ಲಾಕ್ ಡೌನ್ ಸಡಿಲಿಕೆ ನಿರ್ಧಾರ; ಉಸ್ತುವಾರಿ ಮಂತ್ರಿಗೆ ಬಿಟ್ಟ ಸರ್ಕಾರ
ಕಾರವಾರ, ಏಪ್ರಿಲ್ 30: ಲಾಕ್ ಡೌನ್ ಸಡಿಲಿಕೆಯ ಕುರಿತಂತೆ ರಾಜ್ಯ ಸರ್ಕಾರ ಪರಿಷ್ಕೃತ ಆದೇಶವೊಂದನ್ನು ಹೊರಡಿಸಿದ್ದು, ಕೊರೊನಾ ಪ್ರಕರಣಗಳ ಆಧಾರದ ಮೇಲೆ ಅಪಾಯಕಾರಿ (ರೆಡ್), ಕಡಿಮೆ ಅಪಾಯಕಾರಿ (ಆರೆಂಜ್) ಹಾಗೂ ಸುರಕ್ಷಿತ (ಗ್ರೀನ್) ವಲಯಗಳನ್ನಾಗಿ ಜಿಲ್ಲೆಗಳನ್ನು ವಿಂಗಡಿಸಲಾಗಿದೆ.
ಈ ಪ್ರಕಾರ ಉತ್ತರ ಕನ್ನಡ ಜಿಲ್ಲೆ ಕಡಿಮೆ ಅಪಾಯಕಾರಿ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದು, ಇಲ್ಲಿ ಮೇ 3 ರ ನಂತರ ಲಾಕ್ ಡೌನ್ ನಲ್ಲಿ ಸ್ವಲ್ಪ ಸಡಿಲಿಕೆ ನೀಡಿ, ಇನ್ನಷ್ಟು ಚಟುಟಿಕೆಗಳಿಗೆ ಅವಕಾಶ ನೀಡಬಹುದು ಎಂದು ಹೇಳಲಾಗಿದೆ.
Recommended Video
ಕೋವಿಡ್-19 (ಕೊರೊನಾ) ಪ್ರಕರಣ ಪತ್ತೆಯಾಗಿಯೂ, ಸದ್ಯ ಅತಿ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ವಲಯಗಳ ಪಟ್ಟಿಯಲ್ಲಿ ರಾಜ್ಯದ ಎಂಟು ಜಿಲ್ಲೆಗಳಿವೆ. ಇಲ್ಲಿ ಲಾಕ್ ಡೌನ್ ಅನ್ನು ಸಂಪೂರ್ಣ ಒಮ್ಮೆಲೆ ಸಡಿಲಿಕೆ ಮಾಡದೇ, ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ವಿವೇಚನೆಗೆ ಬಿಡಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಸಡಿಲಿಕೆ ಹೇಗಿರಬಹುದು?
ಅದರಂತೆ, ಉತ್ತರ ಕನ್ನಡದಲ್ಲಿ ಅಂಗಡಿ-ಮುಂಗಟ್ಟುಗಳು, ಕೈಗಾರಿಕೆ- ಕಚೇರಿಗಳನ್ನು ತೆರೆಯುವ ಹಾಗೂ ಜನರ ಓಡಾಟದ ಕುರಿತಂತೆ ಸಚಿವ ಶಿವರಾಮ ಹೆಬ್ಬಾರ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರ ನಿರ್ಧಾರದಂತೆ ಮೇ 3 ರ ನಂತರ ಜಿಲ್ಲೆ ಇರಲಿದೆ.
ಭಟ್ಕಳ ಮೂಲದ ಓರ್ವ ಸೋಂಕಿತ ಕಾರವಾರದ ನೌಕಾ ಆಸ್ಪತ್ರೆ ಪತಂಜಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕ ಗುಣಮುಖನಾಗಿದ್ದಾನೆ. ಈಗಾಗಲೇ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ವರದಿಯಲ್ಲಿ ನೆಗೆಟಿವ್ ಎಂದಿದ್ದರೆ ಆತನನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಸದ್ಯ ಸಕ್ರಿಯ ಪ್ರಕರಣಗಳು ಯಾವುದೂ ಇಲ್ಲವೆಂದು ಪರಿಗಣಿಸಲಾಗಿದೆ. ಆದರೆ, ಒಮ್ಮೆಲೆ ಲಾಕ್ ಡೌನ್ ಸಡಿಲಿಕೆ ಮಾಡಿದರೆ ಜಿಲ್ಲೆಗೆ ಅಪಾಯವಾಗಲಿದೆ. ಹೀಗಾಗಿ ಸುರಕ್ಷತಾ ಕ್ರಮಗಳನ್ನು ಪರಿಗಣಿಸಿ ಹಲವು ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಸಾಮಾಜಿಕ ಅಂತರ ಕಡ್ಡಾಯ
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಲಾಕ್ ಡೌನ್ ನಲ್ಲಿ ಸಂಪೂರ್ಣ ಸಡಿಲಿಕೆಯಾಗುವ ನಿರೀಕ್ಷೆ ಇದೆ. ಆದರೆ, ಅನಾವಶ್ಯಕವಾಗಿ ನಗರ ಪ್ರದೇಶಗಳಿಗೆ ಜನರು ಬರುವುದನ್ನು ನಿರ್ಬಂಧಿಸುವ ಸಾಧ್ಯತೆ ಇದೆ. ಈ ಕೊರೋನಾ ಮಹಾಮಾರಿಯ ನಡುವೆ ಮಲೆನಾಡು/ ಗ್ರಾಮೀಣ ಭಾಗಗಳಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿರುವುದರಿಂದ ಅರಣ್ಯದಲ್ಲಿ ಜನರ ಓಡಾಟಕ್ಕೆ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ. ಇನ್ನು ನಗರ ಪ್ರದೇಶಗಳಲ್ಲಿ ಅಂಗಡಿ- ಮುಂಗಟ್ಟುಗಳು, ದೈನಂದಿನ ಚಟುವಟಿಕೆಗಳು ಆರಂಭವಾಗಲಿದೆ ಎನ್ನಲಾಗಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಹಾಗೂ ಶುಚಿತ್ವ ಕಾಪಾಡಿಕೊಳ್ಳುವಿಕೆಯನ್ನು ಅನುಸರಿಸಬೇಕಿದೆ. ಜನರು ಗುಂಪುಗೂಡುವುದು ಹಾಗೂ ಅನಾವಶ್ಯಕವಾಗಿ ರಸ್ತೆಗಳಲ್ಲಿ ಅಡ್ಡಾಡುವುದಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

ಜಿಲ್ಲಾಧಿಕಾರಿಗಳ ಜೊತೆ ಉಸ್ತುವಾರಿ ಸಚಿವರ ಸಭೆ
ಅಗತ್ಯ ವಸ್ತುಗಳನ್ನು ಮನೆಮನೆಗೆ ಪೂರೈಕೆ ಮಾಡುವುದನ್ನು ಜಿಲ್ಲಾಡಳಿತ ಮುಂದುವರಿಸುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಸಾಗಾಟ ಹೊರತುಪಡಿಸಿ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳುವುದನ್ನು ನಿರ್ಬಂಧಿಸಬಹುದು. ಪ್ರಯಾಣಿಕ ವಾಹನಗಳ ಓಡಾಟ ನಗರ ಪ್ರದೇಶದಲ್ಲಿ ವಿರಳವಾಗಿರುವ ಸಾಧ್ಯತೆ ಇರಲಿದೆ.
ಈ ಎಲ್ಲ ನಿರ್ಧಾರಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ಮೇಲೆ ನಿಂತಿದೆ. ಅವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಚರ್ಚೆ ನಡೆಸಿ ನಿರ್ಧಾರಗಳನ್ನು ತೆಗೆದುಕೊಂಡು ಪ್ರಕಟಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯತಿ ಸಿಇಒ ಮೊಹಮ್ಮದ್ ರೋಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.

ಭಟ್ಕಳ ಸುರಕ್ಷಿತವಲ್ಲ, ಸಡಿಲಿಕೆ ಇಲ್ಲ
ಜಿಲ್ಲೆಯ ಮಟ್ಟಿಗೆ ಭಟ್ಕಳ ಕೊರೊನಾ ಸಂಬಂಧ ಸುರಕ್ಷಿತ ವಲಯವಲ್ಲ. ಹೀಗಾಗಿ ಈ ತಾಲ್ಲೂಕನ್ನು ರೆಡ್ ಝೋನ್ ಎಂದೇ ಜಿಲ್ಲಾಡಳಿತ ಪರಿಗಣಿಸಿ, ಇಲ್ಲಿ ಲಾಕ್ ಡೌನ್ ನಿಯಮವನ್ನು ಸಡಿಲಿಕೆ ಮಾಡುವ ಸಾಧ್ಯತೆ ಕಡಿಮೆ ಇದೆ. ರಮ್ಜಾನ್ ಆಚರಣೆಗಳು ಕೂಡ ಪ್ರಾರಂಭವಾಗಿರುವುದರಿಂದ, ಒಂದು ವೇಳೆ ಇಲ್ಲಿ ನಿಯಮ ಸಡಿಲಿಕೆ ಮಾಡಿದರೆ ಪ್ರಾರ್ಥನಾ ಮಂದಿರ, ಮಾರುಕಟ್ಟೆಗಳಲ್ಲಿ ಜನರು ಗುಂಪುಗೂಡಬಹುದು. ವ್ಯಾಪಾರ- ವಹಿವಾಟುಗಳನ್ನು ಪುನರಾರಂಭಗೊಳಿಸಿದರೆ ಲಾಕ್ ಡೌನ್ ನಿಯಮಗಳಾದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೇ ಇರಬಹುದು. ಹೀಗಾಗಿ, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬಹುತೇಕ ಭಟ್ಕಳದಲ್ಲಿ ಮೇ 3 ರ ನಂತರದ ಹಲವು ದಿನಗಳವರೆಗೂ ಲಾಕ್ ಡೌನ್ ಸಡಿಲಿಕೆ ಮಾಡುವ ಸಾಧ್ಯತೆ ಇಲ್ಲ ಎಂದೇ ಹೇಳಬಹುದು.












Click it and Unblock the Notifications