್ಥಾನಕ್ಕೆ ಹೆಸರು ಕೇಳಿಬಂದಿತ್ತು. ಆದರೆ ಕೊನೆಗೆ ನಿಗಮವೂ ಸಹ ಅವರಿಗೆ ಲಭ್ಯವಾಗಿರಲಿಲ್ಲ. ಜಿಲ್ಲೆಯ ಈರ್ವರಿಗೆ ನಿಗಮ ಸಿಕ್ಕಿದ್ದರೂ ಹೆಬ್ಬಾರರನ್ನು ಕಡೆಗಣನೆ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್
ಆದರೆ ಈ ಬಾರಿಯ ದೋಸ್ತಿ ಸರ್ಕಾರದಲ್ಲಿ ಹೆಬ್ಬಾರರಿಗೆ ನಿಗಮ ಸ್ಥಾನ ನೀಡಲಾಗಿದ್ದು, ಮಂತ್ರಿ ಆಕಾಂಕ್ಷಿಯಾಗಿದ್ದ ಹೆಬ್ಬಾರ್ ಹಿರಿಯರ ಮೇಲೆ ಮುನಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಹೆಬ್ಬಾರರಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ
ಶಾಸಕ ಹೆಬ್ಬಾರರನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ನಷ್ಟದಲ್ಲಿರುವ ಕಂಪನಿಯಲ್ಲಿರುವ ನಿಗಮವನ್ನು ನೀಡಿದ್ದಾರೆ ಎಂದು ಮುನಿಸಾಗಿದ್ದಾರೆ ಎನ್ನಲಾಗಿದೆ. ಶಾಸಕ ಹೆಬ್ಬಾರ್ ಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೂ ಮನಸ್ತಾಪವಿರುವ ಕಾರಣ ಹೆಬ್ಬಾರರಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದು, ಈ ಕಾರಣದಿಂದಲೇ ಅವರು ಬಿಜೆಪಿಗೆ ಹೋಗಬಹುದು ಎಂದು ಹೇಳಲಾಗುತ್ತಿದೆ. ನಿಗಮದ ಅಧ್ಯಕ್ಷರಾಗಿ ಜ.18 ರಂದು ಅಧಿಕಾರ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಹೆಬ್ಬಾರ್ ಅದನ್ನು ಮುಂದೂಡಿದ್ದಾರೆ. ಅದೇ ದಿನ ಮೈಸೂರಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಚ್.ಕೆ.ಪಾಟೀಲ್ ಅಧಿಕಾರ ವಹಿಸಿಕೊಳ್ಳುವ ಕಾರ್ಯಕ್ರಮ ಇದೆ. ಅದರಲ್ಲಿ ಭಾಗವಹಿಸಲು ಈ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಹೇಳಲಾಗಿದೆ. ಆದರೆ ಹಿರಿಯ ನಾಯಕರ ಮುನಿಸಿನ ಮೇಲೆ ಮುಂದೂಡಿದ್ದಾರೆ ಎಂಬುದು ಸ್ಥಳೀಯ ಕೈ ನಾಯಕರ ಅಭಿಪ್ರಾಯವಾಗಿದೆ. ಒಟ್ಟಾರೆಯಾಗಿ ಸಿಗಬೇಕಾದ ಪ್ರಾಮುಖ್ಯತೆ ಪಕ್ಷದಲ್ಲಿ ಸಿಗದಿರುವ ಕಾರಣ ಗೊಂದಲಗಳು ಹೆಚ್ಚಾಗಿದ್ದು, ಹೆಬ್ಬಾರರ ನಡೆ ಎಲ್ಲರಲ್ಲಿ ಕುತೂಹಲ ಮೂಡಿಸಿರುವುದಂತೂ ನಿಜ.
