ವರ್ಷಕ್ಕೆ 7 ದಿನ ಮಾತ್ರ ದರ್ಶನ ನೀಡುವ ಸಾತೇರಿ ದೇವಿ; ಕಾರವಾರದಲ್ಲೊಂದು ವಿಭಿನ್ನ ದೇವಾಲಯ!
ಕಾರವಾರ, ಸೆಪ್ಟೆಂಬರ್, 05: ಸಾಮಾನ್ಯವಾಗಿ ಎಲ್ಲೆಡೆ ದೇವಾಲಯಗಳಲ್ಲಿ ನಿತ್ಯವೂ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಕೆಲವು ದೇವಾಲಯಗಳಲ್ಲಿ ದಿನವಿಡಿ ವಿವಿಧ ಸೇವೆಗಳು, ಧಾರ್ಮಿಕ ವಿಧಿ, ವಿಧಾನಗಳನ್ನು ನಡೆಸಲಾಗುತ್ತದೆ. ಆದರೆ ಕಾರವಾರದ ಹಣಕೋಣದ ದೇವಾಲಯದಲ್ಲಿ ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆಯಲಿದ್ದು, ದೇವಿಯ ದರ್ಶನ ಲಭ್ಯ ಆಗಲಿದೆ.
ಹೌದು, ಇಂತಹದೊಂದು ವಿಭಿನ್ನ ದೇವಾಲಯ ಕಾರವಾರದ ಹಣಕೋಣದಲ್ಲಿಇದೆ. ಸಾತೇರಿಯ ದೇವಿ ಎಂದೇ ಕರೆಸಿಕೊಳ್ಳುವ ಈ ದೇವಾಲಯದಲ್ಲಿ ವರ್ಷದಲ್ಲಿ ಏಳು ದಿನ ಮಾತ್ರ ಪೂಜೆ ನಡೆಯುತ್ತದೆ. ಸಾತೇರಿದೇವಿ ತನ್ನ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಭಕ್ತರಿಗೆ ದರ್ಶನ ನೀಡುವ ಸಂಪ್ರದಾಯ ಇದೆ. ಈ ಬಾರಿ ಸೆಪ್ಟೆಂಬರ್ 4ರಿಂದ ದೇವಿಯ ಜಾತ್ರಾ ಮಹೋತ್ಸವ ಪ್ರಾರಂಭ ಆಗಿದ್ದು, ಸೆಪ್ಟೆಂಬರ್ 9ರಂದು ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರು ದಸರಾ ಪ್ರವಾಸ ಪ್ಯಾಕೇಜ್: ಇಲ್ಲಿದೆ ಮಾಹಿತಿ
ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ದರ್ಶನಕ್ಕೆ ಅವಕಾಶವಿರುವ ಈ ಸಾತೇರಿ ದೇವಿಗೆ ಪೌರಾಣಿಕ ಇತಿಹಾಸ ಕೂಡ ಇದೆ. ಹಣಕೋಣದಲ್ಲಿರುವ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಕಾರದ ಅಗತ್ಯ ಇದ್ದರೆ ಭಕ್ತರ ಸಮ್ಮುಖದಲ್ಲಿ ಪ್ರತ್ಯಕ್ಷಳಾಗಿ ಕಷ್ಟಗಳನ್ನ ನಿವಾರಿಸುತ್ತಿದ್ದಳಂತೆ.
ಆಡಳಿತ ಮಂಡಳಿ ಸದಸ್ಯರ ಅಭಿಪ್ರಾಯ
ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನು ಬಾಚಿಕೊಳ್ಳುವಾಗ ಒಬ್ಬ ದುಷ್ಟನ ಕಣ್ಣು ದೇವಿಯ ಮೇಲೆ ಬಿದ್ದಿತಂತೆ. ದೇವಿಯನ್ನು ತನ್ನವಳಾಗಿಸಿಕೊಸಿಕೊಳ್ಳಲು ಬಂದಾಗ ತನ್ನ ಆಕೆ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ ಊರಿನ ಹಿರಿಯನೋರ್ವನಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು, ತಾನು ನೆಲೆಸಿರುವ ಸ್ಥಳದಲ್ಲೇ ಗುಡಿ ಕಟ್ಟಿಸಿ ಕೊಡುವಂತೆ ಹೇಳಿದ್ದಳಂತೆ. ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತನ್ನ ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ.
ದೇವಿಯ ಆದೇಶದಂತೆ ಈ ಜಾಗದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು. ಇತಿಹಾಸದಂತೆ ಇಲ್ಲಿಯವರೆಗೂ ನಂದನ ನಾಮ ಸಂವತ್ಸರ, ಭಾದ್ರಪದ ಮಾಸ, ಶುಕ್ಲ ಪಕ್ಷದಂದು ಸಾತೇರಿ ದೇವಿಯ ದೇವಸ್ಥಾನದ ಬಾಗಿಲು ತೆರೆದು ಏಳು ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ದೊರಕಿಸಿಕೊಡಲಾಗುತ್ತದೆ ಎಂದು ಇಲ್ಲಿನ ಆಡಳಿತ ಮಂಡಳಿ ಸದಸ್ಯರು ಹೇಳುತ್ತಿದ್ದಾರೆ.
ಹಂಪಿಯ ವಿರೂಪಾಕ್ಷ ದೇಗುಲದ ಕಲ್ಲಿನ ಕಂಬಗಳು ಕುಸಿತ, ಪ್ರವಾಸಿಗರಿಗೆ ಆತಂಕ
ಫೋಟೋ, ವಿಡಿಯೋ ತೆಗೆದರೆ ತಟ್ಟುವ ಶಾಪ
ಇನ್ನು ವರ್ಷಕ್ಕೆ ಏಳು ದಿನ ಮಾತ್ರ ದರ್ಶನ ಸಿಗುವ ದೇವಿಯ ಭಾವಚಿತ್ರ ಮಾರಾಟ ಮಾಡುವುದಾಗಲಿ, ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರಿಸಿಕೊಳ್ಳುವುದಕ್ಕಾಗಲಿ ದೇವಸ್ಥಾನದಲ್ಲಿ ಅವಕಾಶವಿಲ್ಲ. ಯಾರಾದರೂ ಫೋಟೊ ತೆಗೆದಲ್ಲಿ ಅಂತಹವರಿಗೆ ಕೆಟ್ಟದ್ದಾಗುತ್ತದೆ ಎನ್ನುವ ನಂಬಿಕೆ ಇದೆ. ದೇವಿಯ ದರ್ಶನಕ್ಕಾಗಿ ರಾಜ್ಯದಿಂದ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಸಹ ಭಕ್ತರು ಆಗಮಿಸುವುದು ವಿಶೇಷವಾಗಿದೆ.
ಸೆಪ್ಟೆಂಬರ್ 9ರವರೆಗೆ ಕಾರ್ಯಕ್ರಮಗಳ ಪಟ್ಟಿ
ಸೆಪ್ಟೆಂಬರ್ 3ರಂದು ಮಧ್ಯರಾತ್ರಿ 12 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿತ್ತು. ಸೆಪ್ಟೆಂಬರ್ 4ರಂದು ಕುಳಾವಿ ಸಮುದಾಯದ ಮಾತೆಯರು, ಕುವರಿಯರಿಂದ ಅಡಕೆ, ಪುರುಷರಿಂದ ತಳಯ ಸಲ್ಲಿಸಿದ್ದಾರೆ. ಇಂದಿನಿಂದ ಸೆಪ್ಟೆಂಬರ್ 9ರವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಿದ್ದಾರೆ.
ಕಾರ್ಯಕ್ರಮಕ್ಕೆ ನಿಗದಿ ಮಾಡಲಾದ ಸಮಯ
ಇಂದು ಸಂಜೆ 7ಗಂಟೆಯಿಂದ ಸದಾಶಿವಗಡದ ಓಕಾರ ಭಕ್ತಿ ಸಂಗೀತ ಮಂಡಳಿಯಿಂದ ಭಜನೆ, ಸೆಪ್ಟೆಂಬರ್ 6ರಂದು ಬೆಳಗ್ಗೆ 10 ಗಂಟೆಯಿಂದ ಮಹಾಪ್ರಸಾದ ವಿತರಣೆ, ಸಂಜೆ 7ಕ್ಕೆ ಹಣಕೋಣದ ರಾಮದಾಸ ರಾಯ್ಕರ ಭಜನಾ ಮಂಡಳಿಯಿಂದ ಭಜನೆ, ಸೆಪ್ಟೆಂಬರ್ 7ರಂದು ಬೆಳಗ್ಗೆ 10 ಗಂಟೆಯಿಂದ ಪ್ರಸಾದ ವಿತರಣೆ, ಸಂಜೆ 7ಕ್ಕೆ ಗಂಟೆಯಿಂದ ಕಾಣಕೋಣ ಭಕ್ತಮಂಡಳಿಯಿಂದ ಭಜನೆ, ಸೆಪ್ಟೆಂಬರ್ 8ರಂದು ಬೆಳಗ್ಗೆ 10 ಗಂಟೆಯಿಂದ ಪ್ರಸಾದ ವಿತರಣೆ, ಸಂಜೆ 7 ಗಂಟೆಯಿಂದ ಮಾಜಾಳಿಯ ಸಂಕಟಮೋಚನ ಹನುಮಾನ ಭಕ್ತ ಮಂಡಳಿಯಿಂದ ಭಜನೆ ಮಾಡಲಾಗುತ್ತದೆ. ಇನ್ನು ಕೊನೆಯ ದಿನವಾದ ಸೆಪ್ಟೆಂಬರ್ 9ರಂದು ಸಂಜೆ 4 ಗಂಟೆಯವರೆಗೆ ಸೇವೆ ಸ್ವೀಕಾರ ನಡೆಯಲಿದ್ದು, ಸಂಜೆ 5 ಗಂಟೆಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ.