ಬಿಜೆಪಿ Everywhere, ಕಾಂಗ್ರೆಸ್ Nowhere : ಪ್ರಕಾಶ ಜಾವ್ಡೇಕರ್
ಕಾರವಾರ, ಮಾರ್ಚ್ 3: ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಸರಕಾರ ಕರ್ನಾಟಕದಿಂದ ತೊಲಗಿದೆ. ದೇಶದ ನಕ್ಷೆಯಲ್ಲಿ ಈಗಾಗಲೇ ಬಹುತೇಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಕಾಂಗ್ರೆಸ್ ಪತನ ಹೊಂದಿದೆ. ಬಿಜೆಪಿ Everywhere, ಕಾಂಗ್ರೆಸ್ Nowhere ಎಂಬ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವ್ಡೇಕರ್ ಹೇಳಿದರು.
ಕಾರವಾರದಲ್ಲಿ ಶನಿವಾರ ಬಿಜೆಪಿ ವತಿಯಿಂದ ಜನ ಸುರಕ್ಷಾ ಯಾತ್ರೆಯ ನಿಮಿತ್ತ ಪಾದಯಾತ್ರೆ ಕೈಗೊಂಡು ಅವರು ಮಾತನಾಡಿ, ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ತನ್ನ ಗೆಳೆಯರ ಮೇಲೆಯೇ ಹಲ್ಲೆ ಮಾಡಿದ್ದಾನೆ. ಇದು ಕಾಂಗ್ರೆಸ್ ನ ಅಧಿಕಾರದ ಮದ. ಮತ್ತಿನ್ನೊಬ್ಬ ಕಾಂಗ್ರೆಸ್ ಮುಖಂಡ ಸರಕಾರಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕನ ಹಿಂಬಾಲಕರು ಜನ ಸಾಮಾನ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ಬಿಜೆಪಿಗೆ ಭರ್ಜರಿ ಜಯ, ಯಾವ ರಾಜ್ಯದಲ್ಲಿ ಯಾರ ರಾಜ್ಯಭಾರ?
ಡಿ.ವಿ.ಸದಾನಂದ ಗೌಡ ಅವರಿಂದ ಕುಶಾಲನಗರದಲ್ಲಿ ಜನ ಸುರಕ್ಷಾ ಯಾತ್ರೆಗೆ ಚಾಲನೆ ದೊರೆಯುತ್ತಿದೆ. ಅದು ಅಲ್ಲಿಂದ ಹೊರಟು ಮಂಗಳೂರಿಗೆ ಬರಲಿದೆ. ಕಾರವಾರದಿಂದ ಹೊರಡುವ ಈ ಯಾತ್ರೆಯೂ ಮಂಗಳೂರನ್ನು ಪ್ರವೇಶಿಸಲಿದೆ. ಮಂಗಳೂರಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಭಾಷಣ ನಡೆಸುವ ಮೂಲಕ ಈ ಯಾತ್ರೆ ಸಮಾಪ್ತಿಯಾಗಲಿದೆ. ಇದು ಐತಿಹಾಸಿಕ ಯಾತ್ರೆಯಾಗಿದೆ ಎಂದರು.
ಗೂಂಡಾ ರಾಜ್ಯ ಸೃಷ್ಟಿಸುತ್ತಿರುವ ಕಾಂಗ್ರೆಸ್
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಗೂಂಡಾ ರಾಜ್ಯ ಸೃಷ್ಟಿಸಿದೆ. ರಾಜ್ಯದಲ್ಲಿ ಸರಣಿ ಕೊಲೆಗಳಾಗಿವೆ. ಕಾಂಗ್ರೆಸ್ ಗೂಂಡಾಗಳನ್ನು ಪೋಷಿಸುತ್ತಿದೆ. ಸಜ್ಜನರ ರಕ್ಷಣೆ, ದುರ್ಜನರಿಗೆ ಶಿಕ್ಷೆ ನೀಡುವುದು ಪೊಲೀಸರ ಧ್ಯೇಯದಲ್ಲಿದೆ. ಆದರೆ ಒಲ್ಲಿ ಅದು ಉಲ್ಟಾ ಆಗಿದೆ. ರಾಜ್ಯದಲ್ಲಿ ಗೂಂಡಾಗಳಿಗೆ ಸನ್ಮಾನ, ಸಜ್ಜನರಿಗೆ ಅಪಮಾನ, ಹತ್ಯೆ ಮಾಡಲಾಗುತ್ತಿದೆ ಎಂದು ದೂರಿದರು.
ಕರಾವಳಿಯಲ್ಲಿ ಕಾರ್ಯಕರ್ತರ ಸರಣಿ ಹತ್ಯೆ
ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಹಾಗೂ ಹಿಂದೂಗಳ ಹತ್ಯೆಯಾಗಿದೆ. ಎಲ್ಲರೂ ಹೇಳುವಂತೆ ಪಿಎಫ್ ಐ ಕೇರಳದಿಂದ ಬಂದು ಇಲ್ಲಿ ಹತ್ಯೆ ಮಾಡುತ್ತಿದೆ. ಕಾಂಗ್ರೆಸ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ಕಾನೂನಿನ ಪ್ರಕಾರ ಅವರನ್ನು ಹಿಡಿದು ಶಿಕ್ಷಿಸಬೇಕಿತ್ತು. ಆದರೆ ರಕ್ಚಣೆ ಮಾಡಲಾಗುತ್ತಿದೆ. ಒಂದೂವರೆ ಸಾವಿರ ಆರೋಪಗಳ ಪ್ರಕರಣಗಳಿಂದ ಮುಕ್ತಿ ಮಾಡುತ್ತಿದೆ. ಇದು ಸಿದ್ದರಾಮಯ್ಯರ ಕಾಂಗ್ರೆಸ್ ಸರಕಾರ. ಇದಕ್ಕಾಗಿಯೇ ಜನ ಸುರಕ್ಷಾ ಯಾತ್ರೆಯ ಅಗತ್ಯ ಬಿತ್ತು ಎಂದರು.
ಗೂಂಡಾಗಳಿಗೆ ಕ್ಲೀನ್ ಚಿಟ್
ಪರೇಶ್ ಮೇಸ್ತ ಸೇರಿದಂತೆ ಬಿಜೆಪಿಯ ಅನೇಕ ಕಾರ್ಯಕರ್ತರ ಹತ್ಯೆಯಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಈ ರೀತಿ ಆಗಿರಲಿಲ್ಲ. ಕಾಂಗ್ರೆಸ್ ನಿಂದ ಗೂಂಡಾಗಳನ್ನು ಹಿಡಿಯುವುದಿಲ್ಲ. ಬದಲಾಗಿ ಅವರನ್ನು ನಿರ್ದೋಷಿಯನ್ನಾಗಿ ಕ್ಲೀನ್ ಚಿಟ್ ನೀಡಲಾಗುತ್ತದೆ ಎಂದು ಕಿಡಿ ಕಾರಿದರು.
ಪೊಲೀಸರೇ ಬಚಾವೋ ಅಂತಾರೆ
ಗೂಂಡಾಗಳಿಗೆ ಪೊಲೀಸರ ಹೆದರಿಕೆ ಕೂಡ ಇಲ್ಲದಂತಾಗಿದೆ. ಬೆಂಗಳೂರಿನಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಮನೆಯ ಬಾಗಿಲು ಮರಿದು ಕಳ್ಳತನ ಮಾಡುತ್ತಾರೆ. ಹೀಗಿರುವಾಗ ಜನ ರಕ್ಷಣೆಗೆ ಯಾರ ಹತ್ತಿರ ಹೋಗಬೇಕು? ಮಹಿಳಾ ಪೊಲೀಸರ ಮೇಲೆ ದೌರ್ಜನ್ಯ ಎಸಗುತ್ತಾರೆ. ಪೊಲೀಸರ ರಿವಾಲ್ವರ್ ತೆಗೆದು ಹದರಿಸುತ್ತಾರೆ. ಪೊಲೀಸರೇ ಬಚಾವೋ ಅಂತಾರೆ ಎಂದರು.
ಕಾಂಗ್ರೆಸ್, ಜೆಡಿಎಸ್ ನಲ್ಲಿ ಹಣ, ಕುಟುಂಬ, ಜಾತಿ, ಅಧಿಕಾರದ ರಾಜಕೀಯ
ಕಾಂಗ್ರೆಸ್, ಜೆಡಿಎಸ್ ನಲ್ಲಿ ಹಣ, ಕುಟುಂಬ, ಜಾತಿ, ಅಧಿಕಾರದ ರಾಜಕೀಯ ನಡೆಯುತ್ತದೆ. ಭಿನ್ನಾಭಿಪ್ರಾಯ ಸೃಷ್ಟಿಸಿ ಆಡಳಿತ ನಡೆಸುವುದು ಕಾಂಗ್ರೆಸ್ ನ ಗುಣ. ಇದು ಕಾಂಗ್ರೆಸ್ ನ ಸಂಸ್ಕೃತಿ. ಅವರ ಮಂತ್ರ, ಒಡೆದು ಆಳುವ ನೀತಿ. ನಮ್ಮದು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ರೀತಿ ಎಂದರು.
ಕಷ್ಟಪಟ್ಟು ಸಚಿವರಾದ ಅನಂತಕುಮಾರ್ ಹೆಗಡೆ
ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಬಡ ಬಾಲಕ ಇಂದು ಕಷ್ಟಪಟ್ಟು ಪ್ರಧಾನಮಂತ್ರಿ ಆಗಿದ್ದಾನೆ. ಇದು ಎರಡು ಪಕ್ಷದ ನಡುವಿನ ಯುದ್ಧವಲ್ಲ. ಎರಡು ಸಂಸ್ಕೃತಿಯ ನಡುವಿನ ಸಮರ. ನಮ್ಮಲ್ಲಿ ಪ್ರತಿಭೆ, ಪ್ರಯತ್ನಕ್ಕೆ ಬೆಲೆಯಿದೆ. ಕಷ್ಟಪಟ್ಟು ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾರೆ. ಜನರ ನಡುವೆ ಅವರು ಇದ್ದಿದ್ದರಿಂದ ಅಧಿಕಾರ ಪಡೆದರು ಎಂದರು.
ಕೆರೆಗೆ ಬೆಂಕಿ ಹಚ್ಚಿದ್ದಾರೆ
ಗಾರ್ಡನ್ ಸಿಟಿ ಬೆಂಗಳೂರನ್ನು ಕಾಂಗ್ರೆಸ್ ಗಾರ್ಬೇಜ್ ಸಿಟಿ ಮಾಡಿದೆ. ಅಲ್ಲಿ ಕೆರೆಗಳು ಬೆಂಕಿಯಲ್ಲಿ ಉರಿಯುತ್ತಿವೆ. ಕಾಂಗ್ರೆಸ್ ಸರಕಾರದಲ್ಲಿ ಕೆರೆಗೂ ಬೆಂಕಿ ತಾಗುತ್ತದೆ. ಮಹಿಳೆಯರಿಗೆ ಅಲ್ಲಿ ರಕ್ಷಣೆ ಇಲ್ಲದಂತಾಗಿದೆ. ಇದರಿಂದ ಬೆಂಗಳೂರು ರಕ್ಷಿಸಿ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಹದಿನಾಲ್ಕು ದಿನಗಳವರೆಗೆ ಪ್ರತಿ ಮನೆ ಮನೆಯನ್ನು ಈ ಅಭಿಯಾನ ತಲುಪಲಿದೆ. ದಾವಣಗೆರೆಗೆ ಮೋದಿಯವರು ಬಂದಾಗ ಘೋಷಿಸಿದ್ದ ಮುಷ್ಟಿ ಅಭಿಯಾನ ಸಂಪೂರ್ಣ ಕರ್ನಾಟಕದಲ್ಲಿ ನಡೆಯಲಿದೆ. 3,700 ರೈತರ ಆತ್ಮಹತ್ಯೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಿದೆ. ಇದು ಬಹಳ ಹೀನ ಕೃತ್ಯವಾಗಿದೆ ಎಂದರು.
ಸಿದ್ದರಾಮಯ್ಯನವರೇ ಉತ್ತರ ನೀಡಿ
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಹಿಂದೆಂದೂ ನಡೆದಿರದ ದೊಡ್ಡ ಪ್ರಮಾಣದ ಕ್ರಿಮಿನಲ್ ಚಟುವಟಿಕೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಢಳಿತದಲ್ಲಿ ನಡೆದಿದೆ. ಈ ಹಿಂದೆ ಅನೇಕರು ಮುಖ್ಯಮಂತ್ರಿ ಆಗಿ ಹೋಗಿದ್ದಾರೆ. ಆದರೆ ಈ ಸರಕಾರದ ಅವಧಿಯಲ್ಲಿ ಆದಷ್ಟು ಕೊಲೆ, ಗಲಭೆ, ಅತ್ಯಾಚಾರ ಬೇರಾವ ಸರಕಾರದಲ್ಲೂ ಆಗಿಲ್ಲ. ಅದಕ್ಕೆ ಸಿದ್ದರಾಮಯ್ಯನವರೇ ಉತ್ತರ ನೀಡಬೇಕು ಎಂದರು.
ಒಂದು ತಿಂಗಳು ಆಡಳಿತ ನಡೆಸಲು ಕೂಡ ಸಿದ್ದರಾಮಯ್ಯ ಅರ್ಹರಲ್ಲ
ಮಾತೆತ್ತಿದರೆ ಕರ್ನಾಟಕ ಸರಕಾರ ಸಾಧನಾಮಯಿ ಸರಕಾರ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯನವರು, ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆ, ಕ್ರಿಮಿನಲ್ ಚಟುವಟಿಕೆಗಳಿಗೆ ಯಾರು ಹೊಣೆ ಎಂಬುದಕ್ಕೆ ಉತ್ತರಿಸಬೇಕು. ಇನ್ನೊಂದು ತಿಂಗಳಲ್ಲಿ ಚುನಾವಣೆ ಬರಲಿದೆ. ಈ ಒಂದು ತಿಂಗಳು ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ದರಾಮಯ್ಯ ಲಾಯಕ್ಕಿಲ್ಲ. ಸಿದ್ದರಾಮಯ್ಯನವರೇ ತಕ್ಷಣ ಅಧಿಕಾರದಿಂದ ಕೆಳಗಿಳಿಯಿರಿ ಎಂದರು.
ಮಂಕುಬೂದಿ ಎರಚುತಿದೆ ಕಾಂಗ್ರೆಸ್
ಜನ ಸಮುದಾಯದಲ್ಲಿರುವ ಆಕ್ರೋಶಕ್ಕೆ ಒಂದು ರೂಪ ಕೊಡಲು ಈ ಜನ ಸುರಕ್ಷಾ ಯಾತ್ರೆ ಕೈಗೊಂಡಿದ್ದೇವೆ. ಭಂಡ ಸರಕಾರ ಕಿತ್ತೊಗೆಯಲು ಈ ಯಾತ್ರೆ ಹೊರಟಿದೆ. ಐತಿಹಾಸಿಕ ಭಂಡ ಸಿದ್ದರಾಮಯ್ಯರ ಸರಕಾರ ಜನರ ಮಾನ, ಪ್ರಾಣದ ಪರಿವೇ ಇಲ್ಲದೆ ಮಂಕುಬೂದಿ ಎರಚುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಬೇಕು. ಅದಕ್ಕೆಲ್ಲ ನಾವು ಶ್ರಮಿಸಬೇಕು ಎಂದರು.