ಅತೃಪ್ತಿ ಇದೆಯಾದರೂ ಪಕ್ಷ ಬಿಡಲ್ಲ ಎಂದ ಜೆಡಿಎಸ್ ಶಾಸಕ
ಬಿಜೆಪಿ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ
ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಆಯ್ಕೆಯಾದ ನಂತರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಹೆಬ್ಬಾರ ಅಭಿಮಾನಿಗಳು ಹೋರಾಟ ಮತ್ತು ಪ್ರತಿಭಟನೆ ನಡೆಸಿದ್ದರು. ಆದರೆ ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಬೇಸರಗೊಂಡಿದ್ದ ಅವರ ಅಭಿಮಾನಿಗಳು ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನ-ಮಾನ ನೀಡಬೇಕೆಂದು ವರಿಷ್ಠರಲ್ಲಿ ಒತ್ತಾಯಿಸಿದ್ದರು. ನಂತರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಆದರೂ ತೃಪ್ತಿ ಹೊಂದದ ಅವರ ಅಭಿಮಾನಿಗಳು ಈ ನಡೆಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಶಾಸಕ ಶಿವರಾಮ ಹೆಬ್ಬಾರ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಬಿಜೆಪಿಯ ಹಿರಿಯ ನಾಯಕರ ಜೊತೆ ಉತ್ತಮ ಸಂಬಂಧವಿರಿಸಿಕೊಂಡಿರುವ ಕಾರಣ ಹೆಬ್ಬಾರರನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಈ ಹಿಂದೆಯೇ ಹಲವಾರು ಬಾರಿ ಬಿಜೆಪಿಗೆ ಬರುವಂತೆ ಕರೆ ನೀಡಿದ್ದು, ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಮಂತ್ರಿಸ್ಥಾನ ನೀಡಲಾಗುತ್ತದೆ ಎಂಬ ಆಫರ್ ಅನ್ನು ಮನೆ ಬಾಗಿಲಿಗೆ ಬಂದು ಆಶ್ವಾಸನೇ ನೀಡಿದ್ದರು. ಆದರೆ ಅದನ್ನು ತಿರಸ್ಕರಿಸಿದ ಹೆಬ್ಬಾರ ಮತ್ತೆ ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಕೇಳಿಬರುತ್ತಿದೆ. ಒಟ್ಟಾರೆಯಾಗಿ ಈ ದೋಸ್ತಿ ಸರ್ಕಾರ ಪತನವಾದರೆ, ಶಾಸಕ ಶಿವರಾಮ ಹೆಬ್ಬಾರ ಬಿಜೆಪಿ ಸೇರುವುದಂತೂ ನಿಜ ಎಂಬ ಮಾತು ಕ್ಷೇತ್ರದಾದ್ಯಂತ ಕೇಳಿಬರುತ್ತಿದೆ.
ಜೆಡಿಎಸ್ ಶಾಸಕರ ಸಭೆ ಕರೆದಿಲ್ಲ: ದೇವೇಗೌಡ ಸ್ಪಷ್ಟನೆ
ಆರ್.ವಿ.ದೇಶಪಾಂಡೆಯವರಿಗೆ ಇಷ್ಟವಿಲ್ಲ
ಜಿಲ್ಲೆಯಲ್ಲಿರುವ ಇಬ್ಬರು ಕಾಂಗ್ರೆಸ್ ಶಾಸಕರಲ್ಲಿ ಹೆಬ್ಬಾರರು ಒಬ್ಬರಾಗಿದ್ದು, ಅವರು ರಾಜಕೀಯವಾಗಿ ಮೇಲೆ ಬರುವುದು ಆರ್.ವಿ ದೇಶಪಾಂಡೆಯವರಿಗೆ ಇಷ್ಟವಿಲ್ಲ ಎನ್ನುವುದು ಜಿಲ್ಲಾ ನಾಯಕರ ಅಭಿಪ್ರಾಯವಾಗಿದೆ. ಅವರು ಬಿಜೆಪಿಗೆ ಹೋಗುವ ಮೊದಲು ಅವರಿಗೆ ನಿಡಬೇಕಾದ ಸೂಕ್ತ ಸ್ಥಾನಮಾನ ನೀಡಿ, ಅವರನ್ನು ಮಂತ್ರಿ ಮಾಡಿ ಅಥವಾ ಉತ್ತಮ ನಿಗಮ ಮಂಡಳಿಯನ್ನು ನೀಡಿ ಪಕ್ಷದಲ್ಲಿ ಪ್ರಾಮುಖ್ಯತೆ ನೀಡಬೇಕು ಎಂದು ಅವರ ಅಭಿಮಾನಿಗಳು, ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಇತ್ತ ಶಾಸಕ ಶಿವರಾಮ ಹೆಬ್ಬಾರ್, ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದೇನೆ. ಇತರ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಇದೆಲ್ಲಾ ಸುಳ್ಳು ಪ್ರಚಾರ
ನಾನು ಬಿಜೆಪಿ ಸೇರುತ್ತೇನೆ. ರೆಸಾರ್ಟ್ ರಾಜಕೀಯ ಮಾಡುತ್ತಿದ್ದೇನೆ ಎಂದು ಸಾಕಷ್ಟು ದಿನಗಳಿಂದ ಸುಳ್ಳು ಪ್ರಚಾರ ನಡೆಯುತ್ತಿದೆ. ನಾನು ನನ್ನ ಕುಟುಂಬದೊಂದಿಗೆ ಪ್ರವಾಸಕ್ಕೆಂದು ಅಂಡಮಾನ್ ಹೋಗಿದ್ದೆ. ಈಗ ವಾಪಸ್ ಬರುತ್ತಿದ್ದು, ಗುರುವಾರ ಯಲ್ಲಾಪುರಕ್ಕೆ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನಿಗದಿಯಾದಂತೆ ಶುಕ್ರವಾರ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶುಕ್ರವಾರ ಬೆಂಗಳೂರಿನಲ್ಲಿ ನಮ್ಮ ನಾಯಕರಾದ ಎಚ್.ಕೆ. ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಕಾರಣ ಈ ಕಾರ್ಯಕ್ರಮ ಮುಂದೆ ಹೋಗಿದೆ. ಮುಂದಿನ ದಿನಾಂಕ ನಿಗದಿ ಪಡಿಸಿ ತಿಳಿಸುತ್ತೇನೆ ಎಂದರು.