ಅಪರಿಚಿತ ವ್ಯಕ್ತಿಯ ನೆರವಿಗೆ ಬಂದ ಪೊಲೀಸರು, ಮಾನವೀಯ ಕಾರ್ಯಕ್ಕೆ ಮೆಚ್ಚುಗೆ
ಕಾರವಾರ, ಜೂನ್ 29: ಕಾಲಿಗೆ ಗಾಯವಾಗಿ, ಹುಳುವಾಗಿ ಕಾರವಾರದ ಕದ್ರಾ ಭಾಗದಲ್ಲಿ ಮಾನಸಿಕ ಅಸ್ವಸ್ಥನಂತೆ ಕೆಲ ದಿನಗಳಿಂದ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಕದ್ರಾ ಠಾಣಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಕಳೆದ ಅನೇಕ ದಿನಗಳಿಂದ ಕದ್ರಾ ಭಾಗದಲ್ಲಿ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ. ಈತನ ಕಾಲಿಗೆ ಗಾಯವಾಗಿದ್ದು, ಅದರಲ್ಲಿ ಹುಳುಗಳಾಗಿದ್ದವು. ಒಂದೊಂದು ದಿನ ಒಂದೊಂದು ರೀತಿಯ ವರ್ತನೆ ತೋರುತ್ತಿದ್ದ ಈತನಿಂದಾಗಿ ಸ್ಥಳೀಯರು ಕೂಡ ಭಯಭೀತರಾಗಿದ್ದರು. ಹೀಗಾಗಿ ಸ್ಥಳೀಯ ಸಿಐಟಿಯುವಿನ ಶ್ಯಾಮನಾಥ ಹಾಗೂ ಮಾರಿ ಶೆಟ್ಟಿ ಎನ್ನುವವರು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದರು. ಅಲ್ಲದೇ ಈತನನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡುವಂತೆಯೂ ಕೋರಿದ್ದರು.
ಸ್ಥಳೀಯರ ಮನವಿಯ ಮೇರೆಗೆ ಮಾಧವ ನಾಯಕ ಅವರು ಕದ್ರಾ ಸಿಪಿಐ ಗೋವಿಂದ ದಾಸರಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ನಾಯಕರ ಕರೆಗೆ ಕೂಡಲೇ ಸ್ಪಂದಿಸಿದ ದಾಸರಿ, ಠಾಣಾ ಪಿಎಸ್ಐ ಪ್ರತಾಪ್ ಪಚ್ಚಪ್ಪಗೋಳ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪ್ರತಾಪ್ ಅವರು ಎಎಸ್ಐ ಮಾಧವ್ ಫಳ, ಕಾನ್ಸ್ಟೇಬಲ್ಗಳಾದ ಗೋಪಾಲ ಚೌಹಾಣ್, ನಾಗರಾಜ ತಿಮ್ಮಾಪುರ ಅವರೊಂದಿಗೆ ಸ್ಥಳಕ್ಕೆ ತೆರಳಿ, ಗ್ರಾಮಸ್ಥರ ಸಮ್ಮುಖದಲ್ಲಿ ಆರೋಗ್ಯ ಕವಚ ಅಂಬ್ಯುಲೆನ್ಸ್ ಮೂಲಕ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ವ್ಯಕ್ತಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಅಪರಿಚಿತ ವ್ಯಕ್ತಿಗೆ, ಅದರಲ್ಲೂ ಕಾಲಿಗೆ ಹುಳುವಾಗಿದ್ದವನನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹಾಗೂ ಸಿಪಿಐ ಗೋವಿಂದ ದಾಸರಿ ಮತ್ತವರ ತಂಡಕ್ಕೆ ಸ್ಥಳೀಯರು ಧನ್ಯವಾದ ಹೇಳಿದ್ದಾರೆ.
ಡಾಲ್ಫಿನ್ ಹೊಟ್ಟೆಯಲ್ಲಿ ನೈಲಾನ್ ಬಲೆ ಪತ್ತೆ; ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ಪ್ರಜಾತಿಗೆ ಸೇರಿದ ಡಾಲ್ಫಿನ್ ಮೃತ ದೇಹವೊಂದು ಕಾರಾವಾರ ತಾಲೂಕಿನ ದೇವಭಾಗ ಕಡಲತೀರದಲ್ಲಿ ಪತ್ತೆಯಾಗಿದೆ. ಸುಮಾರು 7.5 ಅಡಿ ಉದ್ದದ ಗಂಡು ಡಾಲ್ಫಿನ್ ಮೃತ ದೇಹ ಇದಾಗಿದೆ. ಎರಡು ದಿನಗಳ ಹಿಂದೆ ದಡಕ್ಕೆ ಬಂದು ಬಿದ್ದಿರುವ ಬಗ್ಗೆ ಅಂದಾಜಿಸಲಾಗಿದ್ದು, ಇದನ್ನು ಕಂಡ ಮೀನುಗಾರರಿಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಬಳಿಕ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ ಅವರ ಮಾರ್ಗದರ್ಶನದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಡಾಲ್ಫಿನ್ ಹೊಟ್ಟೆಯಲ್ಲಿ ನೈಲಾನ್ ಬಲೆ ತುಂಬಿಕೊಂಡಿದ್ದು ಪತ್ತೆಯಾಗಿದೆ.












Click it and Unblock the Notifications