ಮಾಂಸ ರಫ್ತು ಮಾಡುವುದನ್ನು ನಿಲ್ಲಿಸಿ: ದಯಾನಂದ ಸ್ವಾಮೀಜಿ ಕರೆ
ಕಾರವಾರ, ಮೇ 2 : ಗೋ ಹತ್ಯೆ ಮುಕ್ತ ರಾಷ್ಟ್ರವಾಗಬೇಕಿದ್ದರೆ ಭಾರತದಿಂದ ವಿದೇಶಕ್ಕೆ ಮಾಂಸ ರಫ್ತು ಮಾಡುವುದನ್ನು ನಿಲ್ಲಿಸಲು ಕ್ರಮಕೈಗೊಳ್ಳಬೇಕು. ಓವೈಸಿ, ಅಮಾನುಲ್ಲಾ ಖಾನ್ ನಂಥವರೇ ರಫ್ತನ್ನು ನಿಲ್ಲಿಸಿ ಅನ್ನುತ್ತಿದ್ದರೂ ಪ್ರಧಾನಿ ಮೋದಿಯವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ದೇಶದಲ್ಲಿ ಯಾಂತ್ರಿಕ ಕಸಾಯಿ ಖಾನೆಗಳಿಗೆ ಜಾಗ ನೀಡಬಾರದು. ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಸಹ ಯಾಂತ್ರಿಕ ಕಸಾಯಿ ಖಾನೆ ತೆರೆಯಲು ನಾವು ಬಿಡುವುದಿಲ್ಲ ಎಂದರು.
ಆಧ್ಯಾತ್ಮಿಕವಾಗಿ, ವೈಚಾರಿಕತೆಯತ್ತ ಜನರನ್ನು ಕೊಂಡೊಯ್ಯಬೇಕಿದ್ದ ಮಠ, ಮಂದಿರಗಳಲ್ಲೇ ಮೌಢ್ಯತೆ, ಅಧರ್ಮ, ಹಿಂಸೆಗಳು ನಡೆಯುತ್ತಿರುವುದು ಕಳವಳಕಾರಿ ವಿಚಾರ. ಇದು ಧರ್ಮದ ಅವನತಿಗೆ ಕಾರಣವಾಗಲಿದೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಧಾರ್ಮಿಕ ಜಾತ್ರೆ, ಉತ್ಸವಗಳಲ್ಲೇ ಅತಿ ಹೆಚ್ಚು ಪ್ರಾಣಿಗಳನ್ನು ಬಲಿ ಕೊಡಲಾಗುತ್ತಿದೆ. ರಾಜ್ಯದ ಜಾತ್ರಾ ಪರಿಸರದಲ್ಲಿ ವರ್ಷಕ್ಕೆ ಒಂದೂವರೆ ಕೋಟಿಗೂ ಅಧಿಕ ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

29 ಮಾರ್ಚ್ 2006ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಾಗೂ ರಾಜ್ಯ ಗೋವಧೆ ಪ್ರತಿ ಬಂಧಕ ಕಾಯ್ದೆ 1964ರ ಪ್ರಕಾರ ರಾಜ್ಯದಲ್ಲಿ ಯಾವುದೇ ಗೋವು, ಕರುಗಳನ್ನು ಹತ್ಯೆ ಮಾಡುವ ಹಾಗಿಲ್ಲ. 12 ವರ್ಷ ಮೇಲ್ಪಟ್ಟ ಎತ್ತು, ಹೋರಿ, ಎಮ್ಮೆ, ಕೋಣಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಗಿ ಪಡೆಯದೆ ಹತ್ಯೆ ಮಾಡಿದರೆ ಅದು ಅಪರಾಧವಾಗಿರುತ್ತದೆ ಎಂದು ತಿಳಿಸಿದರು.
ಅಂಕೋಲಾದ ಬಂಡಿಹಬ್ಬದಲ್ಲಿ ಸಾವಿರಾರು ಕೋಳಿ, ಕುರಿಗಳನ್ನು ಬಲಿ ನೀಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಅಲ್ಲಿನ ಶಾಂತದುರ್ಗಾ ದೇವಸ್ಥಾನದ ಸುತ್ತ ಪ್ರಾಣಿ ಬಲಿ ನಿಷೇಧ ವಲಯ ಎಂದು ಜಾರಿ ಮಾಡುವ ಮೂಲಕ ಹತ್ಯೆಗೀಡಾಗುತ್ತಿದ್ದ ಸಾವಿರಾರು ಪ್ರಾಣಿಗಳಿಗೆ ಜೀವ ನೀಡಿದ್ದಾರೆ ಎಂದರು.
ಜಿಲ್ಲೆಯ ಭಟ್ಕಳದಲ್ಲಿ ಬಕ್ರೀದ್ ಆಚರಣೆಯ ವೇಳೆಯೂ ಸಾವಿರಾರು ಒಂಟೆ, ಗೋವುಗಳನ್ನು ಬಲಿ ನೀಡಲಾಗುತ್ತದೆ ಎಂಬ ಮಾಹಿತಿ ಇದೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಡಿಐಜಿಯವರ ಗಮನಕ್ಕೆ ತಂದು ಅವರೊಂದಿಗೆ ಸಭೆ ನಡೆಸಲಿದ್ದೇನೆ. ಅದನ್ನು ತಡೆಯಲು ಯೋಜನೆ ರೂಪಿಸುತ್ತೇವೆ ಎಂದರು.
ಉತ್ತರಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಧಾರ್ಮಿಕ ಸ್ಥಳಗಳಲ್ಲಿ ಪ್ರಾಣಿಬಲಿ ನೀಡಲಾಗುತ್ತಿದೆ. ಈ ಕುರಿತು ಮಾಹಿತಿ ಬಂದಿದೆ. ಸುಪ್ರೀಂ ಕೋರ್ಟ್ ನ ಆದೇಶಗಳು ಎಲ್ಲಿಯೂ ಪಾಲನೆಯಾಗುತ್ತಿಲ್ಲ. ನ್ಯಾಯಾಂಗ ನಿಂದನೆಗೆ ಅಧಿಕಾರಿಗಳು, ಸಾರ್ವಜನಿಕರೇ ಹೊಣೆಯಾಗಿದ್ದಾರೆ. ಪ್ರಾಣಿ ಪ್ರಿಯರು, ಪರಿಸರ ಪ್ರೇಮಿಗಳು ಮತ್ತು ಪ್ರಾಣಿಗಳ ಹಕ್ಕಿನ ಬಗ್ಗೆ ಚಿಂತಿಸುವವರು, ಧರ್ಮ ಗುರುಗಳು ಹಾಗೂ ಇನ್ನಿತರ ಸಂಘಟನೆಯವರು ಒಂದಾಗಿ ಒಂದು ಒಕ್ಕೂಟವನ್ನು ಆಯಾ ಜಿಲ್ಲೆಯಲ್ಲಿ ರಚಿಸಿಕೊಂಡು ಪ್ರಾಣಿ ಬಲಿ ನಡೆಯದಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.












Click it and Unblock the Notifications