ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಉತ್ತರ ಕನ್ನಡ ಜಿಲ್ಲೆಯಿಂದ ನಾಲ್ವರು ತೇರ್ಗಡೆ
ಕಾರವಾರ, ಆಗಸ್ಟ್ 04: ಕೇಂದ್ರ ನಾಗರಿಕ ಸೇವಾ ಆಯೋಗವು 2019ನೇ ಸಾಲಿನಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಈ ಬಾರಿ ಉತ್ತರ ಕನ್ನಡ ಜಿಲ್ಲೆಯಿಂದ ನಾಲ್ಕು ಜನರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅವರ ವಿವರ ಇಲ್ಲಿದೆ...
ಹೇಮಾ ನಾಯಕ 225ನೇ rank: ಅಂಕೋಲಾ ತಾಲೂಕಿನ ವಾಸರಕುದ್ರಿಗಿಯ ಹೇಮಾ ನಾಯಕ ಅವರು 225ನೇ rankನಲ್ಲಿ ತೇರ್ಗಡೆಯಾಗಿದ್ದಾರೆ. ಶಾಂತರಾಮ ಬೀರಣ್ಣ ನಾಯಕ ಹಾಗೂ ರಾಜಮ್ಮ ಎಚ್.ನಾಯಕ ಅವರ ಮಗಳಾಗಿರುವ ಇವರು, 2017ರಲ್ಲಿ ಸಂದರ್ಶನ ಎದುರಿಸಿದ್ದರು. ಆ ಬಳಿಕ ಎರಡನೇ ಬಾರಿಗೆ ಎದುರಿಸಿದ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದಾರೆ. ಅಂಕೋಲಾದ ಶ್ರೀರಾಮ್ ಸ್ಟಡಿ ಸರ್ಕಲ್ ಹಾಗೂ ಬೆಂಗಳೂರಿನ ಇನ್ಸೈಟ್ಸ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.
ಯಲ್ಲಾಪುರದ ವೆಂಕಟರಮಣ 363ನೇ rank: ಸದ್ಯ ಎಸ್ ಬಿಐ ಬ್ಯಾಂಕ್ ಅಧಿಕಾರಿಯಾಗಿರುವ ಯಲ್ಲಾಪುರದ ವೆಂಕಟ್ರಮಣ ಕವಡಿಕೇರಿಗೆ 363ನೇ rank ಬಂದಿದೆ. ಯಾವುದೇ ಕೋಚಿಂಗ್ ಇಲ್ಲದೇ ನಾಗರಿಕ ಸೇವಾ ಪರೀಕ್ಷೆ ಪಾಸಾಗಿರುವ ಇವರು, ಈ ಹಿಂದೆ ನಾಲ್ಕು ಬಾರಿ ಯುಪಿಎಸ್ ಸಿಗೆ ಸಂದರ್ಶನ ನೀಡಿದ್ದರು. ಈ ವರ್ಷ ಐದನೇ ಬಾರಿ ಆಯ್ಕೆಯಾಗಿದ್ದಾರೆ.

ದಾಂಡೇಲಿಯ ಸಚಿನ್ ಹಿರೇಮಠ್ 213ನೇ rank: ದಾಂಡೇಲಿಯ ಸಚಿನ್ ಹಿರೇಮಠ್ ಅವರು 213ನೇ rank ಪಡೆದಿದ್ದಾರೆ. ಬಿರಿಯಂಪಾಲಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಾನಂದ.ಎಚ್ ಹಾಗೂ ಹಸನ್ಮಾಳ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ನಾಯ್ಕ ದಂಪತಿಯ ಮಗನಾಗಿರುವ ಇವರು ಬಂಗೂರನಗರ ಪಿ.ಯು. ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದರು. ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಬಳಿಕ ಆಂಧ್ರಪ್ರದೇಶದಲ್ಲಿದ್ದ ಐಪಿಸಿ ಕಂಪೆನಿಯಲ್ಲಿ ಸೇವೆಯನ್ನು ಸಲ್ಲಿಸಿ, ಐ.ಎ.ಎಸ್ಗಾಗಿ ನೌಕರಿಗೆ ರಾಜೀನಾಮೆ ನೀಡಿ ದೆಹಲಿಯ ವಾಜಿರಾಮ್ & ರವಿ ಐ.ಎ.ಎಸ್ ಕೋಚಿಂಗ್ ಸೆಂಟರಿನಲ್ಲಿ ಸತತ ಎರಡು ವರ್ಷಗಳವರೆಗೆ ಕೋಚಿಂಗ್ ಪಡೆದಿದ್ದರು. ಕೊಲ್ಕತ್ತಾದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಹಾಯಕ ನಿರ್ದೇಶಕರಾಗಿ ನೌಕರಿ ದೊರೆತು ಕಳೆದ ಮೂರು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಬಿ.ಕೃತಿ 297ನೇ rank; ಕುಮಟಾ ಕತಗಾಲ ಮೂಲದ, ಹಾಲಿ ಬೆಂಗಳೂರು ವಾಸವಿರುವ ಬಿ.ಕೃತಿ 297ನೇ rankನಲ್ಲಿ ತೇರ್ಗಡೆಯಾಗಿದ್ದಾರೆ. ಕುಮಟಾ ಕತಗಾಲದ ಮೂಲದ ಬೆಂಗಳೂರು ನಿವಾಸಿ ನಿವೃತ್ತ ಜಂಟಿ ನಿರ್ದೇಶಕ (ಎಜ್ಯುಕೇಷನ್) ಭಾಸ್ಕರ್ ವಿಷ್ಣು ಭಟ್ಟ ಹಾಗೂ ಅಲಕಾ ಭಟ್ಟ ದಂಪತಿಯ ಕಿರಿಯ ಮಗಳಾದ ಕೃತಿ, ಎಂಜಿನಿಯರಿಂಗ್ ಪದವಿ ಬಳಿಕ 2 ವರ್ಷ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿ ನಂತರ ಯುಪಿಎಸ್ಸಿ ಪರೀಕ್ಷೆ ಎದುರಿಸಿ, ತೇರ್ಗಡೆಯಾಗಿದ್ದಾರೆ.












Click it and Unblock the Notifications