ಶಿರವಾಡ; ಸರ್ಕಾರದಿಂದ ಸ್ಥಾಪಿಸಿದ ಕೈಗಾರಿಗಳು ವಿನಾಶದತ್ತ!
ಕಾರವಾರ, ಆಗಸ್ಟ್, 21: ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಮೂರು ದಶಕಗಳ ಹಿಂದೆ ಕಾರವಾರ ತಾಲ್ಲೂಕಿನ ಶಿರವಾಡದಲ್ಲಿ ಸ್ಥಾಪಿಸಿದ್ದ ಕೈಗಾರಿಕಾ ವಲಯದ ಕೆಲ ಪ್ರದೇಶಗಳು ಪಾಳು ಬಿದ್ದಿವೆ. ಅಲ್ಲದೇ ಕೆಲವೆಡೆ ಕೈಗಾರಿಕೆಗೆ ಪಡೆದ ಜಾಗವನ್ನು ವಸತಿ ಪ್ರದೇಶವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಇನ್ನು ಕೆಲವರು ಕೈಗಾರಿಕೆಗಳನ್ನು ಅರ್ಧಕ್ಕೆ ಮುಚ್ಚಿ ಬೀಗ ಹಾಕಿದ ಪರಿಣಾಮ ಯಂತ್ರೋಪಕರಣಗಳು ತುಕ್ಕು ಹಿಡಿಯುವ ಮಟ್ಟಕ್ಕೆ ತಲುಪಿವೆ.
ಸರ್ಕಾರ ಕೈಗಾರಿಕೆಗಳು ಬೆಳೆಯಲಿ, ಆರ್ಥಿಕ ಪ್ರಗತಿ ಆಗಲಿ, ಹೆಚ್ಚು ಉದ್ಯೋಗ ಸೃಷ್ಟಿ ಆಗಲಿ ಅನ್ನುವ ಕಾರಣಕ್ಕೆ ಕೈಗಾರಿಕಾ ವಲಯವನ್ನು ಸ್ಥಾಪಿಸಿತ್ತು. ಕಾರವಾರ ತಾಲ್ಲೂಕಿನ ಶಿರವಾಡದಲ್ಲಿ ಸರ್ಕಾರ 1991ರಲ್ಲಿ 4.25 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪಿಸಿತ್ತು.
ಅಲ್ಲದೇ ಈ ಪ್ರದೇಶದಲ್ಲಿ 10 ಮಳಿಗೆ ಹಾಗೂ 38 ನಿವೇಶನಗಳನ್ನು ಆಸಕ್ತಿ ವಹಿಸಿದವರಿಗೆ ಕಡಿಮೆ ದರದಲ್ಲಿ ನೀಡಲಾಗಿತ್ತು. ಹಾಗೂ ಕೈಗಾರಿಕೆಗೆ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಿತ್ತು. ಆರಂಭದಲ್ಲಿ ಒಂದಷ್ಟು ಕೈಗಾರಿಕೆಗಳನ್ನು ಪ್ರಾರಂಭಿಸಲಾಗಿತ್ತು. ಇದೀಗ ಅದರಲ್ಲಿ ಕೆಲವೇ ಕೆಲವು ಕಂಪನಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಆರಂಭದಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಸಿಕ್ಕ ಕಾರಣ ಒಂದಷ್ಟು ಜನರು ಉತ್ಸಾಹದಲ್ಲಿಯೇ ಖರೀದಿ ಮಾಡಿ ಕಂಪನಿಗಳನ್ನು ಪ್ರಾರಂಭಿಸಿದ್ದರು. ಆದರೆ ಈ ಕಂಪನಿಗಳು ಕೆಲವೇ ವರ್ಷಗಳಲ್ಲಿ ಮುಚ್ಚಿ ಹೋಗಿದ್ದು ನಿವೇಶನದಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಅಲ್ಲದೇ ಇನ್ನು ಕೆಲವು ನಿವೇಶನಗಳಲ್ಲಿ ಯಾವುದೇ ರೀತಿಯ ಕೈಗಾರಿಕೆಗಳನ್ನು ಪ್ರಾರಂಭಿಸದ ಕಾರಣ ಗಿಡಗಂಟಿಗಳು ಬೆಳೆದು ಆ ಪ್ರದೇಶಗಳು ಹಾವು, ಚೇಳುಗಳ ವಾಸಸ್ಥಾನವಾಗಿ ಮಾರ್ಪಟ್ಟಿವೆ.
20ಕ್ಕೂ ಅಧಿಕ ಕೈಗಾರಿಕೆಗಳು ಬಂದ್
ಶಿರವಾಡ ಕೈಗಾರಿಕಾ ವಲಯದಲ್ಲಿ 20ಕ್ಕೂ ಅಧಿಕ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಇನ್ನು ಕೆಲವು ನಿವೇಶನಗಳನ್ನು ವಸತಿ ಪ್ರದೇಶಗಳನ್ನಾಗಿ ಮಾರ್ಪಡಿಸಿಕೊಳ್ಳಲಾಗಿದೆ. ಕೆಲವರು ಕೈಗಾರಿಕೆಗಳ ಬೋರ್ಡ್ ಹಾಕಿ ವಸತಿ ಪ್ರದೇಶಗಳನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ಯಾರು ಕನಿಷ್ಟ ವರ್ಷಗಳ ಕಾಲ ಕೈಗಾರಿಕೆ ನಡೆಸದೇ ಪಾಳು ಬಿಟ್ಟಿದ್ದಾರೇಯೋ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಬೇಕಿದೆ. ಈ ಮೂಲಕ ಕೈಗಾರಿಕೆ ಬೆಳೆಸಲು ಪ್ರೋತ್ಸಾಹಿಸಬೇಕು ಎಂದು ಅಲ್ಲಿ ಸ್ಥಳೀಯರಾದ ಮಾಧವ ನಾಯಕ ಅವರು ಒತ್ತಾಯಿಸಿದ್ದಾರೆ.
ಪಾಳು ಕೊಂಪೆಯಾದ ಕೈಗಾರಿಕಾ ಪ್ರದೇಶ
ಕಾರವಾರದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಿದಾಗ ಶಿರವಾಡ ಗ್ರಾಮ ಅಭಿವೃದ್ಧಿ ಆಗಿರಲಿಲ್ಲ. ಆದರೆ ಸದ್ಯ ನಗರ ಮಟ್ಟದಲ್ಲಿಯೇ ಈ ಗ್ರಾಮ ಬೆಳೆದಿದ್ದು, ಗ್ರಾಮದಲ್ಲಿನ ಭೂಮಿಗೂ ಸಾಕಷ್ಟು ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದಾಗಿ ಕೈಗಾರಿಕೆಗೆ ಜಾಗ ಪಡೆದವರು ಬೇರೆಯವರಿಗೂ ನೀಡದೇ ಸುಮ್ಮನೆ ಬಾಗಿಲು ಹಾಕಿದ್ದಾರೆ ಎಂದು ಅಲ್ಲಿನ ಸ್ಥಳೀಯರ ಆರೋಪವಾಗಿದೆ. ಈ ಕಾರಣದಿಂದ ಕೈಗಾರಿಕಾ ವಲಯ ಪಾಳು ಕೊಂಪೆಯಾಗಿದೆ. ಉದ್ಯೋಗಕ್ಕಾಗಿ ಸಾವಿರಾರು ಯುವಕರು ನೆರೆಯ ಗೋವಾಕ್ಕೆ ತೆರಳುತ್ತಿದ್ದಾರೆ. ಕೈಗಾರಿಕಾ ಇಲಾಖೆ ಈ ಬಗ್ಗೆ ಮುತುವರ್ಜಿವಹಿಸಿ ಕೈಗಾರಿಕೆಯನ್ನು ಬಾಗಿಲು ಹಾಕಿದವರ ವಿರುದ್ಧ ಕ್ರಮ ಜರುಗಿಸಬೇಕು. ಅವರಿಂದ ಭೂಮಿಯನ್ನು ವಾಪಾಸ್ ಪಡೆದು ಹೊಸ ಕೈಗಾರಿಕೆ ಪ್ರಾರಂಭಿಸಲು ಅನುಕೂಲ ಮಾಡಿಕೊಟ್ಟರೆ ಆರ್ಥಿಕ ಪ್ರಗತಿಯ ಜೊತೆಗೆ ಉದ್ಯೋಗಗಳು ಸೃಷ್ಟಿ ಆಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಸಚಿವರು ತೆಗೆದುಕೊಂಡ ನಿರ್ಧಾರ ಏನು?
ಶಿರವಾಡದಲ್ಲಿ ಕೆಎಸ್ಐಡಿಸಿ ವತಿಯಿಂದ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ ಇದೀಗ ಕೆಲವರು ಪಾಳು ಅದನ್ನು ಬಿಟ್ಟಿದ್ದು, ಇನ್ನು ಕೆಲವರು ವಸತಿ ಪ್ರದೇಶವಾಗಿ ಮಾರ್ಪಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇದೇ ರೀತಿ ರಾಜ್ಯಾದ್ಯಂತ ಸಮಸ್ಯೆ ಇರುವ ಕಾರಣ ಜಂಟಿ ನಿರ್ದೇಶಕರ ಸಭೆಯಲ್ಲಿ ಸಚಿವರು ಕೆಲವು ಕಟ್ಟಿನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಖಾಲಿ ಬಿಟ್ಟಿರುವ ಕೈಗಾರಿಕಾ ಪ್ರದೇಶಗಳನ್ನು ನಿಯಮದಂತೆ ಮರಳಿ ಪಡೆಯುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕುತ್ತಿದ್ದು, ಆ ಪ್ರದೇಶದಲ್ಲಿ ಪುನಃ ಕೈಗಾರಿಕೆ ಪ್ರಾರಂಭಿಸಲು ಕೈಗಾರಿಕಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಜಯಂತ್ ಅವರು ತಿಳಿಸಿದ್ದಾರೆ.
ಹೊಸ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿದ ಒತ್ತಡ
ಒಟ್ಟಿನಲ್ಲಿ ಸರ್ಕಾರ ಕೈಗಾರಿಕೆಗಳು ಬೆಳೆದು ಹೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎಂದು ಮಾಡಿದ ಕೈಗಾರಿಕಾ ವಲಯಗಳನ್ನು ಸ್ಥಾಪಿಸಿತ್ತು. ಆದರೆ ಕೈಗಾರಿಕೆಗಳು ಪಾಳು ಬಿದ್ದಂತಾಗಿರುವುದು ನಿಜಕ್ಕೂ ದುರಂತವೇ ಸರಿ ಎಂದು ಸ್ಥಳೀಯರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಮುಚ್ಚಿರುವ ಕೈಗಾರಿಕಾ ಜಾಗದಲ್ಲಿ ಹೊಸ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಕಾರವಾರದ ಜನರ ಆಗ್ರಹವಾಗಿದೆ.