ಮರಳುಗಾರಿಕೆ, ಮಾಲಿನ್ಯದಿಂದಾಗಿ ಅವಸಾನದ ಹಂತಕ್ಕೆ ತಲುಪಿದ ಮೃದ್ವಂಗಿಗಳು
ಕಾರವಾರ, ಡಿಸೆಂಬರ್ 11: ಸಮುದ್ರ ಮತ್ತು ನದಿಗಳ ಸಂಗಮ ಪ್ರದೇಶದಲ್ಲಿ ಸಿಗುತ್ತಿದ್ದ ಚಿಪ್ಪೆ ಕಲ್ಲು (ಕಪ್ಪೆ ಚಿಪ್ಪು, ಕೊಂಕಣಿಯಲ್ಲಿ ತೀಸ್ರೆ) ಅಳಿವಿನ ಅಂಚಿನದಲ್ಲಿದೆ ಎಂದು ಕಡಲ ಜೀವ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಹಿ ಮತ್ತು ಉಪ್ಪು ನೀರಿನ ಸಂಗಮದಲ್ಲಿ ಕಂಡುಬರುವ, ಮೃದ್ವಂಗಿಗಳ ಕುಟುಂಬಕ್ಕೆ ಸೇರಿರುವ ಈ ಜೀವಿಗಳು ಕರಾವಳಿಯ ಜನರ ಪ್ರಿಯವಾದ ಆಹಾರ. ಆದರೆ, ಕಳೆದ ಎರಡು-ಮೂರು ವರ್ಷಗಳಿಂದೀಚಿಗೆ ಚಿಪ್ಪೆ ಕಲ್ಲು ಅವನತಿ ಹೊಂದುತ್ತಿದೆ. ಅತಿಯಾದ ಮರಳು ಗಣಿಗಾರಿಕೆ, ತ್ಯಾಜ್ಯವನ್ನು ನದಿಗಳಿಗೆ ಬಿಡುವುದು, ಭಾರಿ ಲೋಹಗಳಾದ ಪಾದರಸ, ಸೀಸ, ಸತು ಮತ್ತು ಕ್ಯಾಡ್ಮಿಯಮ್ಗಳು ನೀರಿಗೆ ಸೇರುತ್ತಿವೆ. ಇದರಿಂದ ಚಿಪ್ಪೆ ಕಲ್ಲುಗಳು ಅವನತಿ ಸೇರುವ ಹಂತದಲ್ಲಿವೆ. ಇವು ಜಲಜೀವಿಗಳ ಸಂತತಿಗೆ ಮಾರಕವಾಗಿ ಪರಿಣಮಿಸಿದೆ ಎನ್ನುತ್ತಾರೆ ಕಡಲ ಜೀವ ವಿಜ್ಞಾನಿಗಳು.

ಗೋವಾಕ್ಕೆ ರಫ್ತಾಗುತ್ತಿದ್ದವು
ಕಾರ್ಖಾನೆಯಿಂದ ಬರುವ ತ್ಯಾಜ್ಯವು ನದಿಗಳಿಗೆ ಸೇರಿ, ನೀರು ಮಲೀನವಾಗುತ್ತಿದೆ. ಇದು ಜಲಚರಗಳಿಗೆ ಮಾರಕವಾಗಿ, ಜಲ ಜೀವವೈವಿಧ್ಯತೆಯು ಅವನತಿಯತ್ತ ಸಾಗುತ್ತಿದೆ. ಜತೆಗೆ, ಮರಳು ಬರಿದಾಗುತ್ತ ಹೋದಂತೆ ಜಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ನದಿಗಳಿಗೆ ಕಡಿಮೆಯಾಗುತ್ತದೆ. ಈ ಚಿಪ್ಪೆ ಕಲ್ಲುಗಳ ವಸಾಹತು ನಿರ್ಮಾಣವು ಅವು ವಾಸಿಸುವ ನೀರಿನ ಲವಣಾಂಶದ ಮೇಲೆ ಅವಲಂಬಿತವಾಗಿರುತ್ತವೆ.

ಚಿಪ್ಪೆ ಕಲ್ಲುಗಳು ಬಹಳ ರುಚಿಕರ
ಇದರಲ್ಲಿ ಬದಲಾವಣೆ ಉಂಟಾದರೆ ಇವುಗಳ ಸಂತಾನಾಭಿವೃದ್ಧಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಇದರ ಕುರಿತಾಗಿ ಅಧ್ಯಯನ ನಡೆಸಿದವರು. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಿಗುವ ಚಿಪ್ಪೆ ಕಲ್ಲುಗಳು ಬಹಳ ರುಚಿಕರವಾಗಿದ್ದು, ಹೆಚ್ಚು ಪ್ರಸಿದ್ಧಿ ಪಡೆದಿರುವ ಸಮುದ್ರ ಆಹಾರಗಳಲ್ಲಿ ಒಂದಾಗಿದೆ. ಇವು ಗೋವಾ ರಾಜ್ಯಕ್ಕೆ ಹೆಚ್ಚಾಗಿ ರಫ್ತಾಗುತ್ತಿದ್ದವು. ಸುಣ್ಣ ಹಾಗೂ ಸಿಮೆಂಟ್ ತಯಾರಿಕೆಯಲ್ಲೂ ಇವುಗಳ ಚಿಪ್ಪನ್ನು ಬಳಕೆ ಮಾಡಲಾಗುತ್ತದೆ.

‘ಕಡಿಮೆಯಾಗಿದೆ ಖುಬೆ’
ಚಿಪ್ಪೆ ಕಲ್ಲುಗಳು, ಮೃದ್ವಂಗಿಗಳ ಫೈಲಮ್ ವೆನರೊಯ್ಡಾ ಕುಟುಂಬಕ್ಕೆ ಸೇರಿದ್ದಾಗಿದೆ. ಪಶ್ಚಿಮ ಕರಾವಳಿಯಲ್ಲಿ ಮೆರಿಟ್ರಿಕ್ಸ್, ಮೆರಿಟ್ರಿಕ್ಸ್ ಕಾಸ್ಟಾ, ಕಟೆಲಿಶಿಯಾ ಓಪಿಮಾ, ಪಾಫಿಯಾ ಮಲಬಾರಿಕಾ, ವಿಲ್ಲೊರಿಟಾ ಸಿಪ್ರಿನೋಯ್ಡ್ಸ್ (ಕೊಂಕಣಿಯಲ್ಲಿ 'ಖುಬೆ'), ಈ ಐದು ಜಾತಿಯ ಚಿಪ್ಪೆ ಕಲ್ಲುಗಳು ಹೇರಳವಾಗಿ ದೊರೆಯುತ್ತಿದ್ದವು. ಆದರೆ, ಇತ್ತೀಚಿಗೆ ಖುಬೆ ಜಾತಿಯ ಚಿಪ್ಪೆ ಕಲ್ಲುಗಳು ಕಡಿಮೆಯಾಗಿವೆ ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ.
ಚಿಪ್ಪೆ ಕಲ್ಲುಗಳು, ನೀರಿನಲ್ಲಿರುವ ಮಾಲಿನ್ಯ ಮಟ್ಟವನ್ನು ತೋರಿಸುತ್ತವೆ. ಇವುಗಳ ಸಂತತಿ ಹೆಚ್ಚಿದ್ದರೆ ನೀರು ಶುದ್ಧವಾಗಿದೆ ಎಂದು, ಇಲ್ಲವಾದಲ್ಲಿ ಕಲುಷಿತವಾಗಿದೆ ಎಂದೂ ಅರ್ಥವಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಸ್ಥಳೀಯರು ಏನೆನ್ನುತ್ತಾರೆ?
10 ವರ್ಷಗಳ ಹಿಂದೆ ತಾಸಿನಲ್ಲಿ ಒಂದು ಗೋಣಿ ಚೀಲದಷ್ಟು ಚಿಪ್ಪೆ ಕಲ್ಲುಗಳನ್ನು ಸಂಗ್ರಹಿಸುತ್ತಿದ್ದೆವು. ಅದರಲ್ಲಿ ಕೆಲವೊಂದಿಷ್ಟನ್ನು ಮಾರಾಟ ಮಾಡಿ, ಉಳಿದ ಕೆಲವಷ್ಟನ್ನು ಮನೆಯಲ್ಲಿ ಅಡುಗೆ ತಯಾರಿಗಾಗಿ ಬಳಕೆ ಮಾಡುತ್ತಿದ್ದೆವು. ಆದರೀಗ ಅವುಗಳು ವಿರಳವಾಗಿವೆ ಎನ್ನುತ್ತಾರೆ ಸ್ಥಳೀಯ ಮೀನುಗಾರರೊಬ್ಬರು. ಈಗ ನದಿಗೆ ಇಳಿದರೆ ಒಂದು ಕೆಜಿಯಷ್ಟು ಚಿಪ್ಪೆ ಕಲ್ಲುಗಳು ಸಿಕ್ಕರೆ ನಮ್ಮ ಅದೃಷ್ಟ. ಅದರಲ್ಲೂ ಸತ್ತ ಚಿಪ್ಪೆಗಳೇ ಹೆಚ್ಚು ಇರುತ್ತವೆ ಎಂದೂ ಅವರು ಹೇಳುತ್ತಾರೆ.











Click it and Unblock the Notifications