ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ 2 ತಿಂಗಳು ನಿಷೇಧ
ಕಾರವಾರ, ಜೂನ್ 01; ದೇಶದ ಕರಾವಳಿಯಾದ್ಯಂತ ಎರಡು ತಿಂಗಳು ಆಳ ಸಮುದ್ರದ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಕೋವಿಡ್, ಪ್ರವಾಹ, ಹವಮಾನ ವೈಪರಿತ್ಯ ಹೀಗೆ ನಾನಾ ಕಾರಣದಿಂದ ಕಳೆದ ಕೆಲ ವರ್ಷದಿಂದ ಕುಂಠಿತಗೊಂಡಿದ್ದ ಮೀನುಗಾರಿಕೆ ಈ ಬಾರಿ ಕೊಂಚ ಸುಧಾರಿಸಿಕೊಂಡಿದ್ದು, ಕಳೆದ ವರ್ಷಕ್ಕಿಂತ 14,466 ಮೆಟ್ರಿಕ್ ಟನ್ ಮೀನು ಉತ್ಪಾದನೆ ಹೆಚ್ಚಳವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪರ್ಸಿಯನ್, ಟ್ರಾಲರ್, ಆಳ ಸಮುದ್ರದ ಟ್ರಾಲರ್ ದೋಣಿಗಳು ಸೇರಿದಂತೆ ಒಟ್ಟು 3 ಸಾವಿರಕ್ಕೂ ಹೆಚ್ಚು ಯಾಂತ್ರೀಕೃತ ಬೋಟ್ಗಳಿವೆ. ಈ ಬಾರಿ ಹಂಗಾಮಿನಲ್ಲಿ ಆರಂಭದಿಂದಲೂ ಬಹುತೇಕ ಉತ್ತಮ ಮೀನುಗಾರಿಕೆ ನಡೆದಿದ್ದು, ಒಟ್ಟು 1,17,266 ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗಿದೆ.
2020-21ರಲ್ಲಿ 1,02,800 ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗಿತ್ತಾದರೂ ಈ ಬಾರಿ 14,446 ಮೆಟ್ರಿಕ್ ಟನ್ ಹೆಚ್ಚು ಉತ್ಪಾದನೆಯಾಗಿದೆ. ಇನ್ನು 2018-19 ರಲ್ಲಿ 10.85 ಮೆಟ್ರಿಕ್ ಟನ್, 2019-20ರಲ್ಲಿ 10.19 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು.
ಕಳೆದ ಮೂರು ವರ್ಷಗಳಿಂದ ಕೊರೊನಾ, ಹವಮಾನ ವೈಪರಿತ್ಯ, ಚಂಡಮಾರುತಗಳಿಂದಾಗಿ ಮೀನುಗಾರರಿಗೆ ಸರಿಯಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗಿರಲಿಲ್ಲ. 10 ತಿಂಗಳ ಮೀನುಗಾರಿಕಾ ಅವಧಿಯಲ್ಲಿ ಬಂದರಿನಲ್ಲಿಯೇ ಹತ್ತಾರು ಬಾರಿ ಲಂಗರು ಹಾಕುವಂತಾಗಿತ್ತು. ಇದರಿಂದಲೇ ಮೀನು ಹಿಡುವಳಿಯಲ್ಲಿಯೂ ಕುಂಠಿತಗೊಳ್ಳುವಂತಾಗಿತ್ತು. ಆದರೆ ಈ ಬಾರಿ ಮೀನುಗಾರಿಕೆಗೆ ಅನುಕೂಲಕರ ವಾತಾವರಣ ಇದ್ದ ಕಾರಣ ಮೀನಿನ ಹಿಡುವಳಿ ಕೂಡ ಹೆಚ್ಚಳವಾಗಿದೆ.

ಹಿಡುವಳಿ ಹೆಚ್ಚಳವಾದರೂ ಸಿಗದ ಲಾಭ
"ಕಳೆದ ಬಾರಿಗಿಂತ ಈ ಬಾರಿ ಮೀನುಗಾರಿಕೆ ಉತ್ತಮವಾಗಿದೆಯಾದರೂ ಕೂಡ ಇದರಿಂದ ಮೀನುಗಾರರಿಗೆ ಮಾತ್ರ ಲಾಭವಾಗಿಲ್ಲ. ಈ ಹಿಂದೆ 60-70 ರೂಪಾಯಿಗೆ ಡಿಸೇಲ್ ಇದೀಗ 100ರ ಗಡಿ ದಾಟಿದೆ. ಈ ಬಾರಿ ಎಷ್ಟೇ ಮೀನುಗಾರಿಕೆ ಹೆಚ್ಚಾದರೂ ಅದು ಡಿಸೇಲ್ ದರದಿಂದಾಗಿ ಮೀನುಗಾರರ ಕೈ ಸೇರದಂತಾಗಿದೆ. ಅಲ್ಲದೆ ಸರ್ಕಾರ ಈ ಹಿಂದೆ ಮಷೀನ್ ಖರೀದಿ ವೇಳೆ ಸಬ್ಸಿಡಿ ನೀಡುತಿತ್ತು. ಆದರೆ ಇದೀಗ ಎಲ್ಲವನ್ನು ನಿಲ್ಲಿಸಿದೆ ಇದರಿಂದ ಬೋಟ್ ಮಾಲಿಕರಿಗೆ ಮೀನು ನಡೆಸುವುದೇ ಕಷ್ಟ ಸಾಧ್ಯವಾಗಿದೆ" ಎಂದು ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಹೇಳಿದ್ದಾರೆ.

ಲಂಗರು ಹಾಕಿದ ಬೋಟ್ಗಳು
ಪ್ರತಿ ವರ್ಷ ಜೂನ್-ಜುಲೈ ತಿಂಗಳ ಮಳೆಗಾಲದ ಪ್ರಾರಂಭದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಕಾರಣ ಮೀನುಗಾರಿಕೆ ಸ್ಥಗಿತಗೊಳಿಸಲಾಗುತ್ತದೆ. ಅದರಂತೆ ಕರಾವಳಿಯಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ಬುಧವಾರದಿಂದ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿ ಬಹುತೇಕ ಬೋಟ್ಗಳು ಒಂದು ತಿಂಗಳ ಮೊದಲೇ ದಡ ಸೇರಿದ್ದು, ಇದೀಗ ಅಳಿದುಳಿದು ಬೋಟ್ಗಳು ಕೂಡ ದಡಕ್ಕೆ ಆಗಮಿಸಿ ಲಂಗರು ಹಾಕುತ್ತಿವೆ. ಹೀಗೆ ಲಂಗರು ಹಾಕಿದ ಬೋಟ್ ಹಾಗೂ ಬಲೆಗಳನ್ನು ಇದೀಗ ಹೊರತೆದು ಸ್ವಚ್ಚಗೊಳಿಸಲಾಗುತ್ತಿದೆ.

ಊರು ಕಡೆ ಹೊರಟ ಕಾರ್ಮಿಕರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರ ಪೈಕಿ ಬಹುತೇಕರು ಒಡಿಶಾ, ಬಿಹಾರ್, ಛತ್ತೀಸ್ಗಢ, ಜಾರ್ಖಂಡ್ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರಾಗಿದ್ದಾರೆ. ಎರಡು ತಿಂಗಳು ಮೀನುಗಾರಿಕೆ ನಿಷೇಧ ಇರುವ ಹಿನ್ನಲೆಯಲ್ಲಿ ಎಲ್ಲರೂ ಊರ ಕಡೆ ಪಯಣ ಬೆಳೆಸಲಾರಂಭಿಸಿದ್ದು, ಆಗಸ್ಟ್ ವೇಳೆಗೆ ಮರಳಲಿದ್ದಾರೆ.

ಮುಂಗಾರು ಆಗಮನ ನಿರೀಕ್ಷೆ
ನೈಋತ್ಯ ಮುಂಗಾರು ಈಗಾಗಲೇ ಕೇರಳಕ್ಕೆ ಆಗಮಿಸಿದೆ. ಜೂನ್ 2ರಂದು ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆ ಇದೆ. ಮುಂಗಾರು ಮಾರುತಗಳ ಪ್ರಭಾವದಿಂದ ವಾಡಿಕೆಯಂತೆ ಸೆಪ್ಟೆಂಬರ್ ತನಕ ಮಳೆಯಾಗಲಿದೆ. ಮಳೆಗಾಲದ ಎರಡು ತಿಂಗಳು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಗೆಕೆ ನಿಷೇಧ ಹೇರಲಾಗಿರುತ್ತದೆ.












Click it and Unblock the Notifications