ಹಲವು ಸುರಕ್ಷತಾ ಕ್ರಮಗಳೊಂದಿಗೆ ನಿರ್ವಿಘ್ನವಾಗಿ ನಡೆದ 'ದ್ವೀಪ ಜಾತ್ರೆ'
ಕಾರವಾರ, ಜನವರಿ 28: ಮೀನುಗಾರರ ಆರಾಧ್ಯದೈವ ಎಂದೇ ಕರೆಸಿಕೊಳ್ಳುವ ಇಲ್ಲಿನ ಕೂರ್ಮಗಡ ನಡುಗಡ್ಡೆಯ ನರಸಿಂಹ ದೇವರ ಜಾತ್ರೆ ಪ್ರತಿವರ್ಷದಂತೆ ಈ ಬಾರಿ ಸಹ ಅದ್ಧೂರಿಯಾಗಿ ನಡೆಯಿತು.
ಕಾರವಾರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪಕ್ಕೆ ಜನರು ಬೋಟುಗಳಲ್ಲಿ ತೆರಳಿ ನರಸಿಂಹ ದೇವರ ದರ್ಶನ ಪಡೆದರು.
ಕಾರವಾರದ ಹೋಟೆಲ್ ಗಳ ಮೇಲೆ ದಾಳಿ; ಆಹಾರ ತಯಾರಿಕೆಗೆ ಬಳಸುತ್ತಿದ್ದ ರಸಾಯನಿಕ ಪದಾರ್ಥ ವಶಕ್ಕೆ
ಸಮುದ್ರದ ನಡುಗಡ್ಡೆಯಲ್ಲಿ ನಡೆಯುವ ಈ ವಿಶೇಷ ಜಾತ್ರೆ ದ್ವೀಪ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ. ಈ ಜಾತ್ರೆಗೆ ನೂರಾರು ಭಕ್ತರು ದೋಣಿಗಳಲ್ಲಿ ತೆರಳಿ ದೇವರ ದರ್ಶನ ಪಡೆದುಕೊಳ್ಳುವುದೇ ವಿಶಿಷ್ಟ ಅನುಭವ. ಆದರೆ ಕಳೆದೆರಡು ವರ್ಷಗಳ ಹಿಂದೆ ದೋಣಿ ದುರಂತ ಉಂಟಾಗಿ ಸಾವು ನೋವು ಸಂಭವಿಸಿದ್ದರಿಂದಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಈ ಬಾರಿ ಜಾತ್ರೆಗೆ ಅವಕಾಶ ನೀಡಲಾಗಿತ್ತು.
ಕಳೆದೆರಡು ವರ್ಷಗಳ ಹಿಂದೆ ಜಾತ್ರೆಗೆ ತೆರಳಿ ಆಗಮಿಸುತ್ತಿದ್ದ ವೇಳೆ ದೋಣಿಯೊಂದು ಸಮುದ್ರದಲ್ಲಿ ಪಲ್ಟಿಯಾಗಿ 16 ಮಂದಿ ಜಲಸಮಾಧಿಯಾಗಿದ್ದರು. ಈ ಹಿನ್ನಲೆ ಈ ಬಾರಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನ ಕೈಗೊಂಡಿದ್ದು, 9 ಪರ್ಸಿನ್ ಹಾಗೂ 19 ಟ್ರಾಲರ್ ಬೋಟುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
ಅಲ್ಲದೇ ಕೇವಲ ಬೈತಖೋಲ್ ಬಂದರಿನಿಂದ ಮಾತ್ರ ಜನರನ್ನು ಕರೆದೊಯ್ಯಲು ಅವಕಾಶ ನೀಡಿದ್ದು, ಭಕ್ತರು ಲೈಫ್ ಜಾಕೆಟ್ಗಳನ್ನು ಧರಿಸಿಯೇ ಬೋಟುಗಳಲ್ಲಿ ಪ್ರಯಾಣಿಸುವಂತೆ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಸಾಕಷ್ಟು ಮಂದಿ ಭಕ್ತರು ಯಾವುದೇ ಆತಂಕವಿಲ್ಲದೇ ದ್ವೀಪ ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ನರಸಿಂಹ ದೇವರಿಗೆ ಬಾಳೆಗೊನೆ ಸೇವೆ ನೀಡುವುದು ವಿಶೇಷವಾಗಿದ್ದು, ದೇವರಲ್ಲಿ ಹರಕೆ ಹೊತ್ತುಕೊಂಡರೆ ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ಮೀನುಗಾರರು ಪ್ರತಿವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆಯನ್ನು ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುತ್ತಾರೆ.
ಕೊರೊನಾ ಹಿನ್ನಲೆ ಈ ಬಾರಿ ಗೋವಾ, ಮಹಾರಾಷ್ಟ್ರ ಭಾಗದ ಭಕ್ತರು ಆಗಮಿಸಿಲ್ಲವಾಗಿದ್ದು, ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೇ ಕಳೆದ ಬಾರಿ ದುರಂತ ಸಂಭವಿಸಿದ ಹಿನ್ನಲೆ ಜಾತ್ರೆಗೆ ತೆರಳುತ್ತಿರುವ ಪ್ರತಿಯೊಬ್ಬರ ಹೆಸರನ್ನೂ ನೋಂದಾಯಿಸಿಕೊಳ್ಳಲಾಗುತ್ತಿದ್ದು, ದ್ವೀಪದಲ್ಲೂ ಸಹ ಬೋಟುಗಳಿಂದ ಜನರನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗಿತ್ತು. ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.