ಕಾರವಾರದಲ್ಲಿ ದೀಪಾವಳಿ; ಮಾರುಕಟ್ಟೆಗಳಲ್ಲಿ ಪೂಜಾ ಸಾಮಾಗ್ರಿಗಳ ಬೆಲೆಯ ವಿವರ, ಇಲ್ಲಿದೆ ಮಾಹಿತಿ
ಕಾರವಾರ, ಅಕ್ಟೋಬರ್, 23: ದೇಶಾದ್ಯಂತ ದೀಪಾವಳಿ ಹಬ್ಬ ಸಂಭ್ರಮ ಮನೆಮಾಡಿದ್ದು, ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ ನಡುವೆಯೂ ಖರೀದಿ ಭರಾಟೆ ಜೋರಾಗಿದೆ. ಹಬ್ಬದ ಒಂದು ದಿನ ಮುಂಚೆಯೇ ಭಾನುವಾರ ನಗರದಲ್ಲಿ ಬೆಳಗ್ಗೆಯಿಂದಲೆ ಹೂ, ಹಣ್ಣು ಹಂಪಲು, ಕಬ್ಬು, ಬಾಳೆ ದಂಟು, ಸಿಹಿ ತಿಂಡಿಗಳು ಹಾಗೂ ಮಣ್ಣಿನಿಂದ ತಯಾರಿಸಿದ ಹಣತೆಗಳ ಖರೀದಿಯಲ್ಲಿ ಜನರು ಕಾರ್ಯನಿರತರಾಗಿದ್ದಾರೆ.
ನಗರದ ಸವಿತಾ ಸರ್ಕಲ್, ಗ್ರೀನ್ ಸ್ಟ್ರೀಟ್ ರಸ್ತೆ, ಶಿವಾಜಿ ರಸ್ತೆ, ಗಾಂಧಿ ಮಾರ್ಕೆಟ್ಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಮಂಗಳವಾರ ಲಕ್ಷ್ಮೀ ಪೂಜೆ ಇರುವುದರಿಂದ ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಪೂಜೆಗೆ ಸಿದ್ಧತೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಗ್ರಾಹಕರು ಆಸಕ್ತಿ ತೋರಿದ್ದರಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ಜನರಿಂದ ತುಂಬಿ ತುಳುಕುತ್ತಿವೆ.
ಅಂಕೋಲಾ; ಹೊಂಡೆಯಾಟದ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಹಣ್ಣು ಮತ್ತು ತರಕಾರಿಗಳ ಬೆಲೆ ಹಿಂದಿನ ದಿನಗಳಿಗಿಂತ ಏಕಾಏಕಿ 10-20 ರೂಪಾಯಿ ಏರಿಕೆ ಆಗಿದೆ. ಕಳೆದ ವಾರ ಮಾರು ಸೇವಂತಿಗೆ 80 ರಿಂದ 100 ರೂಪಾಯಿಗೆ ಸಿಗುತ್ತಿತ್ತು. ಇದೀಗ ಮಾರು ಸೇವಂತಿಗೆ 120 ರೂಪಾಯಿಗೆ ಏರಿಕೆ ಆಗಿದೆ. 10 ರೂಪಾಯಿದ್ದ ಇದ್ದ ಒಂದು ಗುಲಾಬಿ ಇದೀಗ 15-20 ರೂಪಾಯಿಗೆ ಏರಿಕೆ ಕಂಡಿದೆ. ಮಾರು ಮಲ್ಲಿಗೆ 100, ಮಾರು ಕಾಕಡ ಹೂವು 120 ರೂಪಾಯಿ, ಗೊಂಡೆ ಹೂ 80 ರಿಂದ 100 ರೂಪಾಯಿಗೆ ಮಾರಾಟ ಆಗುತ್ತಿದೆ. ಹಬ್ಬ ಇರುವುದರಿಂದ ಹಾವೇರಿ, ಗದಗ, ಧಾರವಾಡ ಭಾಗಗಳಿಂದ ವ್ಯಾಪಾರಿಗಳು ಇಲ್ಲಿಗೆ ಬಂದಿದ್ದು, ಇನ್ನೂ ಮೂರು ದಿನ ವ್ಯಾಪಾರರಿಗಳು ಇಲ್ಲೇ ಮೊಕ್ಕಾಂ ಹೂಡಲಾಗುತ್ತದೆ. ಆದರೆ ದಿನನಿತ್ಯದ ಬೆಲೆಗಳಿಗಿಂತ ಇಂದಿನಿಂದ ಸ್ವಲ್ಪ ಏರಿಕೆಯಾಗಿದೆ.
ಮಣ್ಣಿನ ಹಣತೆಗಳಿಗೆ ಹೆಚ್ಚಿದ ಬೇಡಿಕೆ
ಈ ಭಾರಿ ಲಕ್ಷ್ಮೀ ಪೂಜೆ ದಿನದಂದು ಸೂರ್ಯಗ್ರಹಣ ಬಂದಿದ್ದರಿಂದ ವ್ಯಾಪಾರಕ್ಕೂ ಕೂಡ ಗ್ರಹಣ ಮೆತ್ತಿದಂತಾಗಿದೆ ಎಂದು ರಾಣೆಬೆನ್ನೂರಿನ ಹೂವಿನ ವ್ಯಾಪಾರಿ ಮಹಾಂತೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಬಗೆ ಬಗೆಯ ಹಣೆತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿಯೂ ಮಣ್ಣಿನ ಹಾಗೂ ಪ್ಲಾಸ್ಟಿಕ್ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಆದರೆ ವ್ಯಾಪಾರಸ್ಥರು ನೀಡಿದ ಮಾಹಿತಿ ಪ್ರಕಾರ ಹೆಚ್ಚಿನ ಜನರು ಈ ಬಾರಿ ಮಣ್ಣಿನ ದೀಪಗಳನ್ನು ಕೊಳ್ಳುವಲ್ಲಿ ಮುಂದಾಗಿದ್ದಾರೆ. ದೀಪದ ಮಾದರಿಯಲ್ಲಿರುವ ಡಜನ್ ಹಣತೆಗೆ 350 ರೂಪಾಯಿ, ಡಜನ್ ಚಿಕ್ಕ ಹಣತೆಗೆ 80 ರೂಪಾಯಿ, ಡಜನ್ ಲಾಟಿನ್ ಮಾದರಿಯ ಹಣತೆಗೆ 200 ರೂಪಾಯಿ, ದೊಡ್ಡ ದೀಪ ಒಂದಕ್ಕೆ 50 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ಟಾರ್ ಮಾದರಿಯ ಚಿಕ್ಕ ಆಕಾಶ ಬುಟ್ಟಿಗೆ 90 ರಿಂದ 120 ರೂಪಾಯಿ, ದೊಡ್ಡ ಆಕಾಶ ಬುಟ್ಟಿಗೆ 250 ರೂಪಾಯಿ, ಬೇರೆ ಬೇರೆ ಗಾತ್ರದ ಆಕಾಶದ ಬುಟ್ಟಿಗೆ 350 ರಿಂದ 400 ರೂಪಾಯಿ ಇದ್ದರೆ, ಬಟ್ಟೆಯದ್ದಕ್ಕೆ 250 ರೂಪಾಯಿ, ಕಟ್ಟಿಗೆಯದ್ದಕ್ಕೆ 200, 220, 450, 500 ರೂಪಾಯಿ ದರವನ್ನು ಫಿಕ್ಸ್ ಮಾಡಿದ್ದಾರೆ.
Solar Eclipse 2022: ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಎಲ್ಲೆಲ್ಲಿ ಗೋಚರಿಸಲಿದೆ? ಕಾಲಾವಧಿ ವಿವರ
ಅಂಗಡಿಗಳಲ್ಲಿ ಜನವೋ ಜನ
ಜನರು ವಾಣಿಜ್ಯ ಮಳಿಗೆಗಳು, ಶೋರೂಂಗಳು, ವಿವಿಧ ಬಟ್ಟೆ ಅಂಗಡಿಗಳಲ್ಲಿ ಕುಟುಂಬ ಸಮೇತ ಬಂದು ಖರೀದಿ ಮಾಡುತ್ತಿರುವುದು ಎಲ್ಲೆಡೆ ಎದ್ದು ಕಾಣುತ್ತಿದೆ. ಗೃಹ ಬಳಕೆ ವಸ್ತುಗಳಾದ ಎಲ್ಸಿಡಿ ಟಿವಿಗಳು, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿಂತೆ ವಿವಿಧ ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರಸ್ಥರು ವಿಶೇಷ ಕೊಡುಗೆಗಳ ಮೂಲಕ ಜನರನ್ನು ಆಕರ್ಷಿಸುತ್ತಿರುವುದು ಕಂಡುಬಂದಿದೆ. ಇನ್ನು ಚಿನ್ನಾಭರಣ ಮಳಿಗೆಗಳು ಜನರಿಂದ ತುಂಬಿ ತುಳುಕುತ್ತಿದ್ದು, ಪ್ರತಿದಿನ ನಗರದಲ್ಲಿ ಲಕ್ಷಾಂತರ ರೂಪಾಯಿ ಚಿನ್ನ ಹಾಗೂ ಬೆಳ್ಳಿ ಆಭರಣಗಳ ವಹಿವಾಟು ನಡೆಯುತ್ತಿರುವ ಬಗ್ಗೆ ವ್ಯಾಪಾರಿಯೊಬ್ಬರು ತಿಳಿಸಿದರು.
ಖರೀದಿ ಭರಾಟೆ ಜೋರು
ಮಾರುಕಟ್ಟೆಗಳಲ್ಲಿ ಹಣ್ಣು ಹಾಗೂ ತರಕಾರಿ ಬೆಲೆಯಲ್ಲಿಯೂ ಏರಿಕೆ ಕಂಡಿದ್ದು, ಕೆ.ಜಿ. ಸೇಬು 100 ರಿಂದ 180 ರೂಪಾಯಿ, ಕೆ.ಜಿ. ದಾಳಿಂಬೆ 140-200 ರೂಪಾಯಿ, ಕೆ.ಜಿ. ಸಂತ್ರ 80 ರೂಪಾಯಿ, ಕೆ.ಜಿ. ಮೋಸಂಬಿ 80-110 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ತರಕಾರಿಯಲ್ಲಿಯೂ ಬೆಲೆ ಏರಿಕೆ ಕಂಡಿದ್ದು, ಕೆ.ಜಿ.ಟೊಮೆಟೋ 40 ರಿಂದ 60 ರೂಪಾಯಿಗೆ ಏರಿಕೆ ಆಗಿದೆ. ಕೆ.ಜಿ.ಈರುಳ್ಳಿ 30 ರೂಪಾಯಿ, ಕೆ.ಜಿ. ಬಟಾಟೆ 40 ರೂಪಾಯಿ, ಕೆ.ಜಿ. ಬೀನ್ಸ್ 120 ರೂಪಾಯವರೆಗೂ ಮಾರಾಟ ಆಗುತ್ತಿದೆ. ಇನ್ನು ಬಹುತೇಕ ಹಣ್ಣು ತರಕಾರಿಗಳ ಬೆಲೆಯಲ್ಲಿ 10-20 ರೂಪಾಯಿ ಏರಿಕೆ ಮಾಡಿರುವುದು ಕಂಡುಬಂದಿದೆ.
ದೀಪಾವಳಿ ಹಬ್ಬದ ಒಂದು ದಿನ ಮುಂಚೆಯೇ ಭಾನುವಾರ ಜನರು ಖರೀದಿ ಭರಾಟೆಯಲ್ಲಿ ತೊಡಗಿದ್ದಾರೆ. ಬೆಳಗ್ಗೆಯಿಂದಲೇ ನಗರದಾದ್ಯಂತ ವ್ಯಾಪಾರ ಜೋರಾಗಿದೆ. ಮನೆಯ ಅಲಂಕಾರಕ್ಕೆ ಆಕಾಶ ಬುಟ್ಟಿ, ಮಾವಿನ ತೋರಣ, ಹಣತೆ ಹಣ್ಣು-ಹಂಪಲು ಸೇರಿದಂತೆ ಮತ್ತಿತರ ವಸ್ತುಗಳನ್ನು ಕೊಂಡುಕೊಳ್ಳಲು ಮಹಿಳೆಯರು ಆಸಕ್ತಿ ತೋರಿದರೆ, ಪಟಾಕಿಗಳ ಖರೀದಿಯ ಭರಾಟೆಯಲ್ಲಿ ಮಕ್ಕಳು ಯುವಕ-ಯುವತಿಯರು ತೊಡಗಿರುವುದು ಕಂಡುಬಂದಿದೆ.
ಮಳಿಗೆಗಳಿಗೆ ಸುಣ್ಣಬಣ್ಣದ ರಂಗು
ದೀಪಾವಳಿ ಹಬ್ಬಕ್ಕಾಗಿ ವಾರಗಳ ಮೊದಲೇ ತಯಾರಿ ನಡೆಸಲಾಗಿದೆ. ದೊಡ್ಡಿಗಳಿಗೆ, ಮನೆಗೆ ಹಸೆಚಿತ್ರ ಬಿಡಿಸುವುದು, ಮನೆಗಳನ್ನು ಸುಣ್ಣ, ಬಣ್ಣಗಳಿಂದ ಅಲಂಕಾರ ಮಾಡುವ ಪ್ರಕ್ರಿಯೇಗಳು ಮುಗಿದಿದ್ದು, ಇದೀಗ ಅಂತಿಮ ಹಂತದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಲಕ್ಷ್ಮೀ ಪೂಜೆ ದಿನದಂದು ಸೂರ್ಯಗ್ರಹಣ ಬಂದ ಹಿನ್ನೆಲೆಯಲ್ಲಿ ಕೆಲವರು ಮಾರನೆ ದಿನ ವೈದಿಕರನ್ನು ಕರೆಸಿ ಪೂಜೆ, ಧಾರ್ಮಿಕ ಕಾರ್ಯಕ್ರಮ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷ ಮಹಾಮಾರಿ ಕೋವಿಡ್ ಸೋಂಕಿನ ಕಾರಣದಿಂದ ಹಬ್ಬದ ಉತ್ಸಾಹ ಇರಲಿಲ್ಲ. ಆದರೆ ಪ್ರಸಕ್ತ ವರ್ಷ ದೀಪಾವಳಿ ಹಬ್ಬ ಜೋರಾಗಿಯೇ ಆಚರಣೆ ಮಾಡಲಾಗುತ್ತಿದೆ. ವ್ಯಾಪಾರ ವಹಿವಾಟು ನಿರಾತಂಕವಾಗಿ ನಡೆಯುತ್ತಿದೆ. ಜನರು ದೊಡ್ಡ ಪ್ರಮಾಣದಲ್ಲಿ ಹಬ್ಬ ಮಾಡುವ ಉತ್ಸಾಹದಲ್ಲಿಯೇ ಖರೀದಿ ಮಾಡುತ್ತಿದ್ದು, ವ್ಯಾಪಾರ ಕೂಡ ಭರ್ಜರಿಯಾಗಿ ನಡೆಯುತ್ತಿದೆ ಎಂದು ಸ್ಟೇಷನರಿ ಅಂಗಡಿ ವ್ಯಾಪಾರಿ ಸಂಜಯ್ ಹೇಳಿದ್ದಾರೆ.