ಖಾಸಗಿ ಬಸ್ಗಳಿಂದ ಹಗಲು ದರೋಡೆ; ಸಿಎಂ ಹೆಸರಿಗೇ ಟಿಕೆಟ್ ಬುಕ್ ಮಾಡಿದ ಯುವಕ!
ಕಾರವಾರ, ಅಕ್ಟೋಬರ್ 25: ಹಬ್ಬದ ಸಂದರ್ಭ ಖಾಸಗಿ ಬಸ್ಸುಗಳು ಗ್ರಾಹಕರಿಗೆ ಬೇಕಾಬಿಟ್ಟಿ ದರ ನಿಗದಿ ಮಾಡುತ್ತವೆ. ಇದನ್ನು ನಿಯಂತ್ರಿಸುವವರೇ ಇಲ್ಲವಾಗಿದೆ. ಹೀಗಾಗಿ ಈ ಅಂಶವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಗಮನಕ್ಕೆ ತರಲು ಇಲ್ಲೊಬ್ಬರು ವಿಶೇಷ ತಂತ್ರವನ್ನು ಅನುಸರಿಸಿದ್ದಾರೆ.
ಹೊನ್ನಾವರ ತಾಲೂಕಿನ ಗುಂಡಬಾಳ ಮೂಲದ ವ್ಯಕ್ತಿ, ಯಡಿಯೂರಪ್ಪ ಅವರ ಹೆಸರಿನಲ್ಲಿಯೇ ಟಿಕೆಟ್ ಬುಕ್ ಮಾಡಿ, ದೀಪಾವಳಿ ಹಬ್ಬಕ್ಕೆ ಆಮಂತ್ರಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ರಾಜೇಶ್ ಶೇಟ್, ಟ್ವೀಟ್ ಮಾಡುವ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಟಿಕೆಟ್ ಬುಕ್ ಮಾಡಿ ದುಬಾರಿ ಬೆಲೆಯ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಜಿಲ್ಲೆಯಿಂದ ಬೆಂಗಳೂರಿಗೆ ಪ್ರತಿನಿತ್ಯ ಹಲವು ಖಾಸಗಿ ಕಂಪನಿ ಬಸ್ಸುಗಳು ತೆರಳುತ್ತದೆ. ಆದರೆ ರಜಾ ದಿನಗಳಲ್ಲಿ, ಹಬ್ಬದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕ ಆಗುವುದರಿಂದ ಬೇಕಾಬಿಟ್ಟಿ ದರ ನಿಗದಿಪಡಿಸುತ್ತಾರೆ. ಜಿಲ್ಲೆಯ ಹಲವರು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ರಜೆ ಹಾಗೂ ಹಬ್ಬದ ದಿನಗಳಲ್ಲಿ ವಾಪಸ್ ಬರುವಾಗ ದುಪ್ಪಟ್ಟು ಹಣ ನೀಡಿ ಟಿಕೆಟ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ದೀಪಾವಳಿ ಹಬ್ಬ ಇರುವ ಹಿನ್ನಲೆಯಲ್ಲಿ ಟಿಕೆಟ್ ದರವನ್ನು ಮತ್ತೆ ಖಾಸಗಿ ಬಸ್ಸಿನವರು ಹೆಚ್ಚಳ ಮಾಡಿದ್ದಾರೆ. ಹಬ್ಬದ ಹಿಂದಿನ ದಿನ ಬೆಂಗಳೂನಿಂದ ಬರಲು 1500ಕ್ಕೂ ಅಧಿಕ ರೂಪಾಯಿ ಪಡೆಯುತ್ತಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲು ರಾಜೇಶ್ ಶೇಟ್ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರ ಹೆಸರಿನಲ್ಲಿಯೇ ಟಿಕೆಟ್ ಬುಕ್ ಮಾಡಿ, ಯಡಿಯೂರಪ್ಪನವರಿಗೆ ಟ್ವೀಟ್ ಮೂಲಕ ಟಿಕೆಟನ್ನು ಕಳಿಸಿದ್ದಾರೆ.
ಅಲ್ಲದೇ, 'ಹಬ್ಬಕ್ಕೆ ತಮ್ಮೂರಾದ ಗುಂಡಬಾಳಕ್ಕೆ ಬನ್ನಿ. ದುಬಾರಿ ಬೆಲೆಯ ಟಿಕೆಟನ್ನು ನೋಡಿಯಾದರು ಖಾಸಗಿ ಬಸ್ಸುಗಳ ಹಗಲು ದರೋಡೆಗೆ ಶಾಶ್ವತ ಪರಿಹಾರ ಕೈಗೊಳ್ಳಿ' ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ, ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕಚೇರಿಗೆ ಟಿಕೆಟ್ ಅನ್ನು ರಾಜೇಶ್ ಶೇಟ್ ಕಳುಹಿಸಿ ಕೊಟ್ಟಿದ್ದಾರೆ.ದ್ದು, ಈ ಮೂಲಕವಾದರೂ ಮುಖ್ಯಮಂತ್ರಿ ಗಮನಕ್ಕೆ ಖಾಸಗಿ ಬಸ್ಸಿನವರ ಹಗಲು ದರೋಡೆಯ ವಿಚಾರ ತಿಳಿದು ಕ್ರಮಕ್ಕೆ ಮುಂದಾಗುತ್ತಾರ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜೇಶ್, 'ಟಿಕೆಟ್ ಬುಕ್ ಮಾಡಿಕೊಡುವ ಏಜೆನ್ಸಿಗಳ ಮೇಲೆ ಕ್ರಮಕೈಗೊಳ್ಳುವ ಬದಲು, ಖಾಸಗಿ ಬಸ್ಗಳ ಸಂಸ್ಥೆಗಳ ಮೇಲೆ ದಾಳಿ ಮಾಡಬೇಕು. ಅವರ ಪರವಾನಗಿಯನ್ನು ರದ್ದುಪಡಿಸಲು ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.












Click it and Unblock the Notifications