ಸ್ವಕ್ಷೇತ್ರದಲ್ಲೇ ಮತದಾನದಿಂದ ವಂಚಿತರಾದ ಅಭ್ಯರ್ಥಿಗಳು, ಮತದಾರರು
ಕಾರವಾರ, ಡಿಸೆಂಬರ್ 22: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಗಿರಿ ಗ್ರಾಮ ಪಂಚಾಯತಿಯಲ್ಲಿ ಚುನಾವಣಾಧಿಕಾರಿಗಳ ಸಮರ್ಪಕ ಮಾಹಿತಿ ಕೊರತೆಯಿಂದ ಗೊಂದಲ ಸೃಷ್ಟಿಯಾಗಿದೆ. ತಮ್ಮ ಕ್ಷೇತ್ರದಲ್ಲೇ ಅಭ್ಯರ್ಥಿಗಳು ಹಾಗೂ ಮತದಾರರು ಮತ ಹಾಕದಂತಾಗಿದ್ದು, ಈ ಬಗ್ಗೆ ಇದೀಗ ಮತದಾರರು ತಹಶೀಲ್ದಾರರಿಗೆ ದೂರು ನೀಡಿದ್ದಾರೆ.
ಹಿಂದಿನಿಂದಲೂ ಕುಮಟಾ ತಾಲೂಕಿನ ದೇವಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಗಿರಿ ಮಠ ಒಂದು ವಾರ್ಡ್ ಆಗಿದ್ದು, ಹಾಗೂ ಕಡೇಕೋಡಿ ಹರನೀರ ವಾರ್ಡ್ ಇನ್ನೊಂದು ವಾರ್ಡ್ ಆಗಿತ್ತು. ಆದರೆ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ದೇವಗಿರಿ ಗ್ರಾಮದ ಮತದಾರರನ್ನು ಕಡೇಕೋಡಿ, ಹರನೀರ ಮತದಾರರ ವಾರ್ಡ್ ಗೆ ಸೇರ್ಪಡಿಸಲಾಗಿತ್ತು.
ಆದರೆ 2015ರ ಪಂಚಾಯತಿ ಚುನಾವಣೆಯಲ್ಲಿ ದೇವಗಿರಿ, ಮಠದ ವಾರ್ಡ್ ನಲ್ಲಿ ನಾಲ್ಕು ಜನ ಚುನಾಯಿತರಾಗಿದ್ದರು ಹಾಗೂ ಕಡೇಕೋಡಿ, ಹರನೀರ ವಾರ್ಡ್ ನಿಂದ ಇಬ್ಬರು ಚುನಾಯಿತರಾಗಿದ್ದರು. ಇದು ಅಲ್ಲಿನ ಜನಸಂಖ್ಯೆಯ ಆಧಾರದಲ್ಲಿ ನಡೆಯುತ್ತಿತ್ತು. ಮತದಾರರ ಪಟ್ಟಿ ಪರಿಷ್ಕರಿಸಿ ಚುನಾವಣೆ ಆಗಬೇಕಿತ್ತು.

ಇನ್ನು ಚುನಾವಣಾಧಿಕಾರಿಗಳು ಹೇಳುವಂತೆ 2020ರ ಪಂಚಾಯ್ತಿ ಚುನಾವಣೆಯಲ್ಲಿ 2015ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇರುವಂತೆ ಬೂತ್ ನಲ್ಲಿ ಚುನಾವಣೆ ಇರಲಿದೆ ಎಂದಿದ್ದರು. ಈ ಪ್ರಕಾರವಾಗಿ ಈ ಮೊದಲಿನಂತೆ ದೇವಗಿರಿ, ಮಠದ ವಾರ್ಡ್ ನಲ್ಲಿ ನಾಲ್ಕು ಜನ ಸ್ಪರ್ಧಿಗಳು ಆಯ್ಕೆಗಾಗಿ ಹಾಗೂ ಕಡೇಕೋಡಿ, ಹರನೀರ ವಾರ್ಡ್ ನಲ್ಲಿ ಇಬ್ಬರು ಸ್ಪರ್ಧಿಸಲು ಚುನಾವಣೆ ಸಂದರ್ಭದಲ್ಲಿ ಘೋಷಿಸಲಾಗಿತ್ತು.
ಇದರಂತೆ ದೇವಗಿರಿ ಮತದಾರರು ಮಠ ಗ್ರಾಮದ ಜೊತೆ ಸೇರಿ ನಾಲ್ಕು ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದರು. ಇಂದು ಮತದಾನದ ದಿನ ಮತದಾನಕ್ಕೆ ಬಂದ ದೇವಗಿರಿ ಮತದಾರರ ಹೆಸರುಗಳು ಮಠ ಗ್ರಾಮದ ಹೆಸರಿನಲ್ಲಿ ಇಲ್ಲವಾಗಿದೆ ಹಾಗೂ ಕಡೇಕೋಡಿ, ಹರನೀರ ಗ್ರಾಮದ ಮತದಾರ ಪಟ್ಟಿಯಲ್ಲಿ ಆ ಗ್ರಾಮದ ಮತದಾರರ ಹೆಸರು ಸೇರ್ಪಡೆಯಾಗಿದೆ.
ಇದರಿಂದಾಗಿ ಮಠ ಹಾಗೂ ದೇವಗಿರಿ ವಾರ್ಡ್ ನ ಮತದಾರರು ಹಾಗೂ ಇಲ್ಲಿ ನಿಂತ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಮತದಾನ ಮಾಡದಂತಾಗಿದೆ. ಈ ಕುರಿತು ಚುನಾವಣಾ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಎಲ್ಲಾ ಪ್ರಕ್ರಿಯೆ ಮುಗಿದು ಮತದಾನ ನಡೆದರೂ, ಈ ವಿಷಯವನ್ನು ತಿಳಿಸದೇ ಈಗ ಗೊಂದಲ ಸೃಷ್ಟಿ ಮಾಡಿದ್ದಾರೆಂದು ಮಠ ವಾರ್ಡ್ ಹಾಗೂ ದೇವಗಿರಿ ವಾರ್ಡ್ ನ ಅಭ್ಯರ್ಥಿಗಳು ಹಾಗೂ ಮತದಾರರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಹಿಂದೆ ಚುನಾವಣಾಧಿಕಾರಿಗಳು ಮೌಖಿಕವಾಗಿ ಹೇಳಿದಂದೆ ಹಿಂದಿನಂತೆ ಚುನಾವಣೆ ನಡೆಸಬೇಕು. ಈಗ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಅನ್ಯಾಯವಾಗಿದ್ದು, ಸರಿಪಡಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಮಠ ಹಾಗೂ ದೇವಗಿರಿ ಗ್ರಾಮದ ಜನ ಎಚ್ಚರಿಸಿದ್ದಾರೆ.












Click it and Unblock the Notifications