ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಳ್ಕೂರು ಕೃಷ್ಣಯಾಜಿ ಪರಿಚಯ
ಕಾರವಾರ, ನವೆಂಬರ್ 1 : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಬಳ್ಕೂರು ಕೃಷ್ಣಯಾಜಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಯಕ್ಷಗಾನ ಅಭಿಮಾನಿಗಳಿಗೆ ಹಾಗೂ ಜಿಲ್ಲೆಯ ಜನರಿಗೆ ಇದು ಅಭಿಮಾನದ ಸಂಗತಿಯಾಗಿದೆ.
ಯಕ್ಷಗಾನದಲ್ಲಿ ಯಾಜಿಯವರು ಸಾಧಿಸಿದ ಸಾಧನೆ ಅಪಾರ. ಬೆಳೆದ ಪರಿ ಅಭ್ಯಾಸಿಗಳಿಗೆ ಆದರ್ಶ. ಬಾಲ ಗೋಪಾಲ ವೇಶದಿಂದ, ಪೀಠಿಕಾ ಸ್ತ್ರೀ ವೇಶ, ಒಡ್ಡೋಲಗದಿಂದ ಹಿಡಿದು ಇಂದು ಯಾವ ಪಾತ್ರಕ್ಕಾದರೂ ಸೈ ಎನಿಸಬಲ್ಲ ಮತ್ತೊಬ್ಬ ಕಲಾವಿದನಿಲ್ಲ. ಉತ್ತರಕನ್ನಡದ ಶೈಲಿಯನ್ನು ಇವರಷ್ಟು ಪ್ರಭುದ್ಧವಾಗಿ ಅಭಿನಯಿಸಬಲ್ಲವರೂ ಬೇರೊಬ್ಬರಿಲ್ಲ.

ಮಹಾಬಲ ಹೆಗಡೆಯವರ ಮೆಚ್ಚಿನ ಶಿಷ್ಯನಾಗಿ, ಇತ್ತೀಚೆಗಷ್ಟೇ ಡಾ.ಮಹಾಬಲ ಹೆಗಡೆ ಪ್ರಶಸ್ತಿಯನ್ನು ಪಡೆದ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವದು ಯಕ್ಷಗಾನ ಪ್ರಿಯರಿಗೆ ಸಂತಸದ ವಿಷಯವಾಗಿದೆ. ಕೆರಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ನಂತರದಲ್ಲಿ ಬರುವುದೇ ಕೃಷ್ಣಯಾಜಿಯವರ ಹೆಸರು.

ಬಳ್ಕೂರಿನಲ್ಲಿ ಜನಿಸಿದ ಕೃಷ್ಣಯಾಜಿಯವರು ತಮ್ಮೂರಿನ ಹೆಸರಿನೊಂದಿಗೆ ಬಳ್ಕೂರು ಕೃಷ್ಣಯಾಜಿ ಎಂದೇ ಚಿರಪರಿಚಿತರು. ಕನ್ನಡಿಗರ ಹೆಮ್ಮೆಯ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ದೊರೆತಿರುವುದು ಅವರ ಕಲಾವಂತಿಕೆಯ ಮತ್ತು ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ.
ನಾಯಕನ ಪಾತ್ರದಷ್ಟೇ ಸಮರ್ಥವಾಗಿ ಪ್ರತಿನಾಯಕನ ಪಾತ್ರವನ್ನೂ ನಿರ್ವಹಿಸಬಲ್ಲ ಅಸಾಧಾರಣ ಪ್ರತಿಭೆ ಇವರದ್ದು. 'ಕೃಷ್ಣಾರ್ಜುನ ಕಾಳಗ' ಪ್ರಸಂಗದಲ್ಲಿ ಕೃಷ್ಣನ ಪಾತ್ರದಷ್ಟೇ ಸಲೀಸಾಗಿ ಅರ್ಜುನನಾಗಿ ರಂಗದಲ್ಲಿ ಮಿಂಚಬಲ್ಲ ಇವರು, 'ಬಹುಪಾತ್ರ' ಪ್ರತಿಭೆಯುಳ್ಳ ಕಲಾವಿದರು.












Click it and Unblock the Notifications