ಕಾರವಾರ; ಮುಂದುವರಿದ ಪ್ರತಿಭಟನೆ; ಮಗುವಿನ ಶಿಕ್ಷಣಕ್ಕೆ ಶಾಸಕಿ ನೆರವು
ಕಾರವಾರ, ಮಾರ್ಚ್ 19: ಬಾಣಂತಿ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಮೀನುಗಾರರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಶುಕ್ರವಾರ 5 ದಿನ ಪೂರೈಸಿದೆ. ಶಾಸಕಿ ರೂಪಾಲಿ ನಾಯ್ಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಅಲ್ಲದೇ, ಮೃತ ಬಾಣಂತಿಯ ಮಗುವಿನ ಶಿಕ್ಷಣಕ್ಕಾಗಿ 1 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ 2020ರ ಸೆಪ್ಟೆಂಬರ್ 3ರಂದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡುವ ವೇಳೆ ಸರ್ವೋದಯ ನಗರದ ಗೀತಾ ಬಾನಾವಳಿ ಎನ್ನುವ ಬಾಣಂತಿ ಮಹಿಳೆ ಮೃತಪಟ್ಟಿದ್ದರು. ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತ ಬಾಣಂತಿಯ ಕುಟುಂಬಸ್ಥರು ಹಾಗೂ ಮೀನುಗಾರ ಸಮುದಾಯದವರು ಆರೋಪಿಸಿದ್ದರು. ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರಕರ್ ಶಸ್ತ್ರ ಚಿಕಿತ್ಸೆ ವೇಳೆ ನಿರ್ಲಕ್ಷ ತೋರಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ಸಹ ಮಾಡಿದ್ದರು.
ಬಾಣಂತಿ ಗೀತಾ ಸಾವಲ್ಲಿ ನಿರ್ಲಕ್ಷವಾಗಿಲ್ಲ, ಸರ್ಜನ್ ನಿರ್ದೋಷಿ ಎಂದ ವರದಿ
ಪ್ರಕರಣ ಸಾಕಷ್ಟು ಗಂಭೀರತೆ ಪಡೆದಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಿ, ಮಂಗಳೂರಿನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೃತದೇಹದ ಭಾಗಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದಲ್ಲದೇ ಕಾರವಾರ ನಗರ ಠಾಣೆಯಲ್ಲಿ ಸರ್ಜನ್ ಕುಡ್ತರಕರ್ ವಿರುದ್ಧ ಪೊಲೀಸ್ ದೂರು ಸಹ ದಾಖಲಾಗಿತ್ತು.
ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು; ಅನಸ್ತೇಶಿಯಾ ಓವರ್ ಡೋಸ್ ಆರೋಪ
ಈ ನಡುವೆ ಪ್ರಕರಣ ರಾಜ್ಯ ಮಟ್ಟದಲ್ಲೂ ಚರ್ಚೆಯಾಗಿ, ಅಂದಿನ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಎಂ.ರೋಷನ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ವಿಚಾರಣೆ ನಡೆಸಲಾಗಿತ್ತು. ತನಿಖಾ ತಂಡ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದರೂ, ಎಫ್ಎಸ್ಎಲ್ ವರದಿ ಮಾತ್ರ ಬಂದಿರಲಿಲ್ಲ. ಹೀಗಾಗಿ ಎಫ್ಎಸ್ಎಲ್ ವರದಿಯನ್ನು ಶೀಘ್ರ ತರಿಸಿಕೊಂಡು, ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮುಂದುವರೆಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಾಣಂತಿ ಸಾವು; ವೈದ್ಯರ ಮೇಲೆ ಪೋಷಕರ ಆರೋಪ
ಬಾಣಂತಿ ಸಾವಿನ ಪ್ರಕರಣ ಸಂಬಂಧ ನಿರ್ಲಕ್ಷತನ ಆರೋಪ ಎದುರಿಸುತ್ತಿರುವ ಜಿಲ್ಲಾ ಸರ್ಜನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಜೊತೆಗೆ ಸಾವಿಗೆ ಕಾರಣ ಯಾರೆಂದು ತಿಳಿಸುವಂತೆ, ಬಾಣಂತಿ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮಾರ್ಚ್ 1ರಿಂದಲೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲು ಮೀನುಗಾರರು ನಿರ್ಧರಿಸಿದ್ದರು.
ಆದರೆ ಅಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒಂದು ವಾರದಲ್ಲಿ ಸಾವಿಗೆ ನಿಖರ ಕಾರಣ ತಿಳಿಸುವಂತೆ, ಅಲ್ಲದೇ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಮಾಡದಿದ್ದರೆ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕಳೆದ ಮಾರ್ಚ್ 15ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ನಿರ್ಲಕ್ಷತನ ತೋರಲಾಗುತ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ಮೃತ ಬಾಣಂತಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನ್ಯಾಯ ಕೊಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ಶುಕ್ರವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ, ಪ್ರತಿಭಟನಾಕಾರರೊಂದಿಗೆ ತಾವಿರುವುದಾಗಿ ಹೇಳಿದರು. ಅಲ್ಲದೇ, ಗೀತಾ ಸಾವಿನ ಪ್ರಕರಣದ ಕೂಲಂಕುಷ ತನಿಖೆಯಾಗಬೇಕು. ತಪ್ಪು ಮಾಡಿದವರು ಯಾರೇ ಇದ್ದರೂ ಶಿಕ್ಷೆಯಾಗಲೇಬೇಕು. ಈಗಾಗಲೇ ಮುಖ್ಯಮಂತ್ರಿಯವರಿಗೂ ಮತ್ತೊಮ್ಮೆ ಆಗ್ರಹಿಸಿದ್ದೇನೆ. ಉಸ್ತುವಾರಿ ಸಚಿವರಿಗೂ ಮನವಿ ಮಾಡಿಕೊಂಡಿದ್ದೇನೆ. ವರ್ಗಾವಣೆಯಾದರೂ ಮತ್ತೆ ಯಾರಿಂದಾಗಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಆಗಿ ಒಂದೂವರೆ ತಿಂಗಳೊಳಗೆ ಮರು ನೇಮಕಗೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆ ಏನು ಚಿನ್ನದ ಮೊಟ್ಟೆ ಇಡುವ ಕೋಳಿಯಾ? ಏನಿದೆ ಎಂದು ಈ ರೀತಿ ಇದೇ ಆಸ್ಪತ್ರೆಗಾಗಿ ನೇಮಕಗೊಳ್ಳಲು ಪರಿತಪಿಸುತ್ತಾರೆ? ಎಂದು ಪ್ರಶ್ನಿಸಿದರು.
Recommended Video
ಇದೇ ವೇಳೆ ಮೃತ ಗೀತಾಳ ಮಗುವನ್ನು ಎತ್ತುಕೊಂಡು ಮುದ್ದಾಡಿದ ರೂಪಾಲಿ, ಮಗುವಿನ ಶಿಕ್ಷಣಕ್ಕಾಗಿ 1 ಲಕ್ಷ ಮೀಸಲಿರಿಸುವುದಾಗಿ ಘೋಷಿಸಿದರು.