ತುಕ್ಕು ಹಿಡಿಯುತ್ತಿದೆ ನಟ್- ಬೋಲ್ಟ್; ನಿರ್ವಹಣೆ ಇಲ್ಲದೇ ಸೊರಗಿದೆ ಶಿವಪುರ ತೂಗು ಸೇತುವೆ
ಉತ್ತರ ಕನ್ನಡ, ಡಿಸೆಂಬರ್ 08: ಬಹು ಬೇಡಿಕೆಯಿಂದ ಐದು ವರ್ಷಗಳ ಹಿಂದೆ ಜೊಯಿಡಾ ತಾಲೂಕಿನ ಶಿವಪುರ ನಡುಗಡ್ಡೆಗೆ ಹೋಗಲು ನಿರ್ಮಿಸಿರುವ ತೂಗು ಸೇತುವೆ ಈಗ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಸೇತುವೆಗೆ ಅಳವಡಿಸಲಾಗಿರುವ ಕೇಬಲ್, ನಟ್ ಬೋಲ್ಟ್ ಗಳು ತುಕ್ಕು ಹಿಡಿಯುತ್ತಿದ್ದು, ನೂರು ವರ್ಷ ಬಾಳಿಕೆ ಬರಬೇಕಾದ ಸೇತುವೆ, ಇನ್ನು ಐದಾರು ವರ್ಷಗಳಲ್ಲೇ ಕುಸಿದು ಬೀಳುತ್ತದೇನೋ ಎಂಬ ಆತಂಕ ಎದುರಾಗಿದೆ.
ಶಿವಪುರ ಗ್ರಾಮದ ಸಮೀಪ ಹರಿಯುವ ಕಾಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿಕೊಡುವಂತೆ 25 ವರ್ಷಗಳ ಕಾಲ ಹೋರಾಟ ನಡೆಸಿದ ಬಳಿಕ ಈ ತೂಗು ಸೇತುವೆ ಮಂಜೂರಾಗಿತ್ತು. 3 ಕೋಟಿ ವೆಚ್ಚದಲ್ಲಿ ಬರೋಬ್ಬರಿ 234 ಮೀಟರ್ ಉದ್ದ ಹಾಗೂ 1.50 ಮೀಟರ್ ಅಗಲದ ತೂಗು ಸೇತುವೆ 2015ರಲ್ಲಿ ಪೂರ್ಣಗೊಂಡು ಲೋಕಾರ್ಪಣೆಯಾಗಿದೆ. ಮುಂದೆ ಓದಿ...

ಪ್ರವಾಸಿಗರ ಆಕರ್ಷಣೆ ಕೇಂದ್ರ ತೂಗು ಸೇತುವೆ
ಸೇತುವೆ ನಿರ್ಮಾಣ ಯಲ್ಲಾಪುರ ಹಾಗೂ ಜೊಯಿಡಾ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಒದಗಿಸಿದ್ದು, ಇನ್ನೊಂದೆಡೆ ಸಮೀಪದಲ್ಲೇ ಸಾತೊಡ್ಡಿ ಜಲಪಾತ ಇರುವುದರಿಂದ ತೂಗು ಸೇತುವೆ ಪ್ರವಾಸಿಗರ ಆಕರ್ಷಣೆಯಾಗಿ ಮಾರ್ಪಟ್ಟಿದೆ. ಆದರೆ, ಸೇತುವೆ ನಿರ್ಮಾಣವಾಗಿ ಐದು ವರ್ಷಗಳೇ ಕಳೆದಿದ್ದರೂ ನಿರ್ವಹಣೆ ಕಾರ್ಯ ಮಾತ್ರ ನಡೆಯುತ್ತಿಲ್ಲ.

ಮೂರು ವರ್ಷಕ್ಕೊಮ್ಮೆ ನಿರ್ವಹಣೆ ಅನಿವಾರ್ಯ
ಸೇತುವೆ ನಿರ್ಮಾಣವಾದ ವೇಳೆ ಮೂರು ವರ್ಷಗಳಿಗೆ ಒಮ್ಮೆಯಾದರೂ ಗ್ರೀಸಿಂಗ್ ಮಾಡಬೇಕು ಎಂದು ಹೇಳಲಾಗಿತ್ತಾದರೂ, ಒಮ್ಮೆಯೂ ಈ ಕಾರ್ಯ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ತೂಗು ಸೇತುವೆ ವೀಕ್ಷಣೆಗೆ ಪ್ರತಿನಿತ್ಯ ಸಾಕಷ್ಟು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಸೇತುವೆ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಕೆಲವರು ಎಂಜಾಯ್ ಮಾಡಿದರೆ, ಕೆಲ ಯುವಕರು ತಮ್ಮ ಬೈಕ್ ಗಳನ್ನೇ ಸೇತುವೆ ಮೇಲೆ ನಿಲ್ಲಿಸಿಕೊಂಡು ಫೋಟೊಶೂಟ್ ಮಾಡುತ್ತಿರುತ್ತಾರೆ.

ಎಚ್ಚರಿಕೆ ಫಲಕವಿದ್ದರೂ ಪ್ರಯೋಜನವಿಲ್ಲ
ಸೇತುವೆ ಮೇಲೆ ಏಕಕಾಲಕ್ಕೆ ಹೆಚ್ಚಿನ ಭಾರ ಬೀಳದಂತೆ ಎಚ್ಚರಿಕೆ ಫಲಕ ಅಳವಡಿಸಲಾಗಿದೆಯಾದರೂ, ಯಾರೊಬ್ಬರೂ ಇದನ್ನು ಪಾಲನೆ ಮಾಡುತ್ತಿಲ್ಲ. ಇದರಿಂದ ದಶಕಗಳ ಹೋರಾಟದ ಬಳಿಕ ನಿರ್ಮಾಣವಾಗಿರುವ ಸೇತುವೆ ಎಲ್ಲಿ ಹಾಳಾಗಿ ಬಿಡುವುದೋ ಎನ್ನುವ ಆತಂಕ ಗ್ರಾಮಸ್ಥರದ್ದು.
Recommended Video

ಗ್ರಾಮಸ್ಥರಿಂದ ಶುಲ್ಕ ವಸೂಲಿ
ಪ್ರತಿವರ್ಷ ಜಾತ್ರೆಗಳ ಸಂದರ್ಭ ಗ್ರಾಮಸ್ಥರಿಂದ ಸೇತುವೆ ನಿರ್ವಹಣೆಗೆಂದು ಉಳವಿ ಗ್ರಾಮ ಪಂಚಾಯತಿ ವತಿಯಿಂದ ಶುಲ್ಕ ವಸೂಲಿ ಮಾಡಲಾಗುತ್ತದೆಯಾದರೂ, ಒಮ್ಮೆಯೂ ಆ ಹಣವನ್ನು ಸೇತುವೆ ನಿರ್ವಹಣೆಗಾಗಿ ಬಳಕೆ ಮಾಡಿಲ್ಲ. ಪ್ರತಿನಿತ್ಯ ಗ್ರಾಮಸ್ಥರು ಯಲ್ಲಾಪುರ ಮಾರುಕಟ್ಟೆಗೆ ತೆರಳಲು ಇದೇ ಸೇತುವೆ ಬಳಕೆ ಮಾಡಬೇಕಿದ್ದು, ಸೇತುವೆ ಶಿಥಿಲಗೊಂಡರೆ ಮತ್ತೆ ತೆಪ್ಪ ಏರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications