ಸೋದರ ಮಾವ ಅಷ್ಟೇ ಅಲ್ಲ, ಸೋದರನ ವಿರುದ್ಧವೂ ಕಿಡಿಕಾರಿದ ಕುಮಾರ್ ಬಂಗಾರಪ್ಪ
ಯಲ್ಲಾಪುರ, ನವೆಂಬರ್ 25: 'ನಮ್ಮ ಅಪ್ಪ ಮಾಡಿದ ಶಿವಮೊಗ್ಗ ಜಿಲ್ಲೆಯ ಶರಾವತಿ ಡೆಂಟಲ್ ಕಾಲೇಜಿನ ಜಾಗವನ್ನು ಲೂಟಿ ಮಾಡಿಕೊಂಡು ಹೋದರು ಇವರು. ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿದ್ದವರಿಗೆ ಸೊರಬ, ಶಿವಮೊಗ್ಗದಲ್ಲಿ ಜನ ಪಾಠ ಕಲಿಸಿದ್ದಾರೆ. ಭೀಮಣ್ಣ ನಾಯ್ಕರಿಗೂ ಶಿರಸಿ ಕ್ಷೇತ್ರದ ಮತದಾರರು ಕಳೆದ ಚುನಾವಣೆಯಲ್ಲಿ ಪಾಠ ಕಲಿಸಿದ್ದರು. ಇದೀಗ ಯಲ್ಲಾಪುರ ಕ್ಷೇತ್ರದ ಜನರೂ ತಕ್ಕ ಉತ್ತರ ಕೊಡಲಿದ್ದಾರೆ' ಎಂದು ಮಾವ ಹಾಗೂ ಸಹೋದರ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ರಾಜ್ಯ ಮುಖಂಡ ಕುಮಾರ್ ಬಂಗಾರಪ್ಪ ಮತ್ತೆ ಕಿಡಿಕಾರಿದ್ದಾರೆ.
ಶಿರಸಿ ತಾಲೂಕಿನ ಕಾಳಂಗಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಅವರು ಇಬ್ಬರ ಮೇಲೂ ವಾಗ್ದಾಳಿ ನಡೆಸಿದರು. 'ನಾನು ಅಪ್ಪ, ಅಮ್ಮನನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಆರೋಪಿಸಿದ್ದಾರೆ. ನನಗೆ ನನ್ನ ತಂದೆ, ತಾಯಿಯೇ ದೇವರು. ಸುಳ್ಳನ್ನು ಹೇಳಿಕೊಂಡು ರೌಡಿಸಂ ಮಾಡಿಕೊಂಡು ಭೀಮಣ್ಣ ರಾಜಕಾರಣ ಮಾಡುತ್ತಿದ್ದಾರೆ. ಅವರು ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ. ನಿಮ್ಮ ಸುಳ್ಳಿನ ಕಂತೆಗೆ ಶಿವಮೊಗ್ಗ ಜನರು, ಸೊರಬ ಜನರು ಉತ್ತರ ಕೊಟ್ಟಿದ್ದು, ಯಲ್ಲಾಪುರದ ಜನರೂ ಸದ್ಯದಲ್ಲಿಯೇ ಉತ್ತರ ನೀಡಲಿದ್ದಾರೆ' ಎಂದು ಕಿಡಿಕಾರಿದರು.
ಅನರ್ಹ ಶಾಸಕರು ಈಗಾಗಲೇ ಗೆದ್ದಿದ್ದರೆ ಮತ್ಯಾಕೆ ಪ್ರಚಾರ: ದೇಶಪಾಂಡೆ
'ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಮ್ಮಿ ಕ್ಯಾಂಡಿಡೇಟ್' ಎಂದು ಪುನರುಚ್ಛರಿಸಿದ ಅವರು, 'ಕಳೆದ ಬಾರಿ ಶಿವಮೊಗ್ಗದಲ್ಲೂ ಎಂಪಿ ಎಲೆಕ್ಷನ್ ನಲ್ಲಿ ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಅಭ್ಯರ್ಥಿಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಇರುವವರಿಗೆ ಟಿಕೆಟ್ ಕೊಡುವ ಪರಿಸ್ಥಿತಿ ಎರಡೂ ಪಕ್ಷದಲ್ಲೂ ಇದೆ. ಚುನಾವಣೆ ಯಾವ ರೀತಿ ಮಾಡಬೇಕು ಅನ್ನುವ ಪಾಠವನ್ನು ಇನ್ನೂ ಕಾಂಗ್ರೆಸ್ ಕಲಿತಿಲ್ಲ' ಎಂದು ಜರಿದರು.
ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮಾತನಾಡಿ, 'ಈ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ನಾವು ಹತ್ತು ಕ್ಷೇತ್ರದಲ್ಲಾದರೂ ಗೆಲ್ಲಲೇಬೇಕು. ಈಗಾಗಲೇ ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡಲು ಸಿದ್ಧವಾಗಿದೆ ಎನ್ನುತ್ತಿದೆ. ಒಂದೊಮ್ಮೆ ಚುನಾವಣೆಯಲ್ಲಿ ಹಿನ್ನಡೆಯಾದರೆ ಮತ್ತೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಜೆಡಿಎಸ್ ಗೆ ಬೇಕಾಗಿರುವುದು ಕಾಯಂ ಅತಂತ್ರ ಸ್ಥಿತಿ. ಅವರಿಗೆ ಸ್ವತಂತ್ರ ಆಡಳಿತ ಬೇಡವಾಗಿದೆ. ಒಂದೊಮ್ಮೆ ಜೆಡಿಎಸ್ ಬೆಂಬಲ ಪಡೆದರೆ ಬಿಜೆಪಿ ಸರ್ಕಾರವೂ ಅತಂತ್ರ ಸರ್ಕಾರವೇ ಆಗುತ್ತದೆ. ಅದಕ್ಕಾಗಿ ಚುನಾವಣೆಯಲ್ಲಿ ಗೆಲ್ಲಿಸಿ, ಸುಭದ್ರ ಸರ್ಕಾರವನ್ನ ಕಟ್ಟೋಣ' ಎಂದು ಕರೆ ನೀಡಿದರು.