ಮಸೀದಿಗೆ ತೆರಳಿ ಪ್ರಾರ್ಥನೆ ವೀಕ್ಷಿಸಿದ ಸ್ವಾಮೀಜಿ: ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಸಹಸ್ರಮಾನೋತ್ಸವ
ಕಾರವಾರ, ಜನವರಿ 6: ಒಂದು ಸಾವಿರ ವರ್ಷಗಳನ್ನು ಪೂರೈಸಿದ ಜಮಾತುಲ್ ಮುಸ್ಲಿಮೀನ್ ಸಂಸ್ಥೆಯ ಸಹಸ್ರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವು ಹಿಂದೂ ಮುಸ್ಲಿಮರ ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೂಡಲಸಂಗಮದ ಬಸವಧರ್ಮಪೀಠದ ಬಸವಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವು ಹಿಂದೂ ಮುಖಂಡರು ಸೌಹಾರ್ದತೆ ಭಾಗವಾಗಿ ಮಸೀದಿಗಳಿಗೆ ಭೇಟಿ ನೀಡಿ ಮುಸ್ಲಿಮರ ಪ್ರಾರ್ಥನೆ ವೀಕ್ಷಿಸಿದರು.
ವ್ಯಾಪಾರಕ್ಕಾಗಿ ಅರಬ್ ದೇಶದಿಂದ ಹಡಗುಗಳ ಮೂಲಕ ಆಗಮಿಸಿದ ಮುಸ್ಲಿಂ ಸಮುದಾಯದವರು ಭಟ್ಕಳದಲ್ಲಿ ನೆಲೆಸಿ ಬಳಿಕ ಆರಂಭಿಸಿದ್ದ ಜಮಾತುಲ್ಲಾ ಮುಸ್ಲಿಮೀನ್ ಭಟ್ಕಳ ಸಂಸ್ಥೆಯೂ ಇದೀಗ ಸಾವಿರ ವರ್ಷ ಪೂರೈಸಿದೆ.
ಕೂಡಲಸಂಗಮದ ಬಸವಧರ್ಮಪೀಠದ ಬಸವಪ್ರಕಾಶ ಸ್ವಾಮೀಜಿ ಭಾಗಿ
ಈ ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣದ ಚಿನ್ನದಪಳ್ಳಿಯ ಮಸೀದಿ ಬಳಿ ಆಯೋಜಿಸಿದ್ದ ಈ ಸಹಸ್ರಮಾನೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳು ಹಾಗೂ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೂಡಲಸಂಗಮದ ಬಸವಧರ್ಮಪೀಠದ ಬಸವಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಜೆ.ಡಿ. ನಾಯ್ಕ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಸಮುದಾಯದವರ ಪ್ರಾರ್ಥನೆ ವೀಕ್ಷಣೆ ನಡೆಸಿದರು.
ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ
ಬಳಿಕ ಮಾತನಾಡಿದ ಸ್ವಾಮೀಜಿ, ದೇಶ ವಿಶ್ವಗುರುವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನು ಕೂಡ ವಿಶ್ವಗುರು ಆಗಿಲ್ಲ. ಹಿಂದೂ ಮುಸ್ಲಿಂ ಸಮುದಾಯದವರು ಸೌಹಾರ್ಧಯುತವಾಗಿ ಬದುಕಿದಾಗ ಅದು ಸಾಧ್ಯವಾಗಲಿದೆ. ರಾಜಕೀಯ ನಾಯಕರುಗಳು ತಮ್ಮ ಲಾಭಕ್ಕೋಸ್ಕರ ಧರ್ಮ ಧರ್ಮಗಳ ನಡುವೆ ಸುಳ್ಳು ಪ್ರಚಾರ ಮಾಡುತ್ತಾರೆ. ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಇದೆಲ್ಲವನ್ನು ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಬೇಕು ಎಂದು ಹೇಳಿದರು.
ಇನ್ನೊಬ್ಬರನ್ನು ಪೀತಿಸಬೇಕು
ಧರ್ಮವನ್ನು ಪ್ರೀತಿ ಮಾಡಬೇಕು. ಜೊತೆಗೆ ಇನ್ನೊಬ್ಬರನ್ನು ಪೀತಿಸಬೇಕು. ಕಾಣದ ದೇವರನ್ನು ಪ್ರೀತಿಸುವ ಮೊದಲು ಕಾಣುವ ಮನಸ್ಸರನ್ನು ಪ್ರೀತಿಸಬೇಕಾಗಿದೆ. ನಮ್ಮೆಲ್ಲರ ಮೈಯಲ್ಲಿ ಹರಿಯುವುದು ಒಂದೇ ರಕ್ತ ಎಂಬುದನ್ನು ನಾವೆಲ್ಲರು ತಿಳಿದುಕೊಳ್ಳಬೇಕು. ನಾವೆಲ್ಲರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೀಡಿರುವ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರಿಗೆ ಕಿವಿ ಮಾತು ಹೇಳಿದರು.
ಮುಸ್ಲಿಂ, ಕ್ರಿಶ್ಚಿಯನ್ ಭಾರತದ ದತ್ತು ಪುತ್ರರು
ಇನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲವನ್ನು ನಮ್ಮ ಮನೆಯಲ್ಲಿ ಮನಸ್ಸಿನಲ್ಲಿ ಇಟ್ಟುಕೊಂಡು ಹೊರಗಡೆ ಬಂದಾಗ ನಾವೆಲ್ಲರೂ ಭಾರತೀಯರು ಎಂದು ತಿಳಿಯಬೇಕಾಗಿದೆ. ಹಿಂದೂ, ಮುಸ್ಲಿಮರು ದ್ವೇಷ ಬಿಟ್ಟು ಸಹಬಾಳ್ವೆಯಿಂದ ಬದುಕಿದಾಗ ಭಾರತಾಂಭೆ ಕೂಡ ಸುಖವಾಗಿ ಇರುತ್ತಾಳೆ. ಮುಸ್ಲಿಂ, ಕ್ರಿಶ್ಚಿಯನ್ ಭಾರತದ ದತ್ತು ಪುತ್ರರಾಗಿದ್ದು, ಅವರೆಲ್ಲರೂ ನಮ್ಮ ಸಹೋದರರಾಗಿದ್ದಾರೆ ಎಂದು ಹೇಳಿದರು.