ಕೊರೊನಾ ಮದ್ದು ಸಿಂಪಡಣೆ ಸುದ್ದಿ: ಬಾವಿಗೆ ಹೊದಿಕೆ ಹಾಕಿದ ಜನರು
ಕಾರವಾರ, ಮಾರ್ಚ್ 22: ವಿಶ್ವದ ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಂದು ಜನತಾ ಕರ್ಫ್ಯೂವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಆದರೆ, ಇಂದು ಹೆಲಿಕಾಪ್ಟರ್ ಮೂಲಕ ಮದ್ದು ಸಿಂಪಡಣೆ ಮಾಡುತ್ತಾರೆಂದು ತಪ್ಪು ಭಾವಿಸಿ ಹೊನ್ನಾವರ, ಭಟ್ಕಳ ತಾಲ್ಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ರಾತ್ರಿ ತಮ್ಮ ಮನೆಯ ಬಾವಿಗಳಿಗೆ ಬೆಡ್ ಶೀಟ್, ತಾಡಪತ್ರೆಯ ಮೂಲಕ ಮುಚ್ಚಿರುವ ಘಟನೆ ನಡೆದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಣೆ ಮಾಡಿದಾಗಿಂದಲೂ, ಕೆಲವರಲ್ಲಿ ತಪ್ಪು ಕಲ್ಪನೆಗಳು ಮೂಡಿದೆ. ಅನೇಕರು ಹೆಲಿಕಾಪ್ಟರ್ ಮೂಲಕ ಕೊರೊನಾ ವೈರಸ್ ಗೆ ಮದ್ದು ಸಿಂಪಡಣೆ ಮಾಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಟ್ಟ ಪರಿಣಾಮ ಶನಿವಾರ ರಾತ್ರಿ ಜಿಲ್ಲೆಯ ವಿವಿಧೆಡೆ ತಮ್ಮ ತಮ್ಮ ಮನೆಗಳ ಬಾವಿಗಳಿಗೆ ತಾಡಪತ್ರೆ ಹಾಕಿರುವ ಹಾಸ್ಯಾಸ್ಪದ ಘಟನೆ ನಡೆದಿದೆ.
"ಎಲ್ಲಿಯೂ ಕೂಡ ಈ ರೀತಿ ಮದ್ದು ಸಿಂಪಡಣೆ ಮಾಡಲಾಗುತ್ತಿಲ್ಲ. ಇದು ಸುಳ್ಳು ಸುದ್ದಿ. ಇಂಥ ಸುಳ್ಳು ಸುದ್ದಿಗಳನ್ನು ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾಡಳಿತ ತಿಳಿಸಿದೆ.