ಕೊರೊನಾ ಮಾರ್ಗಸೂಚಿಗಳನ್ನೇ ಗಾಳಿಗೆ ತೂರಿದ ಸಚಿವ ಹೆಬ್ಬಾರ್
ಕಾರವಾರ, ಏಪ್ರಿಲ್ 23: ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಪ್ರವಾಸ ಕೈಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಅಧಿಕಾರಿಗಳು, ಪೊಲೀಸರನ್ನೊಳಗೊಂಡು ಸಾಮಾಜಿಕ ಅಂತರವನ್ನು ಮರೆತು ಹಲವು ಕಡೆ ಸಾರ್ವಜನಿಕರನ್ನು ಭೇಟಿ ಮಾಡಿದ್ದು, ಮಾಸ್ಕ್ ಗಳನ್ನೂ ಹಾಕಿಕೊಳ್ಳದೆ ಅಡ್ಡಾಡಿದ್ದಾರೆ.
ಕಾರವಾರವನ್ನು ಹೊರತುಪಡಿಸಿ ಕರಾವಳಿಯ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಸಚಿವ ಹೆಬ್ಬಾರ್, ಗುರುವಾರ ಸಾರ್ವಜನಿಕರನ್ನು ಭೇಟಿ ಮಾಡಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾ, ಮಂಗನ ಕಾಯಿಲೆ ತಡೆಗಟ್ಟುವ ಸಲುವಾಗಿ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ.
ಆದರೆ ಈ ವೇಳೆಯಲ್ಲಿ ತಮ್ಮ ಬೆಂಬಲಿಗರು, ಪಕ್ಷದ ಕಾರ್ಯಕರ್ತರೊಂದಿಗೆ ಸ್ವತಃ ಸಚಿವ ಹೆಬ್ಬಾರ್ ಅವರೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಕೊರೊನಾ ವೈರಸ್ ನಿಯಂತ್ರಣದ ಸಲುವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನೂ ಪಾಲನೆ ಮಾಡಿಲ್ಲ.

ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ, ಸಾರ್ವಜನಿಕರಲ್ಲಿ ಸಾಮಾಜಿಕ ಅಂತರದ ಜಾಗೃತಿ ಮೂಡಿಸಬೇಕಾದ ಜನಪ್ರತಿನಿಧಿಗಳೇ ಇದನ್ನು ಮರೆತು ಹರಟೆಯಲ್ಲಿ ಮಗ್ನರಾಗಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸ್ಥಳದಲ್ಲೇ ಇದ್ದ ಅಧಿಕಾರಿಗಳು, ಪೊಲೀಸರೂ ಕೂಡ ಸಚಿವರನ್ನು ಪ್ರಶ್ನಿಸದೇ ಸಚಿವರ ಜತೆಯಲ್ಲಿ ತಾವೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯ ಜನರಿಗೆ ಒಂದು ನ್ಯಾಯ, ಜನಪ್ರತಿನಿಧಿಗಳಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸುವಂತಾಗಿದೆ.

ತಾ ಮುಂದು ತಾ ಮುಂದು ಎಂದ ಕಾರ್ಯಕರ್ತರು: ಹೊನ್ನಾವರ ತಾಲ್ಲೂಕಿನ ಕರ್ಕಿ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಂಗನ ಕಾಯಿಲೆ ಹಾಗೂ ಕೋವಿಡ್- 19 ಕುರಿತ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯ ಬಳಿಕ ವೇದಿಕೆಯಿಂದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕೆಳಗಿಳಿಯುತ್ತಿದ್ದಂತೆ ಸುತ್ತುವರೆದ ಕಾರ್ಯಕರ್ತರು, ಸಚಿವರಿಗೆ ಶುಭ ಕೋರಲು ಹಾಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಗಿಬಿದ್ದರು.
ಸಭೆಯಲ್ಲಿ ಅಧಿಕಾರಿಗಳಿಂದ ಹಿಡಿದು ಜನಪ್ರತಿನಿಧಿಗಳಾರೂ ಮಾಸ್ಕ್ ಧರಿಸಿರಲಿಲ್ಲ. ಸಭೆಯ ಬಳಿಕ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದಾಗಲೂ ಸಚಿವರು ಸೇರಿದಂತೆ ಅನೇಕರು ಮಾಸ್ಕ್ ಧರಿಸಿರಲಿಲ್ಲ. ಸಚಿವರು ಆಸ್ಪತ್ರೆಯಲ್ಲಿ ಸುತ್ತಾಡುತ್ತಿರುವಾಗ ಸುತ್ತಮುತ್ತಲೂ ಕಾರ್ಯಕರ್ತರು, ಮುಖಂಡರು ಸುತ್ತವರೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯ ವಹಿಸಿದರು.












Click it and Unblock the Notifications