ಉತ್ತರ ಕನ್ನಡ; ಮಳೆ, ಹೆದ್ದಾರಿಗಳಲ್ಲಿ ಗುಡ್ಡ ಕುಸಿತದ ಭೀತಿ
ಕಾರವಾರ, ಜುಲೈ 3: ಮುಂಗಾರು ಮಳೆ ಜೋರಾದ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದ ಭೀತಿ ಕಾಡತೊಡಗಿದೆ. ಕಳೆದ ಕೆಲ ವರ್ಷಗಳಿಂದ ಪ್ರತಿ ಮಳೆಗಾಲದ ವೇಳೆ ಕುಸಿಯುವ ಗುಡ್ಡಗಳು ಈ ಸಲವೂ ಮಳೆಗಾಲದ ಆರಂಭದಲ್ಲಿಯೇ ಅಲ್ಲಲ್ಲಿ ಬಂಡೆಗಲ್ಲುಗಳ ಸಹಿತ ಧರೆಗಪ್ಪಳಿಸುತ್ತಿದ್ದು, ರಸ್ತೆಗಳಲ್ಲಿ ಓಡಾಡುವವರ ಆತಂಕ ಹೆಚ್ಚಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ಕಾರವಾರದಿಂದ ಭಟ್ಕಳದವರಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಕುಂಟುತ್ತಿದೆ. ಕಾಮಗಾರಿ ನಡೆಸಿರುವ ಐಆರ್ಬಿ ಕಂಪನಿಯ ಅವೈಜ್ಞಾನಿಕ ಕೆಲಸಗಳಿಂದ ಆರಂಭದಿಂದಲೂ ಪ್ರತಿ ಮಳೆಗಾಲದಲ್ಲಿ ಗುಡ್ಡಗಳು ಕುಸಿಯುತ್ತಲೇ ಇದ್ದು ಈ ಭಾರಿಯೂ ಈಗಾಗಲೇ ಹೆದ್ದಾರಿಗಳಲ್ಲಿ ಮಣ್ಣು ಕಲ್ಲುಗಳು ಧರೆಗುರುಳಲಾರಂಭಿಸಿವೆ.
ಹೊನ್ನಾವರದ ಖರ್ವಾ ಕ್ರಾಸ್ ಬಳಿ ಕಳೆದ ಎರಡು ದಿನದ ಹಿಂದೆ ಇದೇ ಹೆದ್ದಾರಿ 66ರ ಮೇಲೆ ಗುಡ್ಡಕುಸಿತವಾಗಿದೆ. ಅದೃಷ್ಟವಸಾತ್ ಮಣ್ಣು ಹೆದ್ದಾರಿಯ ಒಂದು ಭಾಗದಲ್ಲಿ ಬಿದ್ದು ಆ ಸಮಯದಲ್ಲಿ ಯಾರು ಓಡಾಟ ನಡೆಸದ ಕಾರಣ ಅವಘಡಗಳು ಸಂಭವಿಸಿಲ್ಲ.
ಇನ್ನು ಕಾರವಾರದ ಬಿಣಗಾ ಸಂಕ್ರುಭಾಗದ ಬಳಿ ಗುಡ್ಡ ಕುಸಿಯುತ್ತಲೇ ಇದೆ. ಬೃಹತ್ ಬಂಡೆಗಲ್ಲುಗಳು ಹೆದ್ದಾರಿಗೆ ಉರುಳಿಬಿದ್ದಿವೆ. ಹೆದ್ದಾರಿಯಲ್ಲಿ ಒಂದು ಬದಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಕಾರಣ ಇದರಿಂದ ಯಾವುದೇ ಅಪಾಯವಾಗಿಲ್ಲ. ಗುಡ್ಡದಿಂದ ಬರುವ ಮಳೆ ನೀರು ಗುಡ್ಡದ ಮಣ್ಣಿನಲ್ಲಿ ಇಂಗಿ ಗುಡ್ಡ ಕುಸಿತವಾಗುತ್ತಿದೆ.
ಇನ್ನು ಹೆದ್ದಾರಿಯ ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡಕುಸಿತವಾಗಿ ಚರಂಡಿಗಳು ಮಣ್ಣಿನಿಂದ ಮುಚ್ಚಿಹೋಗಿದ್ದು ಚರಂಡಿ ನೀರು ಹೆದ್ದಾರಿ ಮೇಲೆ ಹರಿಯುತ್ತಿದೆ. ಇದರಿಂದ ಸವಾರರು ಪರದಾಡಬೇಕಾದ ಸ್ಥಿತಿ ಇದೆ. ಇದಲ್ಲದೇ ಹೆದ್ದಾರಿಯ ಅಲ್ಲಲ್ಲಿ ಕಡಿದ ಗುಡ್ಡ ಗಳಲ್ಲಿ ಸಿಲುಕಿರುವ ಕಲ್ಲುಗಳನ್ನು ಹಾಗೆ ಬಿಟ್ಟಿದ್ದು ಅವುಗಳನ್ನು ತೆರವುಗೊಳಿಸುವ ಕಾರ್ಯವಾಗಿಲ್ಲ. ಒಂದೊಮ್ಮೆ ಜೋರು ಮಳೆಯಾದರೆ ಇವುಗಳು ಕುಸಿದುಬೀಳುವ ಆತಂಕ ಇದೆ.

ಪ್ರತಿ ಮಳೆಗಾಲದಲ್ಲೂ ಗುಡ್ಡಕುಸಿತ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಕೆಲ ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿಯು ಗುಡ್ಡಕುಸಿತವಾಗುತ್ತಿದೆ. ಅದೆಷ್ಟೊ ಮಂದಿ ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿದ್ದಾರೆ. ಇಷ್ಟಾದರೂ ಐಆರ್ಬಿ ಕಂಪನಿ ಜಿಲ್ಲೆಯ ಅಧಿಕಾರಿಗಳು ಮಳೆಗಾಲ ಹತ್ತಿರ ಬಂದಾಗ ಎಚ್ಚರಿಕೆವಹಿಸಲು ಮುಂದಾಗುತ್ತಿವೆ. ಈ ಭಾರಿ ಕೂಡ ಮಣ್ಣು ತೆರವು ಮಾಡಿದ ಬಿಣಗಾ ಸೇರಿದಂತೆ ಹೆದ್ದಾರಿಯ ಅಲ್ಲಲ್ಲಿ ಗುಡ್ಡ ಬಾಯ್ತೆರೆದುಕೊಂಡಿದ್ದು, ನಿತ್ಯ ಓಡಾಟ ಮಾಡುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ಇದೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವಂತೆ ಹೆದ್ದಾರಿಯಲ್ಲಿ ನಿತ್ಯ ಸಂಚಾರ ಮಾಡುವ ಸ್ಥಳಿಯರು ಆಗ್ರಹಿಸಿದ್ದಾರೆ.

ಹೆದ್ದಾರಿಗೆ ಬೀಳುತ್ತಿರುವ ಕಲ್ಲುಗಳು
ಕಳೆದ ವರ್ಷ ಮಳೆಗಾಲದಲ್ಲಿ ಹೆದ್ದಾರಿ ಸಹಿತ ಗುಡ್ಡ ಕುಸಿತವಾಗಿದ್ದ ಅಣಶಿ ಘಟ್ಟದಲ್ಲಿ ಮತ್ತೆ ಗುಡ್ಡದಿಂದ ಕಲ್ಲು- ಮಣ್ಣು ಜಾರಿ ರಸ್ತೆಗೆ ಕುಸಿಯಲಾರಂಭಿಸಿದೆ. ಮೊದಲ ಕುಸಿತವಾದ ಸ್ವಲ್ಪ ದೂರದಲ್ಲಿಯೇ ಮಣ್ಣು ಕಲ್ಲುಗಳು ಕುಸಿದು ಹೆದ್ದಾರಿಗೆ ಬಿದ್ದಿದ್ದು ನಿತ್ಯ ಓಡಾಟ ನಡೆಸುವವರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿತ್ತು. ಇದರಿಂದ ಈ ಭಾಗದಲ್ಲಿ ಸಂಪರ್ಕ ಕಡಿತಗೊಂಡಿ ಸುಮಾರು ಎರಡು ತಿಂಗಳು ಜನ ಪರದಾಡುವಂತಾಗಿತ್ತು. ಕಾರವಾರದಿಂದ ಜೊಯಿಡಾ, ದಾಂಡೇಲಿ ಹಾಗೂ ಬೆಳಗಾವಿ, ಧಾರವಾಡಕ್ಕೆ ತೆರಳುವ ಈ ಹೆದ್ದಾರಿಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತವೆ. ಮಾತ್ರವಲ್ಲದೆ ಘಟ್ಟದ ಮೇಲ್ಬಾಗ ಹಾಗೂ ಕರಾವಳಿಯನ್ನು ಸಂಪರ್ಕಿಸಲು ಈ ಮಾರ್ಗವನ್ನು ಹೆಚ್ಚು ಜನರ ಬಳಕೆ ಮಾಡುತ್ತಾರೆ.

ಹಲವು ಮಾರ್ಗದಲ್ಲಿ ಗುಡ್ಡದ ಮಣ್ಣು ಸಡಿಲ
ಜಿಲ್ಲೆಯಲ್ಲಿ ಮಳೆ ಜೋರಾಗುತ್ತಿದ್ದು ಅಣಶಿ ಸೇರಿದಂತೆ ಜಿಲ್ಲೆಯ ಹಲವು ಮಾರ್ಗಗಳಲ್ಲಿ ಗುಡ್ಡದ ಮಣ್ಣು ಸಡಿಲಗೊಂಡಿದೆ. ಮಳೆಗಾಲ ಪೂರ್ವ ಗುಡ್ಡಗಳು ಕುಸಿಯದಂತೆ ಕ್ರಮವಹಿಸಬೇಕಿತ್ತು. ಆದರೆ ಈವರೆಗೂ ಯಾವುದೇ ಕ್ರಮವಾದಂತೆ ಕಂಡುಬರುತ್ತಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಇನ್ನಾದರೂ ಸಂಭವನೀಯ ಅನಾಹುತ ತಡೆಯಲು ಕೂಡಲೇ ಕಾರ್ಯಪ್ರವೃತ್ತರಾಗಿ ಗುಡ್ಡಗಳಿಂದ ಮಣ್ಣು ಜಾರದಂತೆ ವ್ಯವಸ್ಥೆ ಮಾಡಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಆಗ್ರಹಿಸಿದ್ದಾರೆ.

ಗುಡ್ಡ ಕುಸಿತ ತಪ್ಪಿಸಲು ಅಗತ್ಯ ಮುನ್ನಚ್ಚರಿಕಾ ಕ್ರಮಕ್ಕೆ ಸೂಚನೆ
ಇನ್ನು ಐಆರ್ ಬಿ ಕಾಮಗಾರಿಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗಮನಕ್ಕೆ ತಂದಾಗ ಈಗಾಗಲೇ ಐಆರ್ ಬಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗುಡ್ಡದಿಂದ ಬರುವ ನೀರು ಹೆದ್ದಾರಿಯಲ್ಲಿ ಬ್ಲಾಕ್ ಆಗಿರುವುದು, ಗುಡ್ಡ ಕುಸಿತ ತಪ್ಪಿಸಲು ಅಗತ್ಯ ಮುನ್ನಚ್ಚರಿಕಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಬಗ್ಗೆ ಯಾವುದೇ ಕ್ರಮವಾಗದಿದ್ದರೇ ಮತ್ತೊಮ್ಮೆ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications