'ಶಾಸಕರು ಮುಂಬೈಗೆ ತೆರಳುವುದು ಸಾಮಾನ್ಯ, ಬೇರೆ ಅರ್ಥ ಕಲ್ಪಿಸಬೇಡಿ'
ಕಾರವಾರ, ಸೆಪ್ಟೆಂಬರ್.24: ಶಾಸಕರುಗಳು ಪಕ್ಷಾಂತರ ಮಾಡುತ್ತಿದ್ದಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.
ಕಾರವಾರದಲ್ಲಿ ಇಂದು ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸರಕಾರ ಸುಭದ್ರವಾಗಿದೆ. ಸ್ವತಃ ರಮೇಶ ಜಾರಕಿಹೊಳಿ ಕೂಡ ಸರಕಾರ 5 ವರ್ಷ ಸುಭದ್ರವಾಗಿ ನಡೆಯಲಿದೆ ಎಂದು ಹೇಳಿದ್ದಾರೆ. ಈ ವಿಷಯಕ್ಕೆ ಅನಾವಶ್ಯಕವಾಗಿ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲ.
ಇನ್ನು ಶಾಸಕರುಗಳು ಮುಂಬೈ ಅಥವಾ ಇನ್ನಿತರ ಭಾಗಗಳಿಗೆ ತೆರಳುವುದು ಸಾಮಾನ್ಯ. ಆದರೆ ಅದಕ್ಕೆ ಇನ್ನಿತರ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ ಸಚಿವರಾಗುವುದಾದರೆ ಆಗಲಿ. ಅವರು ಇನ್ನು ಯಂಗ್. ಚೈತನ್ಯದಿಂದ ಕೆಲಸ ಮಾಡುತ್ತಿದ್ದಾರೆ. ನಾನು ಮಂತ್ರಿ ಸ್ಥಾನ ಬಿಡಲು ಸಿದ್ಧನಿದ್ದೇನೆ. ಇದುವರೆಗೆ ಯಾರಿಗೂ ಸಚಿವರನ್ನಾಗಿ ಮಾಡಿ ಎಂದು ಹೇಳಿಲ್ಲ.
ಯಾವುದನ್ನು ಗಟ್ಟಿ ಹಿಡಿದುಕೊಂಡಿಲ್ಲ. ಆದರೆ ಶಿವರಾಂ ಹೆಬ್ಬಾರ ಈ ಬಗ್ಗೆ ಪ್ರಯತ್ನ ನಡೆಸಲಿ ಎಂದು ಪ್ರಶ್ನೆಯೊಂದಕ್ಕೆ ನಗುತ್ತಲೇ ಉತ್ತರಿಸಿದ್ದಾರೆ.
ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ
ಇದಕ್ಕೂ ಮೊದಲು ತಾಲೂಕಿನ ತೋಡೂರಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ವಚ್ಛತಾ ಹೀ ಸೇವಾ ಹಾಗೂ ಸ್ವಚ್ಛತಾ ಸಪ್ತಾಹಕ್ಕೆ ದೇಶಪಾಂಡೆ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ. ಸ್ವಚ್ಛತಾ ಅಭಿಯಾನ ಗಾಂಧೀಜಿ ಅವರ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸ್ವಚ್ಛತೆ ಬಗ್ಗೆ ಸಂತೃಪ್ತಿ ಇಲ್ಲ. ಆದ್ದರಿಂದ ಪ್ರತಿ ಪಂಚಾಯತ್ ವ್ಯಾಪ್ತಿಯ ಜನಪ್ರತಿನಿಧಿಗಳು, ಮುಖಂಡರು, ಸಂಘ ಸಂಸ್ಥೆಗಳು ಮುಂದೆ ಬರಬೇಕು.
ಇದು ಸರಕಾರಿ ಕೆಲಸವಾದರೆ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಜಾಗದಲ್ಲಿ ಮೊದಲು ಸ್ವಚ್ಛಗೊಳಿಸಿ. ಭವ್ಯ ರಾಷ್ಟ್ರ ನಿರ್ಮಿಸಲು ಸಹಕಾರ ನೀಡಬೇಕು ಎಂದರು.
ಸ್ವಚ್ಛ ಭಾರತ್ ಮಿಷನ್ ಸಹಯೋಗದಲ್ಲಿ ಸೆ.24 ರಿಂದ ಅ.2 ರವರೆಗೆ ಮೊದಲ ಹಂತದ ಸ್ವಚ್ಛತಾ ಸಪ್ತಾಹದಲ್ಲಿ ಸಚ್ಛಾಗೃಹಿಯೋ ಕೆ ಸ್ವಚ್ಛಾಗ್ರಹಿ ಏಕ್ ಸೇ ಅನೇಕ್ ದಿವಸವನ್ನು ಸೆ. 25 ರಂದು ಎಲ್ಲಾ ಗ್ರಾ.ಪಂನಲ್ಲಿ ಆಚರಿಸಲಾಗುತ್ತಿದೆ.
ಬಳಿಕ ಸ್ವಚ್ಛತೆ ಬಗ್ಗೆ ಬೀದಿನಾಟಕ, ಶಾಲಾ, ಕಾಲೇಜು ಆಸ್ಪತ್ರೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಶ್ರಮದಾನ, ಗಾಂಧಿ ಜಯಂತಿಯಂದು ಸ್ವಚ್ಛತಾ ಶಪತ್ ಕಾರ್ಯಕ್ರಮ ನಡೆಯಲಿದೆ.
ಇನ್ನು ಅ. 3 ರಿಂದ ಅ.8ರವರೆಗೆ ಎರಡನೇ ಹಂತದ ಸ್ವಚ್ಛತಾ ಸಪ್ತಾಹ ನಡೆಯಲಿದ್ದು, ಎಲ್ಲ ತಾಲೂಕು ಪಂಚಾಯಿತಿ ಕೇಂದ್ರಗಳಲ್ಲಿ ಸ್ವಚ್ಛತಾ ರಾಲಿ ನಡೆಯಲಿದೆ. ಅಲ್ಲದೆ ಸ್ವಸಹಾಯ ಗುಂಪುಗಳನ್ನು ಒಗ್ಗೂಡಿಸಿಕೊಂಡು ತ್ಯಾಜ್ಯಗಳ ವಿಲೇವಾರಿ, ಪ್ರಾಥಮಿಕ ರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ತಪಾಸಣಾ ಶಿಬಿರ, ಗ್ರಾ. ಪಂ ವ್ಯಾಪ್ತಿಯ ಕುಡಿಯುವ ನೀರಿನ ಟ್ಯಾಂಕ್ ಗಳ ಹೀಗೆ ಹಲವು ಕಾರ್ಯಕ್ರಮಗಳನ್ನು ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ.












Click it and Unblock the Notifications