ಜು.30ಕ್ಕೆ ಪರ್ತಗಾಳಿ ಮಠದ ಯತಿವರ್ಯರಾಗಿ ವಿದ್ಯಾಧೀಶತೀರ್ಥರ ಪೀಠಾರೋಹಣ
ಪಣಜಿ, ಜುಲೈ 28: ಗೋಕರ್ಣ ಪರ್ತಗಾಳಿ ಮಠದ 23ನೇ ಯತಿವರ್ಯರಾಗಿದ್ದ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಜು.19ರಂದು ನಿಧನರಾದ್ದರಿಂದ ಮಠದ 24ನೇ ಗುರುಗಳಾಗಿ ವಿದ್ಯಾಧೀಶತೀರ್ಥ ಸ್ವಾಮೀಜಿ ಜು.30ರಂದು ಪೀಠಾರೋಹಣಗೈಯುತ್ತಿದ್ದಾರೆ.
ಗೋವೆಯ ಪರ್ತಗಾಳಿ ಮಠದಲ್ಲಿ ಪೀಠಾರೋಹಣ ಸಮಾರಂಭ ನಡೆಯಲಿದೆ. ವಿದ್ಯಾಧೀಶ ತೀರ್ಥರ ಜನ್ಮನಾಮ ಉದಯ ಭಟ್ಟ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮದಲ್ಲಿ 1995, ಅ.16ರಂದು ಲಕ್ಷ್ಮಿನಾರಾಯಣ ಭಟ್ಟ ಹಾಗೂ ಪದ್ಮಾವತಿ ಭಟ್ಟ ದಂಪತಿಯ ಪುತ್ರರಾಗಿ ಜನಿಸಿದರು.
ತಂದೆ ಲಕ್ಷ್ಮಿನಾರಾಯಣ ಭಟ್ಟ ಮೂಲತಃ ಭಟ್ಕಳದಲ್ಲಿ ಸಂಸ್ಥಾನದ ಗೋಪಾಲಕೃಷ್ಣ ದೇವಾಲಯದ ಅರ್ಚಕ ಮನೆತನವದರಾಗಿದ್ದಾರೆ. 1992ರಲ್ಲಿ ಬೆಳಗಾವಿಯ ವಿದ್ಯಾಧಿರಾಜ ಭವನ ಕಟ್ಟಲ್ಪಟ್ಟು, ಶ್ರೀಗಳ ಆಜ್ಞೆಯ ಮೇರೆಗೆ ಲಕ್ಷ್ಮಿನಾರಾಯಣ ಭಟ್ಟರು 1996ರಲ್ಲಿ ವೈದಿಕರಾಗಿ ಬೆಳಗಾವಿಯ ವಿದ್ಯಾಧಿರಾಜ ಭವನದಲ್ಲಿ ನೆಲೆಸಿದರು.
ಶಿಕ್ಷಣ
ಇವರಿಗೆ 2006ರ ಏ.17ರಂದು ಬೆಳಗಾವಿಯ ವಿದ್ಯಾಧಿರಾಜ ಸಭಾಭವನದಲ್ಲಿ ತಂದೆಯವರಿಂದ ಉಪನಯನ ಸಂಸ್ಕಾರ ಜರುಗಿತು. ಉದಯ ಭಟ್ಟರ ಪ್ರಾಥಮಿಕ ವಿದ್ಯಾಭ್ಯಾಸ ಬೆಳಗಾವಿಯ ಮಹಿಳಾ ಮಂಡಲ ವಿದ್ಯಾಲಯದಲ್ಲಿ ಹಾಗೂ ಪದವಿಪೂರ್ವ ವಿದ್ಯಾಭ್ಯಾಸ ಗೋವಿಂದರಾಮ ಸಕ್ಸಾರಿಯಾ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿ, ಬೆಳಗಾವಿಯ ಮರಾಠ ಮಂಡಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾಗಲೇ ವಿದ್ಯಾಧಿರಾಜತೀರ್ಥ ಸ್ವಾಮೀಜಿಯವರ ಕೃಪಾಕಟಾಕ್ಷ ಇವರ ಮೇಲೆ ಬಿತ್ತು.

ಪೂರ್ವಭಾವಿಯಾಗಿ ಮನೆತನ, ದೈಹಿಕ, ಮಾನಸಿಕ ಸ್ವಾಸ್ಥ್ಯ, ಬುದ್ಧಿಮತ್ತೆ, ಗುಣ ನಡತೆ, ವ್ಯಾವಹಾರಿಕ ಚತುರತೆ ಇತ್ಯಾದಿ ಸರ್ವಗುಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನಂತರ ಜಾತಕವನ್ನು ಪರಾಮರ್ಶಿಸಿ, ಅದು ಕೂಡಿಬಂದ ಮೇಲೆ ಶ್ರೀರಾಮದೇವರ ಸಮ್ಮತಿಯೂ ದೊರೆತಾಗ ಮಠದ ನಿಯೋಜಿತ ಮಂಡಳಿಯವರು ವಟುವಿನ ಮಾತಾಪಿತೃಗಳ ಸಮ್ಮತಿ, ವಟುವಿನ ಸಮ್ಮತಿ ಪಡೆದು 2014ರ ಮೇ 30ರಂದು ವಟುವನ್ನು ಪರ್ತಗಾಳಿಗೆ ಕರೆತರಲಾಯಿತು. ಅಂದು ಮಠಪರಂಪರೆಯ 18ನೇ ಯತಿವರ್ಯರಾಗಿದ್ದ ಪೂರ್ಣಪ್ರಜ್ಞ ತೀರ್ಥರ ಆರಾಧನೆಯ ದಿನವಾಗಿತ್ತು.
ಉದಯ ಶರ್ಮಾರವರಿಗೆ ಮಾತೃಭಾಷೆ ಕೊಂಕಣಿಯ ಜತೆಗೆ ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಭಾಷಾಜ್ಞಾನ ಇದೆ. ಬಾಲ್ಯದಿಂದಲೂ ತಂದೆಯ ವೈದಿಕ ವೃತ್ತಿಯಲ್ಲಿ ಸಹಾಯ ಮಾಡುತ್ತಾ ಬಂದಿದ್ದರಿಂದ ದೇವರನ್ನು ಪುಷ್ಪಗಳಿಂದ ಅಲಂಕರಿಸುವದೆಂದರೆ ಭಾರೀ ಸಂತೋಷ. ಇವರು ಸ್ವಭಾವತಃ ಮೃದುಭಾಷಿ, ಮಿತಭಾಷಿ, ಸರಳಜೀವಿ, ತಾನು, ತನ್ನ ವ್ಯಾಸಂಗ ಬಿಟ್ಟರೆ ಇತರರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಗುರು- ಹಿರಿಯರಲ್ಲಿ ಗೌರವ, ಸನ್ನಡತೆ, ಧಾರ್ಮಿಕ ಪ್ರವೃತ್ತಿ ಬಾಲ್ಯದಿಂದಲೇ ಮೈಗೂಡಿಕೊಂಡಿದ್ದವು. ಪರ್ತಗಾಳಿಯಲ್ಲಿ ವಿದ್ಯಾಧಿರಾಜ ತೀರ್ಥರು ಜ್ಯೇಷ್ಠ ಶುಕ್ಲ ಪಂಚಮಿಯ ಪುಷ್ಯ ನಕ್ಷತ್ರದ ವೃದ್ಧಿಯೋಗದಲ್ಲಿ ಮಠಪರಂಪರೆಯ ಎಲ್ಲ ಗುರುಗಳ ವೃಂದಾವನವಿದ್ದ ಆವರಣದಲ್ಲಿ ವಿದ್ಯಾಭ್ಯಾಸ ಪ್ರಾರಂಭ ಮಾಡಿದ್ದು ಒಂದು ಸುಯೋಗವೇ ಸರಿ.
ಇಬ್ಬರು ಪಂಡಿತೋತ್ತಮರಿಂದ ಸಂಸ್ಕೃತ, ವ್ಯಾಕರಣ, ಕಾವ್ಯ, ಸಾಹಿತ್ಯ, ವೇದ- ವೇದಾಂಗ ಮುಂತಾದ ವಿದ್ಯಾಭ್ಯಾಸಗಳು ಆರಂಭವಾದವು. ವಟುವು ವಿದ್ಯಾಭ್ಯಾಸದಲ್ಲಿ ವಿಶೇಷ ಆಸಕ್ತಿಯನ್ನು ತೋರಿಸುತ್ತಿದ್ದು, ಅವರ ಕಲಿಕೆಯ ದಾಹ ಎಷ್ಟಿತ್ತೆಂದರೆ ಬ್ರಾಹ್ಮೀ ಮುಹೂರ್ತದಲ್ಲಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಎಂದು ತಿಳಿದು ಸ್ವಯಂಪ್ರೇರಣೆಯಿಂದ ಗುರುಗಳಾದ ವಿದ್ಯಾಧಿರಾಜ ತೀರ್ಥರಲ್ಲಿ ಭಿನ್ನವಿಸಿ ಬೆಳಿಗ್ಗೆ 4.30ಕ್ಕೆ ಪಾಠವನ್ನು ಪಡೆಯ ತೊಡಗಿದರು.
ದಿನಕ್ಕೆ ಐದು ಬಾರಿ ಪಾಠಗಳು ನಡೆಯುತ್ತಿದ್ದವು, ಸ್ವತಃ ಗುರುಗಳು ಪಾಠದ ಸಮಯದಲ್ಲಿ ಉಪಸ್ಥಿತರಿದ್ದು ಮೇಲ್ವಿಚಾರಣೆ ಮಾಡುತ್ತಿದ್ದರು. ಪಾಠದ ನಂತರವೂ ಅಂದಿನ ಪಾಠದ ವಿಷಯದ ಬಗ್ಗೆ ಚರ್ಚಿಸುವುದು, ವಿಷಯ ಮನವರಿಕೆಯಾಗದಿದ್ದಲ್ಲಿ ಶ್ರೀಗಳಲ್ಲಿ ಅಥವಾ ಶಿಕ್ಷಕರಲ್ಲಿ ಕೇಳಿ ಧೃಡೀಕರಿಸಿಕೊಳ್ಳುವದರಿಂದ ವಿದ್ಯಾಭ್ಯಾಸದತ್ತ ಅವರಿಗಿದ್ದ ಆಸಕ್ತಿಯನ್ನು ಕಾಣಬಹುದಿತ್ತು. ಮಠದ ಆರಾಧ್ಯ ದೈವದ ಅನುಗ್ರಹದಿಂದ ಯೋಗ್ಯ ವಟುವು ಲಭ್ಯವಾದ ಬಗ್ಗೆ ಶ್ರೀಗಳವರಿಗೂ ಮಠಾನುಯಾಯಿಗಳಿಗೂ ಸಂತೃಪ್ತಿ ಮೂಡಿತ್ತು.
ಶಿಷ್ಯ ಸ್ವೀಕಾರ ಸಮಾರಂಭವು ಗೋಮಾಂತಕದ ಪರ್ತಗಾಳಿ ಮಠದಲ್ಲಿ 2017ರ ಫೆ.8ರಂದು ಆರಂಭಗೊಂಡು ಮರುದಿನ ಬೆಳಿಗ್ಗೆ 9.22ಕ್ಕೆ ಪ್ರಣವ ಮಂತ್ರೋಪದೇಶ ಜರುಗಿತು. ಈ ಶುಭ ಮುಹೂರ್ತದಲ್ಲಿ ಉದಯ ಭಟ್ಟರಿಗೆ 'ಶ್ರೀವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ' ಎಂದು ಪುನರ್ನಾಮಕರಣ ಮಾಡಲಾಯಿತು. ಈ ಶುಭ ಸಂದರ್ಭವನ್ನು ವೀಕ್ಷಿಸಲು ರಾಜ್ಯ, ಪರರಾಜ್ಯಗಳ ಅಪಾರ ಶಿಷ್ಯಸಾಗರವೇ ಪರ್ತಗಾಳಿಯಲ್ಲಿ ನೆರೆದಿತ್ತು.
ಅನಂತರ ಕಳೆದ 4 ವರ್ಷಗಳಿಂದ ನಿರಂತರವಾಗಿ ವಿದ್ಯಾಧಿರಾಜ ಸ್ವಾಮಿಗಳ ನಿಕಟ ಸಂಪರ್ಕದಲ್ಲಿದ್ದು, ಶ್ರೀಮಠದ ಪರಂಪರೆ, ಅನುಸರಿಸಬೇಕಾದ ನೀತಿ ನಿಯಮಗಳು, ಸಂಪ್ರದಾಯಗಳು ಇವುಗಳನ್ನೆಲ್ಲ ತಿಳಿದುಕೊಂಡರು. 2017ರಲ್ಲಿ ಪರ್ತಗಾಳಿ, 2018ರಲ್ಲಿ ಹುಬ್ಬಳ್ಳಿ, 2019ರಲ್ಲಿ ಬದರೀನಾಥದಲ್ಲಿ ನಡೆದ ಗುರುಗಳ ಸುವರ್ಣ ಚಾತುರ್ಮಾಸ, 2020ರಲ್ಲಿ ಪುನಃ ಪರ್ತಗಾಳಿಯಲ್ಲಿ ನಡೆದ ಚಾತುರ್ಮಾಸ ವೃತಾಚರಣೆಯನ್ನು ಕಣ್ಣಾರೆ ಕಂಡು ವಿದ್ಯಾಧೀಶರು ಅನುಭವ ಗಳಿಸಿದ್ದಾರೆ. ಈ ವರ್ಷ ಪೀಠಾರೋಹಣದ ನಂತರ ಪರ್ತಗಾಳಿ ಮೂಲ ಮಠದಲ್ಲೇ ಜು.31ರಿಂದ ಚಾತುರ್ಮಾಸ ವೃತ ಕೈಗೊಳ್ಳಲಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications