ಕಾಳಿ ನದಿಗೆ ಅನಿಲ ಸೋರಿಕೆ: ನೂರಾರು ಮೀನುಗಳು ಸಾವು
ಕಾರವಾರ ಮೇ 27 : ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಶುಕ್ರವಾರ ಲಾರಿಯಲ್ಲಿ ಅನಿಲ ಕೊಂಡೊಯ್ಯುತ್ತಿದ್ದಾಗ ಸೋರಿಕೆ ಉಂಟಾಗಿ ಕಾಳಿ ನದಿಗೆ ಅನಿಲ ಸೇರಿದೆ. ಪರಿಣಾಮ ನೀರಿನಲ್ಲಿದ್ದ ನೂರಾರು ಮೀನುಗಳು ಸಾವನ್ನಪ್ಪಿವೆ. ಜತೆಗೆ, ಸ್ಥಳದಲ್ಲಿದ್ದ ಮರಗಳು ಸುಟ್ಟು ಹೋಗಿವೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಅನಿಲ ಸುತ್ತಮುತ್ತ ಹರಡದಂತೆ ರಾಸಾಯನಿಕ ಹಾಗೂ ನೀರನ್ನು ಸಿಂಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಕದ್ರಾ ಕೆ.ಪಿ.ಸಿ ಕಾಲೋನಿ, ಪುನರ್ವಸತಿ ಕೇಂದ್ರ ಹಾಗೂ ಕದ್ರಾ ಗ್ರಾಮಗಳಲ್ಲಿ ಎರಡು ದಿನ ಕುಡಿಯುವ ನೀರು ಸ್ಥಗಿತಗೊಳಿಸಲಾಗಿದೆ. ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ನೀರನ್ನು ಬಳಸುವಂತೆ ಕೆ.ಪಿ.ಸಿ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಯಾವುದೇ ದೂರುಗಳು ದಾಖಲಾಗಿಲ್ಲ. ಘಟನಾ ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯವರಾಗಲಿ, ಅರಣ್ಯ ಇಲಾಖೆ ಅಧಿಕಾರಿಗಳಾಗಲೀ ಭೇಟಿ ನೀಡಿಲ್ಲ. ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎರಡು ದಿನಗಳವರೆಗೆ ಕುಡಿಯುವ ನೀರಿಲ್ಲದೇ ಜನ ಪರದಾಡುವಂತಾಗಿದೆ. ಕೊನೆ ಪಕ್ಷ ಪರ್ಯಾಯವಾಗಿ ಕುಡಿಯುವ ನೀರಿಗೂ ವ್ಯವಸ್ಥೆ ಮಾಡಿಲ್ಲ ಎಂದು ಜನ ಅಲವತ್ತುಕೊಂಡಿದ್ದಾರೆ.












Click it and Unblock the Notifications