ವಿಷ್ಣುಗುಪ್ತ ವಿದ್ಯಾಪೀಠದಿಂದ ಹಾಲಕ್ಕಿ, ಮುಕ್ರಿ ಸಮಾಜಕ್ಕೆ ವಿಶೇಷ ಗುರುಕುಲ
ಗೋಕರ್ಣ, ಫೆಬ್ರವರಿ 8: "ಧರ್ಮಜಾಗೃತಿ ಹಾಗೂ ಭಾರತೀಯ ಸಂಸ್ಕೃತಿಯ ಪುನರುತ್ಥಾನದ ಉದ್ದೇಶದಿಂದ ಶ್ರೀ ರಾಮಚಂದ್ರಾಪುರ ಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಈ ವರ್ಷ ಹಾಲಕ್ಕಿ ಗುರುಕುಲ ಮತ್ತು ಚಂದ್ರಗುಪ್ತ ಗುರುಕುಲ ಎರಡು ವಿಶಿಷ್ಟ ಗುರುಕುಲಗಳನ್ನು ಸಮಾಜಕ್ಕೆ ಸಮರ್ಪಿಸುತ್ತಿದೆ" ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಘೋಷಣೆ ಮಾಡಿದರು.
"ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಈಗಾಗಲೇ ಆರಂಭಿಸಿರುವ ಗುರುಕುಲಗಳಿಗೆ ಸಮಾಜದಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದ್ದು, ಬೆಳೆಯುವ ಕುಡಿಗಳ ಉತ್ಸಾಹದಿಂದ ಸ್ಫೂರ್ತಿ ಪಡೆದು ಹಾಲಕ್ಕಿ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆ ಉದ್ದೇಶದಿಂದ ಹಾಲಕ್ಕಿ ಗುರುಕುಲ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಮುಕ್ರಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದ ಚಂದ್ರಗುಪ್ತ ಗುರುಕುಲಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಗೋಕರ್ಣದಲ್ಲಿ ಆರಂಭಿಸಲಾಗುತ್ತಿದೆ" ಎಂದರು.
ಶ್ರೀರಾಮಚಂದ್ರಾಪುರ ಮಠದಿಂದ ವಿಷ್ಣುಗುಪ್ತ ವಿವಿ: ರಾಘವೇಶ್ವರ ಶ್ರೀ
"ಚಂದ್ರಗುಪ್ತ ಚಕ್ರವರ್ತಿ ನೈಜವಾಗಿ, ನಿಮ್ನವರ್ಗಕ್ಕೆ ಸೇರಿದವ. ಆದರೆ, ಸಂಸ್ಕಾರ, ಶಿಕ್ಷಣ ನೀಡಿ ಚಾಣಕ್ಯ ಆತನನ್ನು ಚಕ್ರವರ್ತಿಯಾಗಿ ಬೆಳೆಸಿದ್ದರಿಂದ ಸ್ಫೂರ್ತಿ ಪಡೆದು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಮಾಜದ ಒಂದು ನಿರ್ಲಕ್ಷಿತ ವರ್ಗವಾದ ಮುಕ್ರಿ ಜನಾಂಗದ ಮಕ್ಕಳನ್ನು ಸವ್ಯಸಾಚಿ ಮುಖಂಡರನ್ನಾಗಿ ಬೆಳೆಸುವ ಪಣ ತೊಟ್ಟಿದೆ. ಈ ಎರಡು ವಿಶೇಷ ಗುರುಕುಲಗಳಿಗಾಗಿಯೇ ಸುಮಾರು 10 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಎರಡೂ ಸಮುದಾಯಗಳ ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುವ ಪರಿಸರವನ್ನು ನಿರ್ಮಿಸಿ ಗುರುಕುಲ ಸ್ಥಾಪಿಸಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ಗೋಕರ್ಣ ದಕ್ಷಿಣೆ ಸ್ವೀಕಾರ ವಿವಾದ: ರಾಮಚಂದ್ರಾಪುರ ಮಠಕ್ಕೆ ಗೆಲುವು
"ಎರಡೂ ಗುರುಕುಲಗಳಲ್ಲಿ 2021-22ನೇ ಶೈಕ್ಷಣಿಕ ವರ್ಷ ಆರನೇ ತರಗತಿ ಆರಂಭಿಸಲಾಗುತ್ತದೆ. ಭಾರತೀಯ ಪಾರಂಪರಿಕ ಶಿಕ್ಷಣದ ಜತೆಗೆ ಎನ್ಐಓಎಸ್ ಪಠ್ಯಕ್ರಮದ ಆಧುನಿಕ ಶಿಕ್ಷಣವನ್ನು ನೀಡಲು ಉದ್ದೇಶಿಸಲಾಗಿದೆ. ಇಲ್ಲಿ ಸನಿವಾಸ ಶಿಕ್ಷಣದ ಜತೆಗೆ ಪ್ರತಿ ದಿನ ತಮ್ಮ ಮನೆಗಳಿಂದಲೇ ಬಂದು ಅಧ್ಯಯನ ಮಾಡಲೂ ಅವಕಾಶ ಕಲ್ಪಿಸಲಾಗುತ್ತಿದೆ. ಎರಡೂ ಗುರುಕುಲಗಳಲ್ಲಿ ಆಯಾ ಸಮಾಜದ ವಿಶಿಷ್ಟ ಕಲೆ, ಸಂಸ್ಕೃತಿ, ಆಚಾರ- ವಿಚಾರ, ಆಹಾರ- ವಿಹಾರ, ಸಂಪ್ರದಾಯ, ನಂಬಿಕೆಗಳ ಆಮೂಲಾಗ್ರ ಪರಿಚಯ ಮಾಡಿಕೊಡುವ ಜತೆಗೆ ಹಿಂದೂ ಸಂಸ್ಕೃತಿಯ ಉಚ್ಛಸಂಸ್ಕಾರ, ಉತ್ಕೃಷ್ಟ ಸಮಕಾಲೀನ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗಿ ಬೆಳೆಸುವುದು ಉದ್ದೇಶವಾಗಿದೆ" ಎಂದು ವಿವರಿಸಿದರು.
ಭಾರತತ್ವ ಉಳಿಸಲು ವಿಶ್ವವಿದ್ಯಾಪೀಠ ಸ್ಥಾಪನೆ: ರಾಘವೇಶ್ವರ ಶ್ರೀ
"ಕೋವಿಡ್ ಮಹಾಮಾರಿಯ ನಡುವೆಯೂ ಮೊದಲ ವರ್ಷವೇ ವಿವಿವಿ ಗುರುಕುಲಗಳಿಗೆ ಅದ್ಭುತ ಸ್ಪಂದನೆ ವ್ಯಕ್ತವಾಗಿದ್ದು, ಹಂತ ಹಂತವಾಗಿ ಉನ್ನತ ಶಿಕ್ಷಣಕ್ಕೆ ವಿವಿವಿ ತೆರೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ವಿವಿವಿ ವಿದ್ಯಾ ಪರಿಷತ್ ಹಾಗೂ ವ್ಯವಸ್ಥಾ ಪರಿಷತ್ ಕಾರ್ಯಯೋಜನೆ ಹಾಕಿಕೊಂಡಿದ್ದು, ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭವಾದಾಗ ವಿವಿವಿ ತಕ್ಷಶಿಲೆಯ ಪುನರವತರಣ ಎನಿಸಿಕೊಳ್ಳಲಿದೆ" ಎಂದು ತಿಳಿಸಿದರು.
ಹಾಲಕ್ಕಿ ಗುರುಕುಲ : "ಭಾರತೀಯ ಸಂಸ್ಕೃತಿ ನೂರಾರು ಸಾವಿರಾರು ಜನಾಂಗ, ಬುಡಕಟ್ಟುಗಳ ಸಂಸ್ಕೃತಿಯ ವಿಶ್ವರೂಪ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ತಾಲೂಕುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡುಬರುವ ಹಾಲಕ್ಕಿ ಸಮಾಜದ ವಿಶಿಷ್ಟ ಪರಂಪರೆ, ಸಂಸ್ಕೃತಿ, ಆಚಾರ- ವಿಚಾರ, ಜಾನಪದ ಸಂಸ್ಕೃತಿ, ಕಲೆ, ಹಬ್ಬ ಹರಿದಿನಗಳ ಆಚರಣೆ, ಮಾತು, ವೇಷಭೂಷಣ, ಉಡುಗೆ ತೊಡುಗೆ, ಆಹಾರ- ವಿಹಾರಗಳ ಸಂರಕ್ಷಣೆ- ಸಂವರ್ಧನೆಯ ಮೂಲ ಉದ್ದೇಶದೊಂದಿಗೆ ಹಾಲಕ್ಕಿ ಗುರುಕುಲ ಸ್ಥಾಪನೆಯಾಗುತ್ತಿದೆ" ಎಂದರು.
"ಹಾಲಕ್ಕಿ ಜನಾಂಗ ಹುಟ್ಟಿ ಬೆಳೆದ ಪರಿಸರವನ್ನೇ ನಿರ್ಮಿಸಿ ಅವರ ಸಂಸ್ಕೃತಿಯ ಶ್ರೇಷ್ಠತೆಯನ್ನು ಬಾಲ್ಯದಲ್ಲೇ ಮಕ್ಕಳಿಗೆ ಪರಿಚಯಿಸಿ ಅಭಿಮಾನ ಬೆಳೆಸಿ ಅವುಗಳ ಸಂರಕ್ಷಣೆಗೆ ಸಮಾಜಯೋಧರನ್ನು ಸೃಷ್ಟಿಸುವುದು ಗುರುಕುಲದ ಆಶಯ. ಹಂತಹಂತವಾಗಿ ಹಾಲಕ್ಕಿ ಸಮಾಜದ ಬಗೆಗಿನ ಸಮಗ್ರ ಅಧ್ಯಯನಕ್ಕೆ ಶಾಶ್ವತ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ" ಎಂದು ತಿಳಿಸಿದರು.
ಚಂದ್ರಗುಪ್ತ ಗುರುಕುಲ; "ಸಮಾಜದ ಯಾವ ವರ್ಗವೂ ಜ್ಞಾನಪರಂಪರೆಯಿಂದ ವಂಚಿತವಾಗಬಾರದು ಎಂಬ ಆಶಯದೊಂದಿಗೆ ಪರಿಶಿಷ್ಟರಿಗಾಗಿ ಅದರಲ್ಲೂ ವಿಶೇಷವಾಗಿ ಈ ಭಾಗದ ಮುಕ್ರಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಚಂದ್ರಗುಪ್ತನ ಹೆಸರಿನ ಗುರುಕುಲ ಆರಂಭಿಸಲಾಗುತ್ತಿದೆ. ಈ ಭಾಗದ ಎರಡು ಹಿಂದುಳಿದ ಸಮಾಜಗಳಾದ ಹಾಲಕ್ಕಿ ಮತ್ತು ಮುಕ್ರಿ ಸಮಾಜಗಳು ಶ್ರೀಮಠದ ಪಾರಂಪರಿಕ ಶಿಷ್ಯವರ್ಗದಲ್ಲಿ ಸೇರಿದ್ದು, ಇವರ ಅಭಿವೃದ್ಧಿಯನ್ನು ಶ್ರೀಮಠ ಆದ್ಯತೆಯಾಗಿ ಪರಿಗಣಿಸಿದೆ" ಎಂದರು.
Recommended Video
"ಈ ಜನಾಂಗಗಳು ತಮ್ಮ ವೈಶಿಷ್ಟ್ಯತೆಯನ್ನು ಮತ್ತು ಸ್ವಂತಿಕೆಯನ್ನು ಉಳಿಸಿಕೊಂಡೇ, ಸಮಾಜದ ಮುಖ್ಯವಾಹಿನಿ ಸೇರುವಂತಾಗಬೇಕು ಎಂಬ ಉದ್ದೇಶದಿಂದ ಎನ್ಐಓಎಸ್ ಪಠ್ಯಕ್ರಮದಂತೆ ಸಮಕಾಲೀನ ಶಿಕ್ಷಣ ನೀಡುವ ಜತೆಗೆ, ಭಾರತೀಯ ಕಲೆ- ಸಂಸ್ಕೃತಿಯ ಸಮಗ್ರ ಪರಿಚಯ, ಪಾರಂಪರಿಕ ಶಿಕ್ಷಣ, ವಿಶೇಷ ಕೌಶಲ, ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಜೀವನ ಶಿಕ್ಷಣ ಬೋಧಿಸಲಾಗುತ್ತದೆ" ಎಂದು ವಿವರಣೆ ನೀಡಿದರು.