ಮಹಾಬಲೇಶ್ವರ ದೇವಾಲಯವನ್ನು ಮಠಕ್ಕೆ ತಕ್ಷಣ ಹಸ್ತಾಂತರಿಸಿ: ಸರ್ವೋಚ್ಛ ನ್ಯಾಯಾಲಯ
ಕಾರವಾರ, ನ 1: ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ತಕ್ಷಣ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಂತೆ ಘನ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಆದೇಶಿಸಿದೆ.
ಶ್ರೀಮಠ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಗುರುವಾರ (ನ 1) ಮಾನ್ಯ ಮಾಡಿದ ಸರ್ವೋಚ್ಛ ನ್ಯಾಯಾಲಯ, ಸರ್ಕಾರದ ಕ್ರಮದ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೇವಾಲಯವನ್ನು ಶ್ರೀಮಠಕ್ಕೆ ತಕ್ಷಣ ಹಸ್ತಾಂತರಿಸುವಂತೆ ಆದೇಶ ನೀಡಿದೆ. ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಶ್ರೀಮಠದ ಪರವಾಗಿ ವಾದಮಂಡಿಸಿದರು.
ಸೆಪ್ಟೆಂಬರ್ 19ರ ವರೆಗೂ ದೇವಾಲಯ ಶ್ರೀಮಠದ ಆಡಳಿತದಲ್ಲೇ ಇತ್ತು, ಅಲ್ಲಿಯವರೆಗೂ ಯಾವುದೇ ಆಡಳಿತಾಧಿಕಾರಿಯ ಪ್ರಭಾರ ಇರಲಿಲ್ಲ. ಸೆ. 7ರ ಯಥಾಸ್ಥಿತಿಯನ್ನು ಮುಂದುವರಿಸುವಂತೆ ನ್ಯಾಯಾಲಯದ ಆದೇಶ ಇದ್ದರೂ ಸರ್ಕಾರ ದೇವಾಲಯವನ್ನು ವಶಪಡಿಸಿಕೊಂಡಿರುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಇದೊಂದು ಸ್ಪಷ್ಟ ನ್ಯಾಯಾಂಗ ನಿಂದನೆ ಎಂದು ಹೇಳಿರುವ ನ್ಯಾಯಪೀಠ, ಸೋಮವಾರದ (ನ 5) ಒಳಗಾಗಿ ದೇವಾಲಯದ ಆಭರಣ ಸೇರಿದಂತೆ ಸಮಸ್ತ ಚರ ಹಾಗೂ ಸ್ಥಿರಾಸ್ಥಿಗಳನ್ನು ಒಳಗೊಂಡಂತೆ ಸಮಗ್ರ ಆಡಳಿತವನ್ನು ಶ್ರೀಮಠಕ್ಕೆ ಹಸ್ತಾಂತರಿಸುವಂತೆ ಕಟ್ಟುನಿಟ್ಟಾದ ಸೂಚನೆ ನೀಡಿದೆ.
ಇದರಿಂದ, ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ, ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸಮ್ಮುಖದಲ್ಲಿ 3ನೇ ಬಾರಿಗೆ ಸರ್ಕಾರಕ್ಕೆ ಮುಖಭಂಗವಾಗಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರೂ, ಸರ್ಕಾರ ಕಾನೂನು ಬಾಹಿರವಾಗಿ ದೇವಾಲಯವನ್ನು ವಶಪಡಿಸಿಕೊಂಡಿತ್ತು.
ಇದೀಗ ಇಂದಿನ ಆದೇಶದಂತೆ ಸೋಮವಾರದ ಒಳಗಾಗಿ ಆಡಳಿತವನ್ನು ಹಸ್ತಾಂತರಿಸದೇ ಇದ್ದರೆ ತೀವ್ರ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಮಾನ್ಯ ನ್ಯಾಯಮೂರ್ತಿ ಖಾನ್ವಿಲ್ಕರ್ ನೀಡಿದ ಪ್ರಸಂಗಕ್ಕೂ ನ್ಯಾಯಾಲಯ ಸಾಕ್ಷಿಯಾಯಿತು. ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಾಗೆಯೇ ಇರಿಸಿಕೊಂಡು, ಈ ಆದೇಶವನ್ನು ನೀಡಿರುವುದು ವಿಶೇಷವಾಗಿದೆ.












Click it and Unblock the Notifications