ವೇದಿಕೆಯಲ್ಲಿ ಟಿಪ್ಪು ಚರಿತ್ರೆ ಬಿಚ್ಚಿಡುವೆ : ಅನಂತ್ ಕುಮಾರ್ ಹೆಗಡೆ
ಕಾರವಾರ, ಅಕ್ಟೋಬರ್ 22 : 'ನನ್ನ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಸೇರಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರುವ ವೇದಿಕೆಯಲ್ಲಿಯೇ ಟಿಪ್ಪು ಇತಿಹಾಸವನ್ನು ಎಳೆ-ಎಳೆಯಾಗಿ ಬಿಚ್ಚಿಡುತ್ತೇನೆ. ತಾಕತ್ತಿದ್ದರೆ ಮುಖ್ಯಮಂತ್ರಿಗಳು ತಡೆಯಲಿ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸವಾಲು ಹಾಕಿದ್ದಾರೆ.
ಶಿರಸಿಯಲ್ಲಿ ಶನಿವಾರ ಮಾತನಾಡಿದ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ, 'ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಸೇರಿಸುವುದು ಬೇಡ ಎಂದು ನಾನೇ ಹೇಳಿರುವುದರಿಂದ ಸರ್ಕಾರ ನನ್ನ ಹೆಸರು ಸೇರಿಸಲೇ ಬೇಕು ಎಂದೇನಿಲ್ಲ. ಆದರೆ, ರಾಜ್ಯ ಸರ್ಕಾರ ನನ್ನ ಹೆಸರನ್ನು ಸೇರಿಸಿದಲ್ಲಿ ಆ ಕಾರ್ಯಕ್ರಮಕ್ಕೆ ಖುದ್ದಾಗಿ ಹೋಗುತ್ತೇನೆ. ವೇದಿಕೆಯಲ್ಲಿಯೇ ಟಿಪ್ಪು ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು, ಧಿಕ್ಕಾರ ಕೂಗುತ್ತೇನೆ' ಎಂದು ಹೇಳಿದ್ದಾರೆ.
ಅತ್ಯಾಚಾರಿ ವ್ಯಕ್ತಿಯ ಪೂಜೆಗೆ ನನ್ನನ್ನು ಆಹ್ವಾನಿಸಬೇಡಿ: ಸಚಿವ ಹೆಗಡೆ
'ಒಬ್ಬ ಸಚಿವರಾಗಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ರಾಜಕೀಯವಾಗಿ ಟಿಪ್ಪು ಅವರನ್ನು ವಿರೋಧ ಮಾಡುವುದಕ್ಕೂ ಮುನ್ನ ಅವರ ಬಗ್ಗೆ ಸರಿಯಾಗಿ ಓದಿಕೊಳ್ಳಬೇಕಿದೆ. ಟಿಪ್ಪು ನಿಜವಾಗಿಯೂ ಮೊದಲ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು' ಎಂದ ಸಿಎಂ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದರು.