ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ
ಕಾರವಾರ, ನವೆಂಬರ್ 20 : ರೈಲ್ವೆ ಇಲಾಖೆಯ 'ಬಿ' ದರ್ಜೆ ನೌಕರ ಎಂದು ಹೇಳಿಕೊಂಡು, ಕೆಲಸ ಕೊಡಿಸುವುದಾಗಿ ಹಲವರನ್ನು ವಂಚಿಸಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ಈತ ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ.
ಕಾರವಾರದ ಸದಾಶಿವಗಡದ ನಿವಾಸಿ ವಿಜಯ್ ಗಜನೀಕರ್ ವಂಚನೆ ಮಾಡಿರುವ ಆರೋಪಿ. ಮಂಜುನಾಥ್ ಎನ್ನುವವರ ಜೊತೆ ಸೇರಿ ಕಾರವಾರ, ಗೋವಾ, ಯಲ್ಲಾಪುರ ಹಾಗೂ ಅಂಕೋಲದ ಸುಮಾರು 60 ಜನರಿಗೆ ರೈಲ್ವೆಯಲ್ಲಿ 'ಸಿ' ಮತ್ತು 'ಡಿ' ದರ್ಜೆ ನೌಕರಿ ಕೊಡುವುದಾಗಿ ವಂಚಿಸಿದ್ದ.

ಪೂರ್ವ ರೈಲ್ವೆ ವಿಭಾಗದ ಕೋಲ್ಕತ್ತಾ ವಿಭಾಗದಲ್ಲಿ ತಾನು 'ಬಿ'ದರ್ಜೆ ನೌಕರ ಎಂದು ವಿಜಯ್ ಎಲ್ಲರ ಬಳಿ ಹೇಳಿಕೊಂಡಿದ್ದ. ನೌಕರಿ ಕೊಡಿಸುತ್ತೇನೆ 'ಸಿ'ದರ್ಜೆ ನೌಕರಿಗೆ 6 ಲಕ್ಷ, 'ಡಿ'ದರ್ಜೆ ನೌಕರಿಗೆ 4.5 ಲಕ್ಷ ರೂ. ಹಣ ನೀಡಬೇಕು ಎಂದು ಹೇಳಿದ್ದ.
ವಂಚನೆ ಮಾಡುತ್ತಿದ್ದೇನೆ ಎಂದು ಅನುಮಾನ ಬಾರದಿರಲಿ ಎಂದು 5-10 ಮಂದಿಯ ತಂಡ ರಚನೆ ಮಾಡಿ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ವರದಿ ನೀಡಿದ್ದ. ಎಲ್ಲರಿಂದಲೂ ಹಣವನ್ನು ನಗದು ರೂಪದಲ್ಲಿ ಪಡೆದುಕೊಂಡು, ತರಬೇತಿಯನ್ನು ನಡೆಸಿ, ತರಬೇತಿ ಪಾಸ್ ಆಗಿದ್ದೀರಿ ಎಂದು ನಕಲಿ ಪ್ರಮಾಣ ಪತ್ರವನ್ನು ನೀಡಿದ್ದ.
ತರಬೇತಿ ಮುಗಿದು ಒಂದೂವರೆ ವರ್ಷಗಳ ಕಳೆದರೂ ಕೆಲಸ ಮಾತ್ರ ಸಿಕ್ಕಿರಲಿಲ್ಲ. ಕೇಳಿದಾಗ ಇಲ್ಲ ಇನ್ನೂ ಸ್ವಲ್ಪ ಸಮಯಬೇಕಾಗುತ್ತದೆ ಎಂದು ಸಬೂಬು ಹೇಳಿಕೊಂಡು ಬಂದಿದ್ದ.
ಸೋಮವಾರ ವಿಜಯ್ ಕಾರವಾರದ ಮನೆಗೆ ಬಂದ ವಿಷಯ ತಿಳಿದ ಕೆಲವರು, ಆತನ ಬಳಿ ಹೋಗಿ ಕೆಲಸ ಕೊಡಿಸು ಇಲ್ಲವಾದಲ್ಲಿ ಹಣ ಮರಳಿಸು ಎಂದು ಹೇಳಿದ್ದಾರೆ. ಆಗ ಅವರ ಬಳಿ ಮಾತಿನ ಚಕಮಕಿ ನಡೆಸಿದ್ದಾನೆ. ಹಲ್ಲೆ ಮಾಡಲು ಮುಂದಾಗಿದ್ದಾನೆ.
ವಿಜಯ್ಗೆ ಹಣಕೊಟ್ಟ ಹಲವರು ಆತನ ಮನೆಗೆ ಬಂದು ಪೊಲೀಸ್ ಠಾಣೆಗೆ ಆತನನ್ನು ಕರೆದುಕೊಂಡು ಬಂದಿದ್ದಾರೆ. ಆಗ ವಿಜಯ್ ವಂಚನೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ವಿಜಯ್ ಹಲವರ ಮೂಲ ಪ್ರಮಾಣ ಪತ್ರಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ.












Click it and Unblock the Notifications