ತೌಕ್ತೆ; ಭಟ್ಕಳ, ಅಂಕೋಲಾದಲ್ಲಿ ಹಾನಿ ಪರಿಶೀಲಿಸಿದ ಸಚಿವರು
ಕಾರವಾರ, ಮೇ 19; ತೌಕ್ತೆ ಚಂಡಮಾರುತದ ಅಬ್ಬರ ಕರ್ನಾಟಕದಲ್ಲಿ ಕಡಿಮೆಯಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದಲ್ಲಿ ಚಂಡಮಾರುತ ಭಾರೀ ಹಾನಿಯನ್ನು ಮಾಡಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭಟ್ಕಳ, ಅಂಕೋಲಾ ಮತ್ತು ಕುಮಟಾ ತಾಲೂಕಿನಲ್ಲಿ ತೌಕ್ತೆ ಅಬ್ಬರದಿಂದ ಆಗಿರುವ ಹಾನಿಯ ಪರಿಶೀಲನೆಯನ್ನು ನಡೆಸಿದರು.
ಭಟ್ಕಳ ತಾಲೂಕಿನಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಆಶೋಕ ಅವರ ಜೊತೆ ಸಚಿವರು ಭೇಟಿ ನೀಡಿದರು. ಹಾನಿಗೊಳಗಾದವರ ಪಟ್ಟಿಯನ್ನು ಶೀಘ್ರವಾಗಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಂಡಮಾರುತದ ಪ್ರಭಾವದಿಂದ ಮೃತಪಟ್ಟ ಭಟ್ಕಳ ತಾಲೂಕಿನ ಲಕ್ಷ್ಮಣ ಈರಪ್ಪ ನಾಯ್ಕ ಅವರ ಕುಟುಂಬದವರಿಗೆ ಸುಮಾರು 5 ಲಕ್ಷ ರೂಪಾಯಿ ಮೊತ್ತದ ಪರಿಹಾರವನ್ನು ಸಚಿವರು ವಿತರಣೆ ಮಾಡಿದರು.
ಭಟ್ಕಳ ತಾಲೂಕಿನಲ್ಲಿ ಚಂಡಮಾರುತದ ಅಬ್ಬರಕ್ಕೆ ಹಲವಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವಾರು ಕಿಲೋಮೀಟರ್ ರಸ್ತೆಗಳಿಗೆ ಹಾನಿಯಾಗಿದೆ. ಒಟ್ಟಾರೆ ನಷ್ಟದ ಅಂದಾಜು ಇನ್ನೂ ಸಿಗಬೇಕಿದೆ.
ಅಂಕೋಲಾ ಹಾಗೂ ಕುಮಟಾ ತಾಲೂಕಿನಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದರು. ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಹಾನಿಗೊಳಗಾದವರ ಪಟ್ಟಿಯನ್ನು ತಯಾರಿಸುವಂತೆ ನಿರ್ದೇಶನ ನೀಡಿದರು.

ಕರ್ನಾಟಕದಲ್ಲಿ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಆದರೆ ಎರಡು ದಿನಗಳ ಕಾಲ ಸುರಿದ ಮಳೆ, ಭಾರೀ ಗಾಳಿಗೆ 121 ಗ್ರಾಮಗಳಲ್ಲಿ ಅಪಾರವಾದ ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ 48 ಗ್ರಾಮಗಳಲ್ಲಿ ಹಾನಿಯಾಗಿದೆ.
ಮಂಗಳವಾರದ ತನಕ ರಾಜ್ಯದಲ್ಲಿ ಚಂಡಮಾರುತದ ಅಬ್ಬರದಿಂದ 8 ಜನರು ಬಲಿಯಾಗಿದ್ದಾರೆ. ಒಟ್ಟು 387 ಮನೆಗಳಿಗೆ ಹಾನಿಯಾಗಿದೆ. 57 ಮನೆಗಳು ಸಂಪೂರ್ಣ ಜಖಂಗೊಂಡಿವೆ. ಉತ್ತರ ಕನ್ನಡದಲ್ಲಿ 97 ಮೀನುಗಾರಿಕೆ ಬೋಟ್ಗಳಿಗೆ ಹಾನಿಯಾಗಿದೆ.
ಕಂದಾಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ 48, ಉಡುಪಿ ಜಿಲ್ಲೆಯ 32 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 28, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಗ್ರಾಮಗಲ್ಲಿ ಅಪಾರವಾದ ಹಾನಿಯಾಗಿದೆ. ಆಗಿರುವ ನಷ್ಟದ ಅಂದಾಜನ್ನು ಜಿಲ್ಲಾಡಳಿತಗಳು ಇನ್ನೂ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕಿದೆ.












Click it and Unblock the Notifications