ಕಾರವಾರ; ಕೊರೊನಾ ಗೆದ್ದು, ಮೂರ್ಛೆ ರೋಗದಿಂದಲೂ ಪಾರಾದ 5 ತಿಂಗಳ ಮಗು
ಕಾರವಾರ, ಮೇ 29: ಕೊರೊನಾ ವೈರಸ್ ನಿಂದಾಗಿ ದೇಶದ ವಿವಿಧೆಡೆ ಸಾವು- ನೋವುಗಳು ಸಂಭವಿಸಿವೆ. ರಾಜ್ಯದಲ್ಲೂ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಐದು ತಿಂಗಳ ಮಗು ಕೊರೊನಾ ಸೋಂಕಿನಿಂದ ಮುಕ್ತಿ ಪಡೆದಿರುವುದಲ್ಲದೇ ಮೂರ್ಛೆ ರೋಗದಿಂದಲೂ ಹೊರಬಂದಿದೆ.
Recommended Video
ಐದು ತಿಂಗಳ ಮಗು ಅತಿ ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಗೆದ್ದು ಬಂದಿದೆ. ಇದರೊಂದಿಗೆ, ಮಗುವಿಗಿದ್ದ ಮೂರ್ಛೆ ರೋಗವನ್ನೂ ಗುಣಪಡಿಸುವಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿದ್ದು, ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೊನಾ ಗುಣಮುಖ ಕಿರಿಯರಲ್ಲಿ ಈ ಮಗುವೂ ಒಂದು
ಜಿಲ್ಲೆಯ ಮಟ್ಟಿಗೆ, ವೈದ್ಯಲೋಕದ ಪಾಲಿಗೆ ಇದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಇದೀಗ ಕೊರೊನಾ ವೈರಸ್ ನಿಂದ ಗುಣಮುಖರಾದ ರಾಜ್ಯದ ಅತಿ ಕಿರಿಯರ ಸಾಲಿನಲ್ಲಿ ಈ ಐದು ತಿಂಗಳ ಮಗು ಸೇರ್ಪಡೆಯಾಗಿದೆ. ಇದು ಕೊರೊನಾ ವಿರುದ್ಧ ಹೋರಾಡುತ್ತಿರುವ ಇತರೆ ರೋಗಿಗಳು ಹಾಗೂ ಆರೋಗ್ಯ ಸಿಬ್ಬಂದಿಗೆ ಹೊಸ ಹುರುಪು ಹಾಗೂ ನಿರೀಕ್ಷೆಯನ್ನು ತುಂಬಿದೆ.

ಮಗುವಿನ ಚಿಕಿತ್ಸೆಗೆ ಹೋದಾಗಲೇ ಸೋಂಕು
ಮಗು ಜನಿಸಿ ಒಂದು ತಿಂಗಳಾಗುತ್ತಿದ್ದಂತೆ ಮೂರ್ಛೆ ರೋಗ ಕಂಡುಬಂದಿತ್ತು. ಇದಕ್ಕಾಗಿ ಚಿಕಿತ್ಸೆ ಕೊಡಿಸಲೆಂದು ಪೋಷಕರು ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಮಂಗಳೂರು ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಯಲ್ಲಿ ಮಂಗಳೂರಿನ ಕೆಲವು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದಿದ್ದ ಕಾರಣಕ್ಕೆ, ಅಲ್ಲಿಂದ ವಾಪಸ್ಸಾಗಿದ್ದ ಮಗುವಿನ ಪಾಲಕರು ಸೋಂಕು ಹರಡುವಿಕೆಗೆ ಮಾಧ್ಯಮವಾಗಿದ್ದರು. ಆದರೆ, ಅವರಿಗೆ ಸೋಂಕು ಖಚಿತವಾಗುವ ಮೊದಲೇ ಮನೆಯಲ್ಲಿದ್ದ 18 ವರ್ಷದ ಯುವತಿಗೆ ಸೋಂಕು ತಗುಲಿರುವುದು ಪರೀಕ್ಷೆಯ ವೇಳೆ ದೃಢಪಟ್ಟಿತ್ತು. ನಂತರದಲ್ಲಿ, ಮೇ 8ರಂದು ಮಗು ಮತ್ತು ಪಾಲಕರಿಗೆ ಸೋಂಕು ದೃಢಪಟ್ಟಿತ್ತು.

ಕೊರೊನಾ ಜೊತೆ ಮೂರ್ಛೆ ರೋಗಕ್ಕೂ ಚಿಕಿತ್ಸೆ
ಈ ಎಲ್ಲರನ್ನೂ ಕ್ರಿಮ್ಸ್ ಕೋವಿಡ್- 19 ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅದರಂತೆ ಮೇ 23ರಂದು ಮಗುವಿನ ತಂದೆ- ತಾಯಿ ಸೋಂಕಿನಿಂದ ಗುಣಮುಖರಾಗಿದ್ದರು. ಆದರೆ, ಸೋಂಕು ತಗುಲಿದ್ದ ಮಗುವಿಗೆ ವೈದ್ಯರು ಪರೀಕ್ಷಿಸಿದಾಗ ಮಗುವಿನ ಮೆದುಳಿನಲ್ಲಿ ‘ಪೊರೆನ್ಸಿಫೆಲಿಕ್ ಸಿಸ್ಟ್' ಇದ್ದು, ಇದು ಮಗುವಿನ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂಬುದನ್ನು ಕಂಡುಕೊಂಡಿದ್ದರು. ಅಲ್ಲದೇ, ಮಗುವಿಗೆ ಮೂರ್ಛೆ ರೋಗದ ಔಷಧಿ ನೀಡಿದ್ದರೂ ರೋಗ ಲಕ್ಷಣಗಳು ಕಡಿಮೆಯಾಗಿರಲಿಲ್ಲ. ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ವಿಶ್ವನಾಥ, ಡಾ.ಸೋನಿಯಾ ಹಾಗೂ ಡಾ.ಪ್ರವೀಣ ಅವರ ತಂಡ ಒಟ್ಟು 19 ದಿನಗಳವರೆಗೆ ಮಗುವಿನ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಂಡು ಚಿಕಿತ್ಸೆ ನೀಡಿದ್ದರು.

ವೈದ್ಯಕೀಯ ತಂಡಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ
ಮಗು ಇದೀಗ ಕೊರೊನಾದ ಜೊತೆ ಜೊತೆಗೆ ಮೂರ್ಛೆ ರೋಗದಿಂದಲೂ ಸಂಪೂರ್ಣವಾಗಿ ಗುಣಮುಖವಾಗಿದೆ. ಹೀಗಾಗಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮಗುವಿಗಾಗಿ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದ, ಸೋಂಕಿನಿಂದ ಮುಕ್ತರಾಗಿದ್ದ ತಂದೆ- ತಾಯಿ, ಮಗುವನ್ನು ಎತ್ತಿಕೊಂಡು ಆಸ್ಪತ್ರೆ ಬಿಟ್ಟು ತೆರಳುವಾಗ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಇಂದು ಐದು ತಿಂಗಳ ಹಾಗೂ ಎರಡು ವರ್ಷದ ಹೆಣ್ಣು ಮಗು ಮತ್ತು 73 ವರ್ಷದ ವೃದ್ಧೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೊರೊನಾ ಹಾಗೂ ಮೂರ್ಛೆ ರೋಗಕ್ಕೆ ತುತ್ತಾಗಿದ್ದ ಐದು ತಿಂಗಳು ಮಗು ಎರಡರಿಂದಲೂ ಗುಣಮುಖವಾಗಿರುವುದು ಹೆಮ್ಮೆಯ ವಿಚಾರ. ಇದಕ್ಕೆ ವೈದ್ಯರ ತಂಡದ ಪರಿಶ್ರಮವೇ ಕಾರಣ. ಕೊರೊನಾ ಸೋಂಕಿತರಾದ ಕಾರಣಕ್ಕೆ ಯಾರೂ ಖಿನ್ನತೆಗೆ ಒಳಗಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications