ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಬಾರ ಮೇಲೆ ಚಪ್ಪಲಿಯಿಂದ ಹಲ್ಲೆ
ಕಾರವಾರ ಮೇ 09 : ಯಲ್ಲಾಪುರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಬಾರ ಅವರಿಗೆ ವ್ಯಕ್ತಿಯೋರ್ವ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಮುಂಡಗೋಡದ ಲಂಬಾಣಿ ತಾಂಡ ಎಂಬಲ್ಲಿ ಚುನಾವಣಾ ಪ್ರಚಾರ ನಡೆಸಲು ಸಂಜೆ ಶಿವರಾಮ ಹೆಬ್ಬಾರ ತೆರಳಿದ್ದರು. ಈ ವೇಳೆ ಪ್ರಚಾರ ಕಾರ್ಯ ಶುರು ಮಾಡಬೇಕೆನ್ನುವಷ್ಟರಲ್ಲಿ ವ್ಯಕ್ತಿಯೋರ್ವ ತನ್ನ ಚಪ್ಪಲಿಯಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಸ್ಥಳದಲ್ಲಿದ್ದ ಕಾರ್ಯಕರ್ತರು ಹಾಗೂ ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಹಲ್ಲೆ ಮಾಡಿದವನನ್ನು ಲಂಬಾಣಿತಾಂಡದ ನಿವಾಸಿ ಮೊಹಮ್ಮದ್ ಜಾಫರ್ ಹುಬ್ಬಳ್ಳಿ ಎಂದು ಗುರುತಿಸಲಾಗಿದೆ. ಈತ ಕಳೆದ ಐದು ವರ್ಷಗಳಿಂದ ಆಶ್ರಯ ಮನೆಗಾಗಿ ಬೇಡಿಕೆ ಇಟ್ಟಿದ್ದನಂತೆ. ಇದಕ್ಕಾಗಿ ಶಾಸಕ ಶಿವರಾಮ ಹೆಬ್ಬಾರ ಅವರ ಬಳಿ ಅನೇಕ ಬಾರಿ ಬೇಡಿಕೆ ಇಟ್ಟು, ಮನವಿ ಮಾಡಿದ್ದನಂತೆ.

ಆದರೆ, ಅದನ್ನು ಈಡೇರಿಸದಿದ್ದಕ್ಕೆ ಕುಪಿತಗೊಂಡು ಪ್ರಚಾರದ ವೇಳೆ ಹಲ್ಲೆ ನಡೆಸಿದ್ದಾನೆ.
ಹಲ್ಲೆ ಘಟನೆಯ ಬಳಿಕವೂ ಶಿವರಾಮ ಹೆಬ್ಬಾರ ಅವರು ತಮ್ಮ ಪ್ರಚಾರ ಮುಂದುವರಿಸಿದರು. ಈ ವೇಳೆ, ಇಂಥ ನಾಯಿಗಳಿಗೆಲ್ಲ ನಾನು ಬಗ್ಗಲ್ಲ. ಈ ಕೃತ್ಯದ ಹಿಂದೆ ಯಾರಿದ್ದಾರೆಂದು ಸಂಪೂರ್ಣ ತನಿಖೆ ನಡೆಯಬೇಕು. ಇದರ ಹಿಂದಿರುವ ಎಲ್ಲಾ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.
ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಪ್ರಮೋದ್ ಹೆಗಡೆ ಮತ್ತು ಕಾಂಗ್ರೆಸ್ ನಿಂದ ಶಿವರಾಮ ಹೆಬ್ಬಾರ್ ಸ್ಪರ್ಧಿಸುತ್ತಿದ್ದು, ಹವ್ಯಕ ಮತಗಳು ಒಡೆದುಹೋಗಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications