ಭಟ್ಕಳದಾದ್ಯಂತ ಮನೆ ಮಾಡಿದ ಮಾರಿಹಬ್ಬದ ಸಂಭ್ರಮ
ಭಟ್ಕಳ, ಆಗಸ್ಟ್.08: ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಮಾರಿಜಾತ್ರೆಯು ಇಂದು ಮತ್ತು ನಾಳೆ ಭಟ್ಕಳದಲ್ಲಿ ಜರುಗಲಿದ್ದು, ಎಲ್ಲೆಲ್ಲೂ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಚನ್ನಪಟ್ಟಣ ಹನುಮಂತದೇವರ ರಥೋತ್ಸವ ಬಿಟ್ಟರೇ ಆಷಾಢದಲ್ಲಿ ಜರುಗುವ ಈ ಮಾರಿಜಾತ್ರೆಯೇ ಇಲ್ಲಿನ ಬಹುದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ತಾಲೂಕಿನಿಂದಷ್ಟೇ ಅಲ್ಲದೇ, ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವಿಗೆ ಹರಿಕೆ ಅರ್ಪಿಸಿ ಪುನೀತರಾಗುತ್ತಾರೆ.
ಮಾರಿ ಉತ್ಸವಕ್ಕೆ ಬಹಳ ಪುರಾತನ ಇತಿಹಾಸವಿದ್ದು, ಅನಾದಿಕಾಲದಿಂದಲೂ ಈ ಸಂಪ್ರದಾಯಗಳು ನಡೆದು ಬರುತ್ತಿವೆ. ಸುಮಾರು ಎರಡೂವರೆ ದಶಕಗಳ ಹಿಂದೆ ಮಾರಿಜಾತ್ರೆ ಸಂಪೂರ್ಣವಾಗಿ ಗ್ರಾಮದೇವತೆಯ ಉತ್ಸವವಾಗಿದ್ದು, ಹಿಂದುಳಿದವರ ಹಾಗೂ ಪರಿಶಿಷ್ಠ ಜಾತಿ ಪಂಗಡದವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ವಿಶಿಷ್ಠವಾದ ಜಾತ್ರೆಯಾಗಿತ್ತು.
ಮಾರಿಕಟ್ಟೆಯಲ್ಲಿನ ಬೃಹತ್ ಆಲದ ಮರದಡಿಯಲ್ಲಿ ಮಂಗಳೂರು ಹಂಚಿನ ಹೊದಿಕೆಯ ಪುಟ್ಟ ಮಾರಿಗುಡಿ, ಗುಡಿಯ ಮುಂಭಾಗದಲ್ಲಿ ಬಲಿ ಹೊಂಡ; ಈ ದೃಶ್ಯ ಎಂಥವರ ಎದೆಯನ್ನೂ ಝೆಲ್ ಎನಿಸುವಂತಿತ್ತು. ಜಾತ್ರೆಯಂದು ದೇವಿಯ ಎದುರು ಬಲಿ ಹೊಂಡದಲ್ಲಿ ನೂರಾರು ಕುರಿ- ಕೋಳಿಗಳನ್ನು ಬಲಿ ಕೊಡಲಾಗುತ್ತಿತ್ತು. ಇದರಿಂದಾಗಿ ಮಾರಿದೇವಿ ಎಂದರೇ, ರೌದ್ರದೇವತೆ ಎನ್ನಲಾಗುತ್ತಿತ್ತು.

ಮೂರು ದಿನಗಳ ಕಾಲ ನಡೆಯುವ ಜಾತ್ರೆ
ಸರ್ಕಾರ ಪ್ರಾಣಿಬಲಿ ನಿಷೇಧಿಸಿದ ನಂತರ ಇಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಯಿತು. ಮಾರಿಗುಡಿಯ ಸ್ಥಳದಲ್ಲಿ ಆಧುನಿಕ ಆರ್.ಸಿ.ಸಿ ಮೇಲ್ಚಾವಣಿಯ ಗರ್ಭಗುಡಿ ತಲೆಎತ್ತಿತು.
ಗರ್ಭಗುಡಿಯಲ್ಲಿ ಶಾಶ್ವತ ಮೂರ್ತಿ ಸ್ಥಾಪಿಸಲ್ಪಟ್ಟು, ವೈದಿಕ ವಿಧಾನದೊಂದಿಗೆ ದೇವಿಗೆ ಅನುದಿನವವೂ ಪೂಜೆ ಪುನಸ್ಕಾರಗಳು ನಡೆಯಲಾರಂಭಿಸಿ, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಉತ್ಸವ ಮೂರ್ತಿಯನ್ನು ಸ್ಥಾಪಿಸಿ ಮೂರು ದಿನಗಳ ಕಾಲ ಜಾತ್ರೆಯನ್ನು ಸಂಭ್ರಮದೊಂದಿಗೆ ಆಚರಿಸುವ ಪರಿಪಾಠ ಬೆಳೆದು ಬಂತು.

ಮೂರ್ತಿ ತಯಾರಿಕೆಯ ವಿಧಿವಿಧಾನ
ಎಂದಿನಂತೆ ಉತ್ಸವ ಮೂರ್ತಿಯನ್ನು ಅಮಟೆ ಮರದಿಂದ ವಿಶ್ವಕರ್ಮ ಸಮುದಾಯದವರು ತಯಾರಿಸಿದ್ದಾರೆ. ಚುಕ್ಕೆ ಬೀಳದ ಸೂಕ್ತವಾದ ಮರ ಗುರುತಿಸಿ, ಆಷಾಢ ಮಾಸ ಹುಣ್ಣಿಮೆಯ ನಂತರದ ಪ್ರಥಮ ಮಂಗಳವಾರದಂದು ಮೂರ್ತಿ ತಯಾರಿಕೆಯ ಮರವನ್ನು ಧಾರ್ಮಿಕ ವಿಧಿವಿಧಾನಗಳಿಂದ ಕಡಿಯಲಾಗಿತ್ತು.
ಶ್ರೀದೇವಿಯ ಪೂರ್ವ ಬಿಂಬ ರೂಪವನ್ನು ಮಂಗಳವಾರದಿಂದ ಶುಕ್ರವಾರದವರೆಗೆ ಅದೇ ಜಾಗದಲ್ಲಿ ಕೆತ್ತನೆ ಮಾಡಿ ಶುಕ್ರವಾರದಂದು ಮಾರಿಯ ತವರು ಮನೆ ಎಂದೇ ಕರೆಯುವ ಮಣ್ಕುಳಿಯ ಮಾರಿ ಗದ್ದುಗೆಗೆ ತೆಗೆದುಕೊಂಡು ಬರಲಾಯಿತು.
ಅಲ್ಲಿಂದ ಇನ್ನೊಂದು ಮಂಗಳವಾರದವರೆಗೆ ದೇಹದ ಅಂಗಾಗಗಳನ್ನು ರಚಿಸಿ ಪೂರ್ಣಗೊಳಿಸಲಾಯಿತು. ಪೂರ್ಣಗೊಂಡ ಮೂರ್ತಿಗೆ ಮಂಗಳವಾರ ಸಾಯಂಕಾಲ ಗುಡಿಗಾರರು ಬಣ್ಣ ಬಳಿದರು. ಬಳೆಗಾರರು ಬಳೆ ಹಾಗೂ ಆಭರಣ ತಯಾರಕರು ತಯಾರಿಸಿದ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ದೇವಿಗೆ ತೊಡಿಸಲಾಯಿತು.

ದೇವಿಗೆ ರಕ್ತ ಸಮರ್ಪಣೆ
ಮಂಗಳವಾರ ರಾತ್ರಿ ಮಾರಿ ಮುಖ್ಯಸ್ಥರ ಮನೆಯವರಿಂದ ಹಾಗೂ ಊರಿನವರಿಂದ ಪ್ರಥಮ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾರಿ ಗಂಡನ ಕಡೆಯವರು ಎಂದು ಕರೆಯಿಸಿಕೊಳ್ಳುವ ಕೊರಾರ ಜನಾಂಗದವರು ತಮ್ಮ ತಾಳ, ತಬಲದೊಂದಿಗೆ ಆಗಮಿಸಿ ಮಾರಿಯನ್ನು ಮೆರವಣಿಗೆ ಮೂಲಕ ಕರೆದ್ಯೊಯಲು ಉತ್ಸುಕರಾಗಿದ್ದರು.
ಬುಧವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಮಣ್ಕುಳಿ ಗ್ರಾಮಸ್ಥರು ಹಾಗೂ ಊರಿನವರು ಮಾರಿಯನ್ನು ಹೊತ್ತುಕೊಂಡು ಹೋಗಿ ಮಾರಿಗುಡಿಯಲ್ಲಿ ಪ್ರತಿಷ್ಠಾಪಿಸಿದರು. ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಮೊದಲನೇ ದಿವಸ ಪರ ಊರಿನವರು ಸೇವೆ ಸಲ್ಲಿಸಿ ಹಬ್ಬ ಆಚರಿಸಿದರೆ, ಎರಡನೇ ದಿವಸವಾದ ಗುರುವಾರ ಸ್ಥಳೀಯರು ಸೇವೆ ಸಲ್ಲಿಸಿ ಹಬ್ಬ ಆಚರಿಸುತ್ತಾರೆ.
ಈ ಹಬ್ಬದ ಹೆಸರಿನಲ್ಲಿ ಭಕ್ತರು ಕುರಿ ಕೋಳಿಯನ್ನು ತಮ್ಮ ಮನೆಯಲ್ಲಿಯೇ ಕತ್ತರಿಸಿ ದೇವಿಗೆ ರಕ್ತ ಸಮರ್ಪಿಸುತ್ತಾರೆ.

ಮಾರಿ ಜಾತ್ರೆಗೆ ತೆರೆ
ಮಾರಿ ರೂಪದಲ್ಲಿ ಕುಳಿತಿರುವ ಈ ದೇವಿಗೆ ಭಕ್ತರು ಊರಿಗೆ ಬರಬಹುದಾದ ಕಣ್ಣು ಬೇನೆ, ಸಿಡುಬು ಹಾಗು ಇನ್ನಿತರ ಸಾಂಕ್ರಾಮಿಕ ರೋಗಗಳನ್ನು ಬರದಂತೆ ತಡೆಗಟ್ಟುವಂತೆ ಭಕ್ತಿಯಿಂದ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುತ್ತಾರೆ.
ಗುರುವಾರ ಸಂಜೆ ಮಾರಿ ಮೂರ್ತಿಯನ್ನು ವಿಸರ್ಜನೆಗೆ ಸುಮಾರು 6 ಕಿ.ಮೀ. ದೂರದ ಜಾಲಿ ಸಮುದ್ರ ತೀರಕ್ಕೆ ಹೊತ್ತೊಯ್ದು ಧಾರ್ಮಿಕ ವಿಧಿವಿಧಾನದನ್ವಯ ಪೂಜೆ ಸಲ್ಲಿಸಿ ಕೊನೆಯಲ್ಲಿ ವಿಗ್ರಹವನ್ನು ಛಿದ್ರಗೊಳಿಸಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಮಾರಿ ಜಾತ್ರೆಗೆ ತೆರೆ ಬೀಳುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications