ಕಾರವಾರದಲ್ಲಿ ಮತ್ತೆ ಮಳೆ, ಮೀನುಗಾರಿಕೆಗೂ ಬಿತ್ತು ಪೆಟ್ಟು
ಕಾರವಾರ, ಆಗಸ್ಟ್ 15: ಪ್ರವಾಹ ಪರಿಸ್ಥಿತಿ ಸ್ವಲ್ಪ ತಣ್ಣಗಾಗಿ ನಿರಾಳರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಜನತೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಕಳೆದೆರಡು ದಿನಗಳಿಂದ ಮತ್ತೆ ಭಾರಿ ಮಳೆಯಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ನೀರು ನಿಲ್ಲಲಾರಂಭಿಸಿದೆ.
ಕಾರವಾರದ ಬಿಣಗಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಹೆದ್ದಾರಿಯ ಪಕ್ಕದಲ್ಲಿರುವ ಗುಡ್ಡದಲ್ಲೂ ಮಣ್ಣು ಕುಸಿಯಲಾರಂಭಿಸಿದ್ದು, ವಾಹನ ಸವಾರರು ಭಯಭೀತರಾಗಿದ್ದಾರೆ. ಕುಮಟಾ ಭಾಗದಲ್ಲಿ ಹೆದ್ದಾರಿ ಬದಿಯ ಗುಡ್ಡಕ್ಕೆ ಲೇಪನ ಮಾಡಲಾಗಿದ್ದ ಸಿಮೆಂಟ್ ಕಿತ್ತು ಬೀಳುತ್ತಿದೆ.
ಶಿರವಾಡ, ಬಸ್ ನಿಲ್ದಾಣದ ಎದುರು ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.

ಇತ್ತ ಬಿಣಗಾದ ಹೆದ್ದಾರಿಯಲ್ಲಿ ನೀರು ತುಂಬಿದ ಸ್ಥಳಕ್ಕೆ ನಗರಸಭೆಯ ಪೌರಾಯುಕ್ತ ಯೋಗೀಶ್ವರ್ ಭೇಟಿ ನೀಡಿ ಪರಿಶೀಲಿಸಿದರು. ನೀರು ನಿಲ್ಲದಂತೆ, ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಸಿಕೊಟ್ಟರು.
ಆ.1ರಿಂದ ಆರಂಭಗೊಂಡಿದ್ದ ಮೀನುಗಾರಿಕೆ ಮಳೆ ಹಾಗೂ ಪ್ರವಾಹದಿಂದಾಗಿ ಸ್ಥಗಿತಗೊಂಡಿತ್ತು. ಆದರೆ, ಎರಡು ದಿನ ಬಿಸಿಲು ಬಂದ ಕಾರಣ ಮಂಗಳವಾರ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಅತ್ಯಲ್ಪ ಮತ್ಸ್ಯಬೇಟೆಯಾಡಿ ವಾಪಸ್ಸಾಗಿದ್ದರು. ಇದೀಗ ಮತ್ತೆ ಮಳೆಯಾದ ಕಾರಣ ಮೀನುಗಾರಿಕೆ ಸಂಪೂರ್ಣ ಸ್ತಬ್ಧಗೊಂಡಿದೆ.












Click it and Unblock the Notifications