ಕೊರೊನಾ ವೈರಸ್ ಭೀತಿ: ಸಂಕಷ್ಟದಲ್ಲಿ ಸಿಲುಕಿದ ಕಾರವಾರದ ಯುವಕ
ಕಾರವಾರ, ಫೆಬ್ರವರಿ 08: ಪ್ರಯಾಣಿಕರು ಸೇರಿದಂತೆ ಸುಮಾರು 40 ಮಂದಿಗೆ ಕೊರೊನಾ ವೈರಸ್ ಹರಡಿರುವ ಶಂಕೆಯ ಹಿನ್ನೆಲೆಯಲ್ಲಿ ಜಪಾನ್ ನ ಯುಕೋಮದ ಸಮುದ್ರ ಮಧ್ಯದಲ್ಲಿ ಲಕ್ಸುರಿ ಕ್ರೂಸ್ ವೊಂದನ್ನು ತಡೆ ಹಿಡಿಯಲಾಗಿದೆ. ಇದರಲ್ಲಿ ಕಾರವಾರದ ಯುವಕನೊಬ್ಬನೂ ಇದ್ದು, ಆತನ ಕುಟುಂಬವೀಗ ದಿಕ್ಕುತೋಚದಂತಾಗಿ ಕುಳಿತಿದೆ.
ಯುಎಸ್ಎನ ಡೈಮಂಡ್ ಪ್ರಿನ್ಸಸ್ ಕ್ರೂಸ್ ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ಜಪಾನ್ ನಿಂದ ಸಿಂಗಾಪುರಕ್ಕೆ ಕರೆದುಕೊಂಡು ಬರುತ್ತಿತ್ತು. ಈ ವೇಳೆ ಕೆಲವರಲ್ಲಿ ವೈರಸ್ ಇದೆ ಎಂದು ಶಂಕಿಸಲಾಗಿತ್ತು. ಅದು ಒಬ್ಬರಿಂದ ಒಬ್ಬರಿಗೆ ಹರಡಿ ಇದೀಗ ಸುಮಾರು 40 ಮಂದಿಯಲ್ಲಿ ಕೊರೊನಾ ರೋಗ ಲಕ್ಷಣ ಕಂಡು ಬಂದಿದೆ ಎನ್ನಲಾಗಿದೆ.
ಈ ನಡುವೆ ಕಾರವಾರಷ ಪದ್ಮನಾಭನಗರ ನಿವಾಸಿಯಾಗಿದ್ದ ಅಭಿಷೇಕ್ ಮಗರ್, ಕಳೆದ ಮೂರು ತಿಂಗಳಿನಿಂದ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಶೆಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕೊರೋನಾ ವೈರಸ್ ಆತಂಕದಿಂದಾಗಿ ಯುಕೋಮದ ಸಮುದ್ರದ ನಡುವೆಯೇ ಕ್ರೂಸ್ ಅನ್ನು ತಡೆ ಹಿಡಿಯಲಾಗಿದೆ. ಇನ್ನಷ್ಟು ಮಂದಿಗೆ ವೈರಸ್ ಹರಡುವ ಭೀತಿ ಇದ್ದು, ಅದರಲ್ಲಿರುವ ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಯೂ ಅತ್ತ ದಡಕ್ಕೂ ತಲುಪಲಾಗದೆ, ಇತ್ತ ಕ್ರೂಸ್ ನಲ್ಲಿಯೂ ಇರಲಾಗದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಇತ್ತ ಅಭಿಷೇಕ್ ನ ಕುಟುಂಬಸ್ಥರಲ್ಲೂ ಆತಂಕ ಮನೆ ಮಾಡಿದ್ದು, ಮಗನನ್ನು ರಕ್ಷಿಸಿ ಕರೆತರುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಸರ್ಕಾರದ ಪ್ರತ್ಯುತ್ತರಕ್ಕಾಗಿ ಹಾಗೂ ಮಗನ ಸುರಕ್ಷಿತ ವಾಪಸ್ಸಾತಿಗಾಗಿ ಕುಟುಂಬ ಕಾದು ಕುಳಿತಿದೆ.












Click it and Unblock the Notifications