ರಾಜ್ಯದ 122 ಆಸ್ಪತ್ರೆಗಳ ಡಯಾಲಿಸಿಸ್ ಘಟಕ ಮುಚ್ಚುವ ಆತಂಕ!
ಕಾರವಾರ, ಮೇ 20: ಬಿಆರ್ಎಸ್ ಹೆಲ್ತ್ ಎಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನಡೆಸುತ್ತಿರುವ ಉತ್ತರ ಕನ್ನಡ ಜಿಲ್ಲೆಯನ್ನೂ ಸೇರಿದಂತೆ ರಾಜ್ಯದ 27 ಜಿಲ್ಲೆಗಳ 122 ಆಸ್ಪತ್ರೆಗಳ ಡಯಾಲಿಸಿಸ್ ಘಟಕಗಳು ಶೀಘ್ರವೇ ಮುಚ್ಚುವ ಆತಂಕ ಎದುರಾಗಿದ್ದು, ಇದು ಡಯಾಲಿಸಿಸ್ ರೋಗಿಗಳಿಗೆ ಜೀವ ಭಯ ಹೆಚ್ಚಾಗುವಂತೆ ಮಾಡಿದೆ.
ಅನಿವಾಸಿ ಉದ್ಯಮಿ ಬಿ.ಆರ್ ಶೆಟ್ಟಿ ಒಡೆತನದ ಬಿಆರ್ಎಸ್ ಹೆಲ್ತ್ ಎಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕವನ್ನು ಕಳೆದ ಅನೇಕ ವರ್ಷಗಳಿಂದ ನಿರ್ವಹಣೆ ಮಾಡುತ್ತಿದೆ. ಇದು ಬಡ ಡಯಾಲಿಸಿಸ್ ರೋಗಿಗಳಿಗೆ ವರದಾನವಾಗಿತ್ತು.
ಸಿಬ್ಬಂದಿಗೆ ವೇತನ ಪಾವತಿಯಾಗುತ್ತಿಲ್ಲ
ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಅತಿ ದುಬಾರಿಯಾಗಿದ್ದು, ಬಿಆರ್ಎಸ್ನ ಸಹಕಾರದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಸಿಗುತ್ತಿದ್ದ ಈ ಸೌಲಭ್ಯವು ಕಿಡ್ನಿ ವೈಫಲ್ಯದಿಂದ ಸಾವು- ಬದುಕಿನ ನಡುವೆ ಸಂಕಷ್ಟ ಅನುಭವಿಸುತ್ತಿರುವವರಿಗೆ ಸಂಜೀವಿನಿಯಾಗಿತ್ತು. ಆದರೆ ಇದೀಗ ರಾಜ್ಯದ ಬಹುತೇಕ ಸರ್ಕಾರಿ ಡಯಾಲಿಸಿಸ್ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಉತ್ತರ ಕನ್ನಡ ಜಿಲ್ಲೆಯ 12 ತಾಲೂಕು ಆಸ್ಪತ್ರೆಗಳಲ್ಲೂ ಡಯಾಲಿಸಿಸ್ ಘಟಕಗಳಿದ್ದು, ಇವುಗಳನ್ನು ಬಿಆರ್ಎಸ್ ಸಂಸ್ಥೆಯೇ ನಿರ್ವಹಣೆ ಮಾಡುತ್ತಿವೆ. ಆದರೆ ಜೊಯಿಡಾದಲ್ಲಿ ಮಾತ್ರ ರೋಗಿಗಳೇ ಬರದೇ ಘಟಕವನ್ನು ಮುಚ್ಚಲಾಗಿದ್ದು, ಇನ್ನುಳಿದ ಘಟಕಗಳಲ್ಲಿ ರೋಗಿಗಳಿದ್ದರೂ ಘಟಕ ಕಾರ್ಯನಿರ್ವಹಿಸದ ಪರಿಸ್ಥತಿ ಉದ್ಭವವಾಗಿದೆ. ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಯಾಗುತ್ತಿಲ್ಲ. ಆದರೂ ಸಿಬ್ಬಂದಿ ಇಂದೋ ನಾಳೆಯೋ ವೇತನ ಬರುವುದೆಂದು ಕರ್ತವ್ಯ ಮುಂದುವರಿಸಿದರೆ, ಡಯಾಲಿಸಿಸ್ಗೆ ಬೇಕಾದ ಅಗತ್ಯ ಪರಿಕರಗಳ ಕೊರತೆ ಎದುರಾಗಿದೆ.
400ಕ್ಕೂ ಹೆಚ್ಚು ರೋಗಿಗಳು ಪ್ರತಿದಿನ ಡಯಾಲಿಸಿಸ್
ಡಯಾಲೈಸರ್ ಅನ್ನು ಸ್ವಚ್ಛಗೊಳಿಸಲು ಬೇಕಾದ ಹೈಡ್ರೋಜನ್ ಪ್ಯಾರಾಕ್ಸೆಡ್, ಔಷಧಿ, ಕಿಟ್ಗಳನ್ನು ಘಟಕಗಳಿಗೆ ಪೂರೈಕೆ ಮಾಡುವುದನ್ನು ಬಿಆರ್ಎಸ್ ಕೆಲವು ತಿಂಗಳಿನಿಂದ ಸ್ಥಗಿತಗೊಳಿಸಿಬಿಟ್ಟಿದೆ. ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ರೋಗಿಗಳು ಪ್ರತಿದಿನ ಡಯಾಲಿಸಿಸ್ ಮಾಡಿಕೊಳ್ಳುವವರಿದ್ದಾರೆ. ಆದರೀಗ ಇವರ ಪಾಡು ದೇವರೇ ಬಲ್ಲ ಎನ್ನುವ ಸ್ಥಿತಿ ಉದ್ಭವಿಸಿದೆ. ಪ್ರಸ್ತುತ ಜಿಲ್ಲೆಯ ಕೆಲ ಡಯಾಲಿಸಿಸ್ ಘಟಕಗಳು ಒಂದೆರಡು ದಿನ ಕಾರ್ಯನಿರ್ವಹಿಸಬಲ್ಲ ಪರಿಕರಗಳು, ಸಾಮರ್ಥ್ಯವನ್ನಷ್ಟೇ ಹೊಂದಿದ್ದು, ಕಿಡ್ನಿ ವೈಫಲ್ಯಗೊಂಡವರ ಮುಂದಿನ ಪರಿಸ್ಥಿತಿ ಏನು ಎಂಬುವುದೇ ಇಲ್ಲಿ ಊಹಿಸಿಕೊಳ್ಳಲು ಕಷ್ಟಕರವಾಗಿದೆ.
ಕೋಟಿಗಟ್ಟಲೆ ಬಾಕಿ ಇಟ್ಟುಕೊಂಡಿರುವ ಸರ್ಕಾರ
ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಬಿಆರ್ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ಗೆ ಸುಮಾರು 28 ಕೋಟಿ ರೂಪಾಯಿಗೂ ಅಧಿಕ ಪಾವತಿಯನ್ನು ಬಾಕಿ ಇಟ್ಟುಕೊಂಡಿದೆ ಎನ್ನುತ್ತವೆ ಸಂಸ್ಥೆಯ ಮೂಲಗಳು. ಕನಿಷ್ಠ ಪ್ರಮಾಣದ ರೋಗಿಗಳು ಬರುವ ಚಿಕ್ಕ ಡಯಾಲಿಸಿಸ್ ಘಟಕದ ನಿರ್ವಹಣೆಗೂ ಪ್ರತಿ ತಿಂಗಳು ಸುಮಾರು ಒಂದು ಲಕ್ಷ ರೂಪಾಯಿಗೂ ಅಧಿಕ ವೆಚ್ಚ ತಗುಲುತ್ತದೆ. ಹೀಗಾಗಿ ಅಗತ್ಯ ಉಪಕರಣಗಳನ್ನು ಖರೀದಿ ಮಾಡಲೂ ಸಂಸ್ಥೆಗೆ ಹಣಕಾಸಿನ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಈಗಾಗಲೇ ಬಿ.ಆರ್ ಶೆಟ್ಟಿ ಒಡೆತನದ ಬಹುತೇಕ ಕಂಪನಿಗಳು ನಷ್ಟದಲ್ಲಿದ್ದು, ಪ್ರಸ್ತುತ ಸರ್ಕಾರ ಬಾಕಿ ಉಳಿಸಿಕೊಂಡಿರುವುದನ್ನು ಶೀಘ್ರ ಪಾವತಿ ಮಾಡದಿದ್ದಲ್ಲಿ ರಾಜ್ಯದ ಎಲ್ಲಾ ಡಯಾಲಿಸಿಸ್ಗಳ ನಿರ್ವಹಣಾ ಜವಾಬ್ದಾರಿಯನ್ನು ಬಿಆರ್ಎಸ್ ಸರ್ಕಾರಕ್ಕೊಪ್ಪಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಶೀಘ್ರ ಆರೋಗ್ಯ ಸಚಿವರ ಗಮನಕ್ಕೆ
ಏಕಾಏಕಿ ಡಯಾಲಿಸಿಸ್ ಕೇಂದ್ರಗಳನ್ನು ಮುಚ್ಚುವುದು ಸರ್ಕಾರದ ಒಳ್ಳೆಯ ಕ್ರಮವಲ್ಲ. ಜನರ ಪ್ರಾಣದ ಜೊತೆ ಸರ್ಕಾರ ಚೆಲ್ಲಾಡವಾಡುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಸರ್ಕಾರ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡು, ಕಿಡ್ನಿ ವೈಫಲ್ಯದ ರೋಗಿಗಳ ಸಂಜೀವಿನಿಯಾಗಿರುವ ಡಯಾಲಿಸಿಸ್ ಘಟಕಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಿದೆ ಎಂದು ಕಾರವಾರದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಕಾರ್ಮಿಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದು, ಮಂಗಳವಾರ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಆರ್ಎಸ್ ನಡುವೆ ಚರ್ಚೆ ನಡೆದಿದೆ. ನಮ್ಮ ಜಿಲ್ಲೆಯ ಡಯಾಲಿಸಿಸ್ ಘಟಕಗಳಲ್ಲಿ ಸಮಸ್ಯೆ ಇರುವ ಬಗ್ಗೆ ನಾನು ಕೂಡ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೆ. ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ ಎಂದಿದ್ದಾರೆ.
Recommended Video