ಕಾರವಾರ: ಕಾಳಿ ನದಿಯಲ್ಲಿ ಮರಳುಗಾರಿಕೆಗೆ ಅಕ್ಟೋಬರ್ನಿಂದ ಅವಕಾಶ?
ಕಾರವಾರ, ಸೆಪ್ಟೆಂಬರ್ 24: ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾಳಿ ನದಿಯಲ್ಲಿ ಮರಳು ತೆಗೆಯುವ ಚಟುವಟಿಕೆಗೆ ಮತ್ತೆ ಅನುಮತಿ ಸಿಗಲಿದ್ದು, ಅಕ್ಟೋಬರ್ನಿಂದ ಮರಳುಗಾರಿಕೆಗೆ ಅನುಮತಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪರಿಸರ ಸೂಕ್ಷ್ಮವಲಯ ಎನ್ನುವ ಕಾರಣಕ್ಕೆ 2018ರಿಂದ ಕಾಳಿ ನದಿಯಲ್ಲಿ ಮರಳು ತೆಗೆಯುವುದನ್ನು ಸ್ಥಗಿತ ಗೊಳಿಸಲಾಗಿತ್ತು. ಕಾಳಿ ನದಿಯಲ್ಲಿ ಮರಳು ತೆಗೆಯುವುದರಿಂದ ಜಲಚರಗಳಿಗೆ ಸಮಸ್ಯೆ ಆಗಲಿದ್ದು, ಮೀನುಗಾರಿಕೆ ಇನ್ನಿತರ ಚಟುವಟಿಕೆಗೆ ಸಮಸ್ಯೆ ಆಗಲಿದೆ ಎಂದು ಮರಳುಗಾರಿಕೆಯನ್ನು ಬಂದ್ ಮಾಡಲಾಗಿತ್ತು. ಮರಳುಗಾರಿಕೆ ಬಂದ್ ಮಾಡಿದ ನಂತರ ಮರಳುಗಾರಿಕೆಯನ್ನೇ ನಂಬಿಕೊಂಡಿದ್ದ ಹಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.
ಕಾಳಿ ನದಿಯಲ್ಲಿ ಮರಳುಗಾರಿಕೆಗೆ ಸದ್ಯಕ್ಕಿಲ್ಲ ಅನುಮತಿ
ಇನ್ನು 2019ರಲ್ಲಿ ಕಾಳಿ ನದಿ ಪ್ರವಾಹದಿಂದ ನದಿ ಪಾತ್ರದ ಹಲವು ಗ್ರಾಮಗಳು ಜಲಾವೃತವಾಗಿ ಸಮಸ್ಯೆಯಾಗಿತ್ತು. ಇನ್ನು ನೆರೆಯಿಂದ ಹಲವೆಡೆ ಮರಳು ದಿಬ್ಬಗಳು ಸೃಷ್ಟಿಯಾಗಿದ್ದು, ಇದರಿಂದ ನದಿ ತೀರ ಅಗಲವಾಗುವುದರಿಂದ ಕಾಳಿ ನದಿಯಲ್ಲಿ ಮತ್ತೆ ಮರಳುಗಾರಿಕೆಗೆ ಅವಕಾಶ ಕೊಡಬೇಕು, ಮರಳು ದಿಬ್ಬಗಳಲ್ಲಿ ಶೇಖರಣೆಗೊಂಡ ಮರಳನ್ನು ತೆಗೆಯಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಈ ಬಗ್ಗೆ ಸತತ ಪ್ರಯತ್ನ ನಡೆಸಿ ಅನುಮತಿಗಾಗಿ ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು.
ಆದರೆ, ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮರಳುಗಾರಿಕೆಗೆ ಅವಕಾಶ ಕೊಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪತ್ರ ಬಂದಿಲ್ಲ ಎನ್ನುವ ಕಾರಣ ನೀಡಿ ವಾಪಸ್ ಪತ್ರ ಕಳುಹಿಸುವಂತೆ ಸೂಚನೆ ನೀಡಲಾಗಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಾಳಿ ನದಿಯಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸುವಂತೆ ರಾಜ್ಯ ಸಿಆರ್ಝೆಡ್ಗೆ ಪತ್ರ ಮಾಡಿದ ಹಿನ್ನಲೆಯಲ್ಲಿ ಸದ್ಯ ಅವಕಾಶ ಕೊಡಲಾಗಿದೆ ಎನ್ನಲಾಗಿದೆ.
ಜೂನ್ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮಳೆಗಾಳ ಇರುವ ಹಿನ್ನಲೆಯಲ್ಲಿ ಮರಳು ತೆಗೆಯಲು ಅವಕಾಶ ಕೊಟ್ಟರೆ, ಜಲಚರಗಳಿಗೆ ಸಮಸ್ಯೆ ಆಗಲಿದೆ ಎಂದು ಮರಳುಗಾರಿಕೆಯನ್ನು ಬಂದ್ ಮಾಡಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳ ನೇತೃತ್ವದ ಏಳು ಸದಸ್ಯದ ಸಿಆರ್ಝೆಡ್ ಸಮಿತಿಯ ಮುಂದೆ ವಿಷಯವನ್ನು ಇಟ್ಟು ಅಂತಿಮ ಅನುಮತಿ ಪಡೆದು ಅಕ್ಟೋಬರ್ ತಿಂಗಳಿನಿಂದ ಮರಳು ತೆಗೆಯಲು ಅನುಮತಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಳಿ ನದಿಯಲ್ಲಿ ನಾಲ್ಕು ಸ್ಯಾಂಡ್ ಬಾರ್ಗಳಲ್ಲಿ ಮರಳು ತೆಗೆಯಲು ಅನುಮತಿ ಕೊಡಲಿದ್ದು, ಸುಮಾರು 40ಕ್ಕೂ ಅಧಿಕ ಲೀಸ್ ಪಡೆದವರು ಮರಳು ತೆಗೆಯಲಿದ್ದಾರೆ. ಕಾಳಿ ನದಿಯಲ್ಲಿ ಮರಳುಗಾರಿಕೆ ಬಂದ್ ಆಗಿದ್ದ ವೇಳೆಯಿಂದಲೂ ಅನುಮತಿ ಕೊಡುವಂತೆ ಲೀಸ್ ಪಡೆದವರು ನಿರಂತರ ಪ್ರಯತ್ನ ನಡೆಸಿದ್ದರು. ಕಾರವಾರ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವು ನಾಯಕರುಗಳು ಮರಳುಗಾರಿಕೆ ಪುನರ್ ಪ್ರಾರಂಭಕ್ಕೆ ಪ್ರಯತ್ನ ನಡೆಸಿದ್ದರು. ಇದೀಗ ಅಂತಿಮ ಹಂತವಾಗಿ ಮರಳುಗಾರಿಕೆಗೆ ಅವಕಾಶ ಸಿಗಲಿದೆ ಎನ್ನಲಾಗಿದ್ದು, ಮರಳು ಲೀಸ್ ಪಡೆದವರು, ಮರಳುಗಾರಿಕೆ ತೊಡಗಿದ್ದ ಕಾರ್ಮಿಕರ ಮುಖದಲ್ಲಿ ಇದು ಮಂದಹಾಸ ಮೂಡಿಸಿದೆ.
ಸಿಆರ್ಝೆಡ್
ಕಮಿಟಿಯೆದುರು
"ಸದ್ಯ
ಮಳೆಗಾಲ
ಆಗಿರುವುದರಿಂದ
ಮರಳುಗಾರಿಕೆ
ನಿಷೇಧವಿದ್ದು,
ಈ
ತಿಂಗಳು
ಅಂತ್ಯವಾದ
ನಂತರ
ಜಿಲ್ಲಾ
ಸಿಆರ್ಝೆಡ್
ಕಮಿಟಿ
ಮುಂದೆ
ವಿಷಯವನ್ನಿಟ್ಟು
ಅನುಮತಿ
ಪಡೆದು,
ಅಕ್ಟೋಬರ್ನಿಂದ
ಅನುಮತಿ
ಕೊಡಲು
ನಿರ್ಧರಿಸಲಾಗಿದೆ,"
ಎಂದು
ಗಣಿ
ಮತ್ತು
ಭೂ
ವಿಜ್ಞಾನ
ಇಲಾಖೆ
ಉಪ
ನಿರ್ದೇಶಕ
ಸೋಮಶೇಖರ್
ತಿಳಿಸಿದ್ದಾರೆ.
Recommended Video
ಕಾಳಿ ನದಿಯಲ್ಲಿ ನಾಲ್ಕು ಸ್ಯಾಂಡ್ ಬಾರ್ಗಳಲ್ಲಿ ಮರಳು ತೆಗೆಯಲು ಅವಕಾಶ ಮಾಡಿಕೊಡಲಿದ್ದೇವೆ. ಉಳಿದಂತೆ ಗಂಗಾವಳಿ, ಅಘನಾಶಿನಿ, ಶರಾವಳಿ ನದಿಯಲ್ಲಿ ಹೊಸ ಸ್ಯಾಂಡ್ ಬಾರ್ಗಳನ್ನು ಗುರುತಿಸಿದ್ದು, ಹೊಸದಾಗಿ ಲೀಸ್ ಪಡೆಯುವವರಿಗೆ ಜಿಲ್ಲಾ ಮಟ್ಟದ ಸಿಆರ್ಝೆಡ್ ಕಮಿಟಿಯಲ್ಲಿ ಅನುಮತಿ ಪಡೆದು ಶೀಘ್ರದಲ್ಲೇ ಅನುಮತಿ ಕೊಡಿಸುವ ಪ್ರಯತ್ನ ಮಾಡಲಾಗಿದ್ದೇವೆ ಎಂದು ಸೋಮಶೇಖರ್ ತಿಳಿಸಿದ್ದಾರೆ